ಓರ್ವ ವ್ಯಕ್ತಿಗೆ ಪ್ರತಿ ದಿನದ ಸಮಯ ಕಳೆಯುವುದೆ ಬಳ ಬೇಸರದ ಸಂಗತಿಯಾಗಿತ್ತು. ಆತನಿಗೆ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಆಸಕ್ತಿಯೇ ಇರಲಿಲ್ಲ. ಅವನಿಗೆ ಪ್ರತಿದಿನವೂ ಬಹುದೀರ್ಘವಿದ್ದಂತೆ ಭಾಸವಾಗುತ್ತಿತ್ತು. ಯಾವಾಗಲೂ ಕಚೇರಿಗೆ ಹಾಜರಾಗುವುದು, ಸುಮ್ಮನೆ ಕುಳಿತುಕೊಂಡು ಇತರರಿಂದ ಗೌರವವನ್ನು ಸ್ವೀಕರಿಸುವುದು. ಇಂತಹ ರೂಢಿಯ ಕೆಲಸಗಳಿಂದ ಆತನಿಗೆ ಜುಗುಪ್ಸೆ ಉಂಟಾಗಲಾರಂಭಿಸಿತ್ತು. ಇದರಿಂದ ಬೇಸತ್ತ ಆತ ಝೆನ್ ಗುರು ಟಾಕುಅನ್ ಬಳಿ ಪ್ರತಿದಿನದ ಸಮಯವನ್ನು ಹೇಗೆ ಕಳೆಯಬಹುದು ಎಂದು ಸಲಹೆಯನ್ನು ಪಡೆಯಲು ಬಂದನು.
ಅವನ ಸಮಸ್ಯೆಯನ್ನು ಕೇಳಿ ಝೆನ್ ಗುರುಗಳು ಒಂದು ಕಾಗದವನ್ನು ತೆಗೆದು ಎಂಟು ಚೀನಿ ಅಕ್ಷರಗಳನ್ನು ಬರೆದು ಕೊಟ್ಟರು. ಅದರ ಅರ್ಥ `ಈ ದಿನ ಮತ್ತೊಮ್ಮೆ ಬರುವುದಿಲ್ಲ. ಪ್ರತಿ ನಿಮಿಷವೂ ಅಮೂಲ್ಯವಾದ ರತ್ನಕ್ಕೆ ಸಮಾನ'ಎಂದು. ಆದ್ದರಿಂದ ಪ್ರತಿದಿನವನ್ನು ಹೊಸತು ಎಂದು ಭಾವಿಸಿ ನವೊಲ್ಲಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ದಿನದ ಬಗ್ಗೆ ಹಳಿಯುತ್ತಾ, ಕೆಲಸದ ಮೇಲೆ ನಿರಾಸಕ್ತಿ ವಹಿಸಿದರೆ. ನಮ್ಮ ಜೀವನದ ಅಮೂಲ್ಯವಾದ ರತ್ನಗಳನ್ನು ನಾವೇ ಕೈಯಾರೆ ಕಳೆದುಕೊಂಡಂತಾಗುತ್ತದೆ.
ಪ್ರತಿಕ್ಷಣವೂ ಅತ್ಯಮೂಲ್ಯ. ಅವುಗಳ ಸದ್ಬಳಕೆ ಬಗ್ಗೆ ಯೋಚಿಸುವುದು ಅತೀ ಅಗತ್ಯ.
ಸಮಯ ಮತ್ತು ಸಮುದ್ರದ ಅಲೆ ಎಂದೂ ಯಾರಿಗೂ ಕಾಯುವುದಿಲ್ಲ. ಹಾಗಾಗಿ ಸಮಯದ ಮೌಲ್ಯವನ್ನು ಅರಿತು ಜೀವನದಲ್ಲಿ ಮುಂದೆ ಸಾಗಬೇಕು.
`ಏಳಿ, ಎದ್ದೇಳಿ, ಗುರಿ ತಲುಪುವ ತನಕ ನಿಲ್ಲದಿರಿ' ಎಂಬ ಸ್ವಾಮಿ ವಿವೇಕಾನಂದರ ಮಾತಿನ ಸಾರವನ್ನು ಅರಿತುಕೊಂಡು, ಯುವ ಜನರು ತಮ್ಮ ಜೀವನದಲ್ಲಿ ಗುರಿ ತಲುಪುವವರೆಗೂ ಸತತ ಪ್ರಯತ್ನ ಮತ್ತು ಪರಿಶ್ರಮ ಮುಂದುವರಿಸಬೇಕು.
ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. ಕಳೆದು ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಮರಳಿ ಬರುವುದಿಲ್ಲ. ಆದ್ದರಿಂದ ಸಮಯ ಪ್ರಜ್ಞೆ ಇರದೇ ಹೋದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ಅದರಿಂದಾಗುವ ಹಾನಿ, ಹಿಂಸೆ, ಆತಂಕ, ಮುಜುಗರ, ನೋವು ಸಹಿಸುವುದು ಕಷ್ಟ ಸಾಧ್ಯ.
ಐದು ನಿಮಿಷದ ಮಹತ್ವ ರೈಲು, ವಿಮಾನ ತಪ್ಪಿಸಿಕೊಂಡವರಿಗೆ ಗೊತ್ತಿರುತ್ತದೆ. ಒಂದು ವರ್ಷದ ಮಹತ್ವ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗೆ ತಿಳಿದಿರುತ್ತದೆ. ಹಣ ಕಳೆದುಕೊಂಡರೆ ಮತ್ತೆ ಪಡೆಯಬಹುದು. ಸಮಯ ಕಳೆದು ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಯಾರಿಂದಲೂ ಕಲಿಯಲಾರದ್ದನ್ನು ಸಮಯ-ಸಂದರ್ಭ ಕಲಿಸುತ್ತದೆ.