ಮಂಗಳವಾರ, ಮಾರ್ಚ್ 29, 2022

ಸ್ಫೂರ್ತಿಯ ಚಿಲುಮೆ ಡಾ| ಅಬ್ದುಲ್ ಕಲಾಂ

ಮಾಜಿ ರಾಷ್ಟ್ರಪತಿ ಡಾ| .ಪಿ.ಜೆ. ಅಬ್ದುಲ್ಕಲಾಂ ಅವರ ಜೀವನ, ನಡೆ-ನುಡಿ, ಚಿಂತನೆ ಪ್ರತಿಯೊಬ್ಬರ ಬದುಕಿಗೂ ಸ್ಫೂರ್ತಿ ನೀಡುವಂತಹದ್ದು.

ಸಂಗ್ರಹ ಚಿತ್ರ
ಡಾ.ಪಿ.ಜೆಅಬ್ದುಲ್‌ ಕಲಾಂ 
(
ಸಂಗ್ರಹ ಚಿತ್ರ)
ಅವರು ಒಂದು ಬಡ ಕುಟುಂಬದಲ್ಲಿ ಜನಿಸಿದರೂ ಜ್ಞಾನ ಸಂಪತ್ತಿನ ಶಿಖರವನ್ನೇರಿ, ಸುಜ್ಞಾನದ ಗಣಿಯಾಗಿ, ಭ್ರಷ್ಟಾಚಾರ, ಅಹಂಕಾರಗಳಿಂದ ದೂರವಿದ್ದು, ಸ್ವಚ್ಚ  ಮತ್ತು ಸುಂದರ ಬದುಕು ರೂಪಿಸಿಕೊಂಡು ಸದಾ ಇತರರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಕನಸು ಕಾಣಿರಿ, ಕನಸು ಕಾಣಿರಿ, ಕನಸು ಕಾಣಿರಿ, ಬದುಕಿನ ಗುರಿಯನ್ನು ಹೊತ್ತ ಕನಸುಗಳನ್ನು ನನಸುಗೊಳಿಸುವವರೆಗೆ ಕನಸು ಕಾಣಿರಿ


ಕನಸು ಯೋಚನೆಗಳನ್ನು ಯೋಜನೆಗಳಾಗುವತ್ತ ದಾರಿ ತೋರುತ್ತದೆ. ಕನಸೆನ್ನುವುದು ನಿದ್ರಿಸಿದಾಗ ಕಾಣುವುದಲ್ಲ, ಬದಲಾಗಿ ನಿದ್ರಿಸಗೊಡದಿರುವುದು ಎಂದು ಹೇಳಿದ ಕಲಾಂ ಅವರ ಮಾತು ಸದಾ ಮಕ್ಕಳು ಮತ್ತು ಯುವಜನರ ಪಾಲಿಗೆ ಪ್ರೇರಣಾ ಶಕ್ತಿ ಇದ್ದಂತೆ.

ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ಅಬ್ದುಲ್ ಕಲಾಂ ಸ್ಫೂರ್ತಿಯಾಗಿದ್ದರು. ಯಾಕೆಂದರೆ ಅವರ ನುಡಿಮುತ್ತುಗಳು ಅಷ್ಟು ಅರ್ಥಪೂರ್ಣವಾಗಿತ್ತು. ಅಂಥಾ ಕೆಲವು ನುಡಿಮುತ್ತುಗಳೇ ಭವಿಷ್ಯದ ದಾರಿಯನ್ನು ಗುರುತಿಸುವಲ್ಲಿ ಮತ್ತು ಮುನ್ನಡೆಸಲು ದಾರಿದೀಪ

ಭಾವನೆ ಗೌರವಿಸುವ

ಮಕ್ಕಳೊಂದಿಗೆ ಬಹಳ ಆತ್ಮೀಯವಾಗಿದ್ದು, ಅವರೊಂದಿಗೆ ಅನುಭವಗಳನ್ನು ಹಂಚಿಕೊಂಡು ಅವರು ಸಾಧನೆಗಳಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸುತ್ತಿದ್ದರು. ಪ್ರೀತಿ, ಪರಸ್ಪರ ಭಾವನೆಗಳನ್ನು  ಗೌರವಿಸುವ ಹಾಗೂ ಕಲಿತ ಪಾಠವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಅನನ್ಯಚೇತನ ಅವರಾಗಿದ್ದರು.

ಚಿಂತನೆಯ ಮನಸ್ಸು ನಿಮ್ಮ ಮೂಲ ಆಸ್ತಿಯಾಗಿರಬೇಕು. ಆಗ ಜೀವನದಲ್ಲಿ ಏಳು ಬೀಳುಗಳು ಬಂದರೂ ದೃಢವಾಗಿ ನಿಲ್ಲಬಹುದು ಎಂಬ ಅವರ ಮಾತು ಸವಾಲುಗಳನ್ನು ಎದುರಿಸಲು ಪೂರಕ.

ಕಷ್ಟ- ನಷ್ಟಗಳನ್ನು ಅನುಭವಿಸಿ, ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಇತರರಿಗೆ ತಿಳುವಳಿಕೆ ಯನ್ನು ಕಟ್ಟಿಕೊಟ್ಟವರಲ್ಲಿ ಡಾ| ಕಲಾಂ ಅವರು ಅಗ್ರಗಣ್ಯರು. "ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲಾಗದು. ಆದರೆ ನಿಮ್ಮ ಅಭ್ಯಾಸಗಳನ್ನು ನೀವು ಬದಲಾಯಿಸಿಕೊಳ್ಳಬಹುದು. ಬದಲಾದ ಅಭ್ಯಾಸಗಳು  ಖಂಡಿತವಾಗಿ ಭವಿಷ್ಯವನ್ನು ಬದಲಿಸಬಲ್ಲವು.' ಎಂದರಲ್ಲದೆ ತಾನೇ ಅದನ್ನು ಅಳವಡಿಸಿ ಮಾದರಿಯಾಗಿದ್ದಾರೆ.

ಸಮಸ್ಯೆಗೆ ನಾಯಕನಾಗಿ

ಅನುಭವ ಮತ್ತು ತೂಕದ ಮಾತುಗಳ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುವ  ಹಾಗೂ ಹಿಡಿದಿಟ್ಟು ಕೊಳ್ಳುವ ಮಾಂತ್ರಿಕ ಶಕ್ತಿ ಹೊಂದಿದ್ದ ಅವರು ನಾಯಕತ್ವದ ಬಗ್ಗೆ ತನ್ನದೇ ನಿಲುವುಗಳನ್ನು ಒಳಗೊಂಡಿದ್ದರು. ಅದಕ್ಕಾಗಿ ಅವರುಯಾವುದೇ ಮಹತ್ಕಾರ್ಯ ಸಾಧಿಸುವಲ್ಲಿ  ಸಮಸ್ಯೆಗಳಿರುವುದು ಸಹಜ. ಆದರೆ ಸಮಸ್ಯೆಯೇ ನಾಯಕನಾಗಬಾರದು. ನೀವು ಸಮಸ್ಯೆಗೆ ನಾಯಕನಾಗಿ ಅದನ್ನು ಎದುರಿಸಿ, ಸೋಲಿಸಿ  ಮತ್ತು ಯಶಸ್ಸು ಕಾಣಿರಿ’ ಎಂದಿದ್ದರು. ಆಕಾಂಕ್ಷೆ, ಆಲೋಚನೆ, ದೂರದೃಷ್ಟಿತ್ವ ಜತೆಗೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ.

ಗೆಲುವಿನ ಹೋರಾಟ ಸದೃಢವಾಗಿರಲಿ

‘ಕೇವಲ ಯಶೋಗಾಥೆಗಳನ್ನು ಓದಬೇಡಿ. ಅದರಿಂದ ಕೇವಲ ಸಂದೇಶ ದೊರೆಯುತ್ತದೆ. ಸೋಲಿನ ಕಥೆಗಳನ್ನು ಓದಿರಿ. ಯಶಸ್ಸು ಸಾಧಿಸಲು ಕೆಲವು ಮಾರ್ಗಗಳೂ ಕಾಣಿಸುತ್ತವೆ. ಗೆಲುವಿನ ಹೋರಾಟ ಸದೃಢವಾಗಿದ್ದರೆ ಅಂಜುಬುರುಕುತನದ ಸೋಲು ಸುಳಿಯಲು ಸಾಧ್ಯವಿಲ್ಲ’ ಎನ್ನುವ ಮೂಲಕ ಡಾ| ಕಲಾಂ ಅವರು ಸೋಲಿನಿಂದ ಹತಾಶರಾಗದೆ ಮರಳಿಯತ್ನವ ಮಾಡಿ ಗುರಿಸಾಧಿಸುವಂತೆ ಪ್ರೇರೇಪಿದ್ದಾರೆ

ಓರ್ವ ಶ್ರೇಷ್ಠ ವಿಜ್ಞಾನಿಯಾಗಿ, ಶಿಕ್ಷಕನಾಗಿ, ಮಾರ್ಗದರ್ಶಕನಾಗಿ, ಅತ್ಯುತ್ತಮ ರಾಷ್ಟ್ರಪತಿಗಳಾಗಿ, ದೇಶ ಪ್ರೇಮಿಯಾಗಿ ಜೀವನಾನುಭವದ  ಗಣಿಯಾಗಿ, ಸಕಾರಾತ್ಮಕ ಚಿಂತನೆಯ ಚಿಲುಮೆಯಾಗಿ, ಕನಸುಗಾರನಾಗಿ ಭಾರತೀಯರೆಲ್ಲರಿಗೂ ಡಾ| ಅಬ್ದುಲ್ಕಲಾಂ ಅವರು ಸ್ಫೂರ್ತಿದಾಯಕರು.

ಸಂಸ್ಕಾರ ಸಾಧನೆಗೆ ದಾರಿದೀಪ

ಸಂಸ್ಕಾರದಿಂದ ಬದುಕಿದರೆ ವ್ಯಕ್ತಿತ್ವ ವೃದ್ಧಿಯಾಗಿ ಸಾತ್ವಿಕ ಶಕ್ತಿ ಪ್ರಜ್ವಲಿಸುತ್ತದೆ. ಜೀವನ ಶೈಲಿ ಮನುಷ್ಯನ ಆಚಾರ, ಅನಾಚಾರ ಆತನ ಸಂಸ್ಕಾರವನ್ನು ತಿಳಿಸುತ್ತದೆ.

ಸಂಸ್ಕಾರವಿಲ್ಲದ ಜೀವನ ಪಶುವಿಗೆ ಸಮಾನವಾಗಿದ್ದು, ಸುಸಂಸ್ಕೃತ ವ್ಯಕ್ತಿತ್ವ, ಧರ್ಮನಿಷ್ಠೆ, ಆಚಾರ, ವಿಚಾರ, ಅನುಷ್ಠಾನಗಳು ಸಾಧನೆಗೆ ದಾರಿದೀಪವಾಗಬಲ್ಲವು. ಸಂಸ್ಕಾರ ಅಜ್ಞಾನವನ್ನು ದೂರ ಮಾಡಿ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯಲು ಸಹಕಾರಿ.

ಆದರ್ಶ ವ್ಯಕ್ತಿತ್ವ ರೂಪಿತಗೊಳ್ಳಲು ಸಂಸ್ಕಾರ ಮುಖ್ಯ. ಮಾತು, ಮನ, ಕೃತಿಗಳು ಒಂದಾಗಿದ್ದರೆ ನಿಜವಾದ ಗೌರವ, ಘನತೆ ಸಿಗುತ್ತದೆ. ಮಾತಿಗೂ ಕೃತಿಗೂ ಅಜಗಜಾಂತರದಿಂದಾಗಿ ಸಮಾಜದಲ್ಲಿ ಸತ್ಯ ಸಂಸ್ಕೃತಿ ಆದರ್ಶಗಳು ಕಡಿಮೆಯಾಗುತ್ತಿವೆ. ಉತ್ತಮ ಸಂಸ್ಕಾರ ಪಡೆದು ಬಾಳಿದರೆ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ.

 ಚಿಕ್ಕಂದಿನಲ್ಲೇ ಸಂಸ್ಕಾರ ಕಲಿಸಿ

ಸಮಸ್ಯೆಗಳ ನಡುವೆಯೂ ಸಹನೆ, ತಾಳ್ಮೆ ನಿರೀಕ್ಷೆಗಳನ್ನಿಟ್ಟುಕೊಂಡು ಬಾಳುವ ಗುಣ ಉತ್ತಮ ಸಂಸ್ಕಾರದಿಂದ ಪಡೆಯಬಹುದು. ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದು ಆತನಲ್ಲಿರುವ ಸಂಸ್ಕಾರವೇ ಪುಷ್ಟೀಕರಿಸುತ್ತದೆ. ಅಹಂಕಾರ, ಕ್ರೌರ್ಯ, ಹಿಂಸೆ ಬಿಟ್ಟು ಶಾಂತಿ, ಸಮಾಧಾನದಿಂದ ಬದುಕುವ, ವ್ಯವಹರಿಸುವ ಗುಣ ಹೊಂದಲು ಉತ್ತಮ ಸಂಸ್ಕಾರ ಪೂರಕ. ಹಾಗೇ ಮಾನವೀಯ ಮೌಲ್ಯ, ನೈತಿಕ ಗುಣಗಳನ್ನು ಅಳವಡಿಸಿಕೊಂಡು ವ್ಯಕ್ತಿಯು ಸಮಾಜ, ದೇಶದ ಒಳಿತಿಗೆ ದುಡಿಯುವಂತಾಗಲು ಚಿಕ್ಕಂದಿನಲ್ಲೇ ಶ್ರೇಷ್ಠ ಸಂಸ್ಕಾರ ನೀಡಬೇಕಾದದ್ದು ಅತೀ ಅಗತ್ಯ.

ಸಂಸ್ಕಾರದಿಂದ ವ್ಯಕ್ತಿತ್ವ

ಪ್ರಕೃತಿ ರೂಪದಲ್ಲಿರುವ ಕಲ್ಲು, ಮಣ್ಣು, ಕಟ್ಟಿಗೆ, ಕಾಗದ ಯಾವುದೇ ವಸ್ತುಗಳನ್ನು ನಾವು ತುಳಿಯುತ್ತೇವೆ. ಆದರೆ ಅದೇ ವಸ್ತುವಿಗೆ ಒಂದು ಉತ್ತಮ ರೂಪ ಕೊಟ್ಟಾಗ ಅದನ್ನು ನಾವು ಗೌರವಿಸುತ್ತೇವೆ.  ಮಣ್ಣು ನೀರಿನಲ್ಲಿ ಕರಗಿ ಹೋಗುತ್ತದೆ. ಆದರೆ ಮಣ್ಣನ್ನು ಸಂಸ್ಕರಿಸಿ ಮಾಡಿದ ಮಡಿಕೆ ನೀರಿನಲ್ಲಿ ತೇಲುತ್ತದೆ. ಅಷ್ಟೆ ಅಲ್ಲ ಅದರಲ್ಲಿ ಮಣ್ಣು ಹಾಕಿದರೂ ಅದನ್ನು ಹೊತ್ತುಕೊಂಡು ಹೋಗುವ ಶಕ್ತಿ ಮಡಿಕೆಗೆ ಇರುತ್ತದೆ. ಅಂದರೆ ಮಣ್ಣಿಗೆ ಮಡಿಕೆ ರೂಪದ ಸಂಸ್ಕಾರ ಕೊಟ್ಟಾಗ ಅದಕ್ಕೆ ಶಕ್ತಿ ಬರುತ್ತದೆ.  ಬದುಕಿನ ರೀತಿ, ವೇಷ ಭೂಷಣ, ನಮ್ಮ ನಡೆ ನುಡಿ ಆಧರಿಸಿ ವ್ಯಕ್ತಿತ್ವ ನಿರ್ಧರಿಸಲಾಗುತ್ತದೆ. ಹಾಗಾಗಿ ನಾವು ಅಳವಡಿಸಿಕೊಂಡ ಸಂಸ್ಕಾರದಿಂದ ನಮ್ಮ ವ್ಯಕ್ತಿತ್ವ ರೂಪವಾಗುತ್ತದೆ.

ಮನೆಗಳಲ್ಲಿ ಪ್ರೇರಣೆ ನೀಡಿ

ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಶಕ್ತಿ ಸಂಸ್ಕಾರಕ್ಕಿದ್ದು, ಅದನ್ನು ಅಳವಡಿಸಿಕೊಳ್ಳಲು ಮನೆ ಮನೆಗಳಲ್ಲಿ ಹಿರಿಯರು ಪ್ರೇರಣೆ ನೀಡಬೇಕು. ಸಂಸ್ಕಾರವಿಲ್ಲದ ಬದುಕು ಮನುಷ್ಯನನ್ನು ಕೆಳಹಂತಕ್ಕೆ ಕೊಂಡೊಯ್ಯಲಿದೆ. ಆದ್ದರಿಂದ ಉತ್ತಮ ಶಿಕ್ಷಣ, ಅವಕಾಶ ನೀಡುವ ಜತೆಗೆ ಸಂಸ್ಕಾರ ಕೊಡಿಸುವ ಅನಿವಾರ್ಯ ಹೆಚ್ಚಾಗಿದೆ. ಸಮಾಜಕ್ಕೆ ಉಪ್ಪಾಗದೆ, ಮುಪ್ಪಾಗದೆ ಹೆಪ್ಪಾಗುವ ರೀತಿ ಮನುಷ್ಯನ ಬದುಕು ರೂಪುಗೊಳ್ಳಬೇಕು.

 ಸಂಸ್ಕಾರದಿಂದ ಜೀವನ ಮೌಲ್ಯ ವೃದ್ಧಿ

ಮನುಷ್ಯರಿಗೆ ಸಂಬಂಧಿಸಿ "ಮೌಲ್ಯ' ಎಂದರೆ ವ್ಯಕ್ತಿಯೊಬ್ಬನಲ್ಲಿ  ಅಪೇಕ್ಷಿತ ಮತ್ತು ನಿರ್ದಿಷ್ಟವಾದ ವರ್ತನೆಯಾಗಿದ್ದು, ಅದು ಆತನ ವ್ಯಕ್ತಿತ್ವವನ್ನು  ಸೂಚಿಸುತ್ತದೆ. ಪ್ರತಿಯೊಬ್ಬನ ವರ್ತನೆ, ವ್ಯಕ್ತಿತ್ವದಿಂದ ಆತನ ಜೀವನ ಮೌಲ್ಯ ನಿರ್ಧರಿಸಲಾಗುತ್ತದೆ ಅಥವಾ ವ್ಯಕ್ತವಾಗುತ್ತದೆ. ನಾವು ಮೌಲ್ಯಗಳನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿಯಾಗಿವೆ. ನಮ್ಮ ಜೀವನದಲ್ಲಿ ನಂಬಿಕೆಗಳು ಮತ್ತು ಸಿದ್ಧಾಂತಗಳು ಮಹತ್ವ ಪೂರ್ಣ ಸ್ಥಾನಗಳನ್ನು ಹೊಂದಿವೆ. ಅವುಗಳು ವ್ಯಕ್ತಿತ್ವ ಮತ್ತು ಧೋರಣೆಗಳನ್ನು ರೂಪಿಸುತ್ತವೆ. ನಾವು ಸಮಾಜದಲ್ಲಿ ಸುಖವಾಗಿದ್ದೇವೋ ಇಲ್ಲವೋ ಎನ್ನುವುದನ್ನು ನಿರ್ಧರಿಸುವುದು ನಮ್ಮ ವೈಯಕ್ತಿಕ ಮೌಲ್ಯಗಳೇ. ಅಷ್ಟೇ ಅಲ್ಲದೆ, ನಮ್ಮನ್ನು ಮತ್ತು ನಮ್ಮ ಸ್ನೇಹಿತರನ್ನೂ ಇತರರು ಅಳೆಯುವುದು ವೈಯಕ್ತಿಕ ಮೌಲ್ಯಗಳ ಆಧಾರದಿಂದಲೇ. ನಮ್ಮ ನೆಲೆ ಮತ್ತು ಒಲವುಗಳನ್ನು  ತಿಳಿಯಪಡಿಸುವುದು ಮೌಲ್ಯಗಳು. ಮೌಲ್ಯಗಳನ್ನು ನಾವು ಅಂತರ್ಗತ ಮಾಡಿಕೊಂಡಾಗ ಅದು ಶಕ್ತಿಯುತವಾಗುವುದು. ಸಂಸ್ಕಾರವು  ನಾವು ನಂಬಿದ ಮೌಲ್ಯಗಳನ್ನು ದೃಢಪಡಿಸುತ್ತಾ ಹೋಗುತ್ತದೆ.

ಇಂದು ವ್ಯಕ್ತಿಗಳಿಗೆ ಯೋಗ್ಯ ಸಂಸ್ಕಾರ ದೊರೆಯದ ಕಾರಣ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಮುಂದಿನ ಜನಾಂಗವನ್ನು ನೈತಿಕವಾಗಿ ಸಬಲರನ್ನಾಗಿಸಬೇಕಾದ, ಅವರಿಗೆ ಸಂಸ್ಕಾರದ ಅರಿವು ಮೂಡಿಸುವ ಅನಿವಾರ್ಯ ನಮ್ಮ ಮುಂದಿದೆ. ಜೀವನವು ಕೇವಲ ಯಾಂತ್ರಿಕ, ವ್ಯಾವಹಾರಿಕವಾಗಬಾರದು. ಆದರೆ ಇಂದು ಅದೇ ಆಗುತ್ತಿರುವುದು ಖೇದಕರ. ಪರಸ್ಪರರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ ಮತ್ತಿತರ ನೈತಿಕ ಮೌಲ್ಯಗಳು ಅಡಕವಾಗಿದ್ದಾಗ ಜೀವನ ಅರ್ಥಪೂರ್ಣವಾಗುವುದು.

ಮಂಗಳವಾರ, ಮಾರ್ಚ್ 22, 2022

ಸಂವಹನ ಕೌಶಲವೇ ವ್ಯಕ್ತಿಯ ಅಮೂಲ್ಯ ಆಸ್ತಿ

 ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲವೇ ವ್ಯಕ್ತಿಯ ಅಮೂಲ್ಯ ಆಸ್ತಿ. ಆದ್ದರಿಂದ ವಿದ್ಯಾರ್ಥಿಗಳಾಗಿರುವಾಗಲೇ ಉಪನ್ಯಾಸ, ಚರ್ಚೆ, ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಅದೇ ರೀತಿ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಮಾತುಗಾರಿಕೆಯ ಕಲೆಯನ್ನು ಬೆಳೆಸಿಕೊಳ್ಳಿ.  


ದಿನನಿತ್ಯದ ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ತನ್ನೆಡೆಗೆ ಸೆಳೆಯಲು ಸಂವಹನ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಸಂವಹನ ಎಂದರೆ ಮಾಹಿತಿ ವಿನಿಮಯ ಎಂದು ಹೇಳಲಾಗುತ್ತದೆ. ಆದರೆ ಇಂದು ಮಾತಿನ ಮೂಲಕ ಸಂವಹನ ನಡೆಸುವುದೇ ಹೆಚ್ಚು ಪ್ರಾಮುಖ್ಯವನ್ನು ಹೊಂದಿದೆ. ಮಾತನಾಡುವ ಶೈಲಿ, ಪದಗಳ ಬಳಕೆ ಇತ್ಯಾದಿಗಳು ವ್ಯಕ್ತಿತ್ವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಉದ್ಯೋಗಿಗಳಲ್ಲಿ ಇರಬೇಕಾದ ಅತ್ಯಂತ ಪ್ರಮುಖ ಕೌಶಲವೆಂದರೆ ಸಂವಹನ. ಏಕೆಂದರೆ, ನಿಮ್ಮಲ್ಲಿರುವ ಶೈಕ್ಷಣಿಕ ಜ್ಞಾನ, ತಾಂತ್ರಿಕ ಜ್ಞಾನ, ಮತ್ತಿತರ ಕೌಶಲವನ್ನು ಮೇಲಧಿಕಾರಿಗಳಿಗೆ, ಸಹೋದ್ಯೋಗಿಗಳೊಂದಿಗೆ ವ್ಯಕ್ತಪಡಿಸಲು ಸಂವಹನ ಕೌಶಲ ಅವಶ್ಯ. ನಿಮ್ಮ ಕಾರ್ಯ ಕ್ಷೇತ್ರ ಮಾರ್ಕೆಟಿಂಗ್‌, ಅಕೌಂಟ್ಸ್‌, ಮಾನವ ಸಂಪನ್ಮೂಲ, ಶೈಕ್ಷಣಿಕ, ಉತ್ಪಾದನೆ ಯಾವುದೇ ಇರಲಿ, ಪರಿಣಾಮಕಾರಿ ಸಂವಹನವಿಲ್ಲದೆ ಕಾರ್ಯಕ್ಷಮತೆ ವ್ಯಕ್ತವಾಗದು ಹಾಗೂ ಉತ್ತಮ ಫ‌ಲಿತಾಂಶ ನಿರೀಕ್ಷಿಸುವುದು ಕಷ್ಟ.

ಯಾರೂ ಹುಟ್ಟಿನಿಂದಲೇ ವಾಗ್ಮಿಗಳಾಗಿರುವುದಿಲ್ಲ. ಪ್ರಯತ್ನದ ಫ‌ಲವಾಗಿ ಸಂವಹನ ಕಲೆಯಲ್ಲಿ  ಪರಿಣತಿ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಜೀವನ ದಲ್ಲಿಯೇ ಸಂವಹನ ಕಲೆ ಕರಗತ ಮಾಡಿಕೊಳ್ಳಲು ಪ್ರಯತ್ನಿಸಿ.

ನಮ್ಮ ಶಾಲಾ ಕಾಲೇಜುಗಳ ಪಠ್ಯಕ್ರಮ ಮತ್ತು ಬೋಧನ ಶೈಲಿಯಲ್ಲಿ ಸಂವಹನಕ್ಕೆ ಇರುವ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೌಶಲವನ್ನು ವೃದ್ಧಿಸಲು ಸೂಕ್ತವಾದ ತರಬೇತಿ ನೀಡಬೇಕು.
 
ಔಪಚಾರಿಕ ಸನ್ನಿವೇಶಗಳಲ್ಲಿ ಹೇಗೆ ಮಾತನಾಡಬೇಕು, ಹಿರಿಯರು, ಗಣ್ಯ ವ್ಯಕ್ತಿಗಳೊಂದಿಗೆ ಸಂವಹನ ಮಾಡುವುದು ಹೇಗೆ? ಸಭೆ, ಸಮಾರಂಭಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಕ್ರಮ ಇತ್ಯಾದಿಗಳ ಬಗ್ಗೆ  ಶಾಲೆಗಳಲ್ಲಿಯೇ ವಿಶೇಷ ತರಗತಿ ಅಥವಾ ತರಬೇತಿ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಅದು ಅವರ ಭವಿಷ್ಯದ ವೈಯಕ್ತಿಕ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುವುದು.
 
ಸಂವಹನದಲ್ಲಿ ಭಾಷಾ ಶುದ್ಧಿ, ಸ್ಪಷ್ಟ ಉಚ್ಛಾರ, ಸಂದರ್ಭಕ್ಕೆ ತಕ್ಕಷ್ಟೇ ಭಾವನೆ ಮುಖದಲ್ಲಿ ವ್ಯಕ್ತಪಡಿಸುವುದು ಅತೀ ಅಗತ್ಯ.

ಜೀವನದ ಯಶಸ್ಸಿಗೆ ಸಂವಹನ ಕಲೆ ಅಗತ್ಯ

ವಿದ್ಯಾರ್ಥಿಗಳಾಗಿರಲಿ ಅಥವಾ ಉದ್ಯೋಗಿಗಳಾಗಿರಲಿ, ನಿಮ್ಮ ಕಾರ್ಯಕ್ಷೇತ್ರ ಯಾವುದೇ ಇರಲಿ, ವೃತ್ತಿಯಲ್ಲಿನ ಅಂತಸ್ತು, ದರ್ಜೆಗಳೇನೇ ಇರಲಿ ಶೈಕ್ಷಣಿಕ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳ ಸಾಧನೆಗೆ ಸಂವಹನ ಕೌಶಲವೇ ಪ್ರಮುಖ ಸಾಧನ. ಆದ್ದರಿಂದ, ವ್ಯಕ್ತಿತ್ವಕ್ಕೊಂದು ಮೆರುಗು ನೀಡುವ ಸಂವಹನ ಕೌಶಲವನ್ನು ಬೆಳೆಸಿ ಕೊಂಡರೆ, ನಿಮ್ಮ ಕಾರ್ಯಕ್ಷಮತೆ ವೃದ್ಧಿಸಿ, ಸಾಧನೆಯ ಉತ್ತುಂಗಕ್ಕೇರಬಹುದು. ಈ ಮೂಲಕ, ಜೀವನದಲ್ಲಿ ಯಶಸ್ಸು ಸಾಧಿಸಬಹದು.

ಮಂಗಳವಾರ, ಮಾರ್ಚ್ 15, 2022

ತಾಳ್ಮೆ ಯಶಸ್ಸಿನ ಮೆಟ್ಟಿಲು

 ತಾಳ್ಮೆ ವ್ಯಕ್ತಿತ್ವದ ಸಂಕೇತ. ವ್ಯಕ್ತಿಯಲ್ಲಿರುವ ಧನಾತ್ಮಕ ಶಕ್ತಿ ಕೂಡ ಹೌದು. ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ರೀತಿಯ ಪರಿಹಾರ ಇದ್ದೇ ಇದೆ ಎಂದು ಕಾದು ನೋಡುವ ಅಥವಾ ಸಹಿಸುವ ಗುಣವೇ ತಾಳ್ಮೆ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತು ಕೂಡ ಇದನ್ನೇ ಪ್ರತಿಧ್ವನಿಸುತ್ತದೆ.

ಬದುಕು ಸಾಗರವಿದ್ದಂತೆ. ಅದರಲ್ಲಿ ಸಮಸ್ಯೆಗಳು, ಸವಾಲುಗಳು ಅಲೆಗಳಂತೆ ಒಂದರ ಅನಂತರ ಇನ್ನೊಂದು ಬರುತ್ತಲೇ ಇರುತ್ತದೆ. ಅವುಗಳನ್ನೆಲ್ಲ ಎದುರಿಸಿ ಮುಂದೆ ಸಾಗಬೇಕಾದರೆ ತಾಳ್ಮೆ ಅತೀ ಅಗತ್ಯ. ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಅಷ್ಟೇ ಮುಖ್ಯ. ಆದ್ದರಿಂದಲೇ ತಾಳ್ಮೆಯಂತಹ ಗುಣ ಇಲ್ಲದವರು ಭ್ರಮೆಯೆಂಬ ಪ್ರವಾಹದಲ್ಲಿ ಕೊಚ್ಚಿಹೋಗುತ್ತಾರೆ. ಇದ್ದವರು ವಾಸ್ತವವೆಂಬ ಶಾಂತಸಾಗರದಲ್ಲಿ ತೇಲಾಡುತ್ತಾರೆ ಎನ್ನಲಾಗುತ್ತದೆ.

ಮಾನವಧರ್ಮದ ಗುಣ

ಸಾಧನೆಯ ಶಿಖರವನ್ನೇರಲು ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ಧೃಡವಾಗಿದ್ದು, ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತು ಸಮಾಧಾನಕರವಾಗಿ, ಶಾಂತಿಯುತವಾಗಿ ತಾಳ್ಮೆಯಿಂದ ಅದನ್ನು ಪರಿಹರಿಸಬೇಕು. ಇದು ಮಾನವಧರ್ಮದ ಗುಣವಾಗಿದೆ.

ತಾಳ್ಮೆ ಎಂದರೆ ಕೇವಲ ಕಾಯುವಿಕೆ ಎಂದು ಕಡಗಣಿಸಬೇಡಿ,  ಕಾಯುವಿಕೆಯ ಪ್ರಕ್ರಿಯೆಯಲ್ಲಿ ನಾವು ತೋರುವ ಉತ್ತಮ ನಡವಳಿಕೆಯೇ ನಿಜವಾದ ತಾಳ್ಮೆ. ಮೇಲ್ನೋಟಕ್ಕೆ ತಾಳ್ಮೆಯು ಕಹಿ ಎಂದು ಕಂಡರೂ ಅದು ನೀಡುವ ಲಮಾತ್ರ ಸದಾ ಸಿಹಿಯಿಂದ ಕೂಡಿರುತ್ತದೆ. ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು.

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಸುಂದರ ಮನಸ್ಸಿರುತ್ತದೆ. ಸುಂದರ ಮನಸ್ಸು ಯಾವಾಗಲು ಶಾಂತಿ, ನೆಮ್ಮದಿಯಿಂದ  ವ್ಯಕ್ತಿ ಉಲ್ಲಾಸಪಡುವಂತೆ ಮಾಡುತ್ತದೆ. ಇದಕ್ಕೆ ಆತನ ಮನಸ್ಸಿನಲ್ಲಿರುವ ತಾಳ್ಮೆ ಎಂಬ ಗುಣವೇ ಕಾರಣ. ಮನಸ್ಸು ಯಾವಗಲು ವ್ಯಕ್ತಿಯ ಶ್ರೇಯಸನ್ನು ಬಯಸುತ್ತದೆ. ಕೋಪವನ್ನು ಅದುಮಿಟ್ಟುಕೊಂಡು ನೆಮ್ಮದಿ, ಶಾಂತಿಗಾಗಿ ಹಾತೊರೆಯುತ್ತದೆ. ಬಾಳಿನ ಯಶಸ್ಸಿಗೆ ಮುನ್ನುಡಿ ಬರೆಯುತ್ತದೆ.

ಯಶಸ್ಸಿನ ಮೂಲಮಂತ್ರ

ಬದುಕಿನಲ್ಲಿ ಯಶಸ್ಸು ಎನ್ನುವುದು ರಾತ್ರಿ ಬೆಳಗಾಗುವುದರೊಳಗೆ ಲಭಿಸುವಂತಹದ್ದಲ್ಲ. ಅದು ಹಲವಾರು ವರ್ಷಗಳ ಸಾಧನೆಯ . ನಿರಂತರ ಪ್ರಯತ್ನ, ಶ್ರಮ ವಹಿಸುವಿಕೆಯಿಂದ ದೊರೆಯುವುದು. ಅದಕ್ಕೆ ವ್ಯಕ್ತಿಯಲ್ಲಿ ಮುಖ್ಯವಾಗಿ ಬೇಕಾದ್ದು ತಾಳ್ಮೆ. ಆದ್ದರಿಂದ ತಾಳ್ಮೆಯೇ ಯಶಸ್ಸಿನ ಮೂಲಮಂತ್ರ ಅಥವಾ ಮೆಟ್ಟಿಲು.

ಇಂದಿನ ಒತ್ತಡದ ಬದುಕಿನಲ್ಲಿ  ಜನ ಜೀವನ ಎನ್ನುವುದೇ ಯಾಂತ್ರಿಕವಾಗಿಬಿಟ್ಟಿದೆ. ಇದರಲ್ಲಿ ಸಹನೆ, ತಾಳ್ಮೆ, ಸೌಮ್ಯ ಸ್ವಭಾವ ಎಂಬುದು ಎಲ್ಲರಲ್ಲೂ ಮರೆಯಾಗಿ ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುವವರೇ ಜಾಸ್ತಿಯಾಗಿದ್ದಾರೆ.

ತಾಳ್ಮೆ ಎಂಬುದು ಯಾರೊಬ್ಬರು ಹೇಳಿಕೊಟ್ಟು ಬರುವಂತಹದ್ದಲ್ಲ. ಅದನ್ನು ನಮ್ಮಲ್ಲಿ ನಾವೇ ಅಳವಡಿಸಿಕೊಳ್ಳಬೇಕು. ಅದಕ್ಕೆ ಧ್ಯಾನ, ತಪಸ್ಸು, ಯೋಗಾಸನ ಮಾಡುವುದು, ಪ್ರಕೃತಿ ರಮಣೀಯ ಪ್ರದೇಶಗಳಿಗೆ ಭೇಟಿ ಕೊಡುವುದು ಇತ್ಯಾದಿ ಪೂರಕವೆನಿಸಲಿವೆ.

ಮಕ್ಕಳ ಚಿಂತನ ಶೀಲ ಗುಣ ವೃದ್ಧಿಸಿ

ಕ್ಕಳ ಚಿಂತನ ಶೀಲ ಮತ್ತು ಸೃಜನಾತ್ಮಕ ಗುಣವನ್ನು ವೃದ್ಧಿಸಲು ಪೂರಕ ಕ್ರಮಗಳನ್ನು ಶಿಕ್ಷಕರು, ಹೆತ್ತವರು ಕೈಗೊಳ್ಳಬೇಕು.

ಮಕ್ಕಳ ಮನಸ್ಸು ಹಸಿ ಮಣ್ಣು ಇದ್ದಂತೆ. ಕ್ಷಣಕ್ಕೆ ಅಂಟಿಕೊಳ್ಳುತ್ತದೆ. ಆದ್ದರಿಂದ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ನವೀನ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮತ್ತು ಅವುಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು.


ಚಿಂತನೆಗೆ ಅವಕಾಶ
ಚಿತ್ರಕಲೆಯು
ಮಕ್ಕಳು ಹೇಗೆ ಚಿಂತಿಸುತ್ತಾರೆ ಎಂಬುದಕ್ಕೆ ಪ್ರಮುಖವಾದ ಒಳನೋಟವನ್ನು ಒದಗಿಸುತ್ತದೆ. ಮಕ್ಕಳ ಚಿತ್ರಕಲೆಯನ್ನು ಸಂಭಾಷಣೆಗೆ ಆಧಾರವನ್ನಾಗಿ ಬಳಸಿಕೊಳ್ಳುವುದರಿಂದ ಅವರ ಚಿಂತನೆಯನ್ನು ವೃದ್ಧಿಸಿಕೊಳ್ಳಲು ಅವಕಾಶ ಲಭಿಸುತ್ತದೆ. ಹಾಗೇ ಚೆಸ್ಆಡುವುದು, ಸುಡೊಕು, ಪದಬಂಧ ತುಂಬಿಸುವುದು, ಜಾಣ್ಮೆಯ ಲೆಕ್ಕಗಳನ್ನು ಮಾಡುವುದು, ಗಣಿತದ ಸಮಸ್ಯೆಗಳನ್ನು ಬಗೆಹರಿಸುವುದು ಕೂಡ ಯೋಚನ ಲಹರಿಯನ್ನು ವಿಸ್ತರಿಸಲು ಅವಕಾಶ ಒದಗಿಸುತ್ತದೆ.
ಶಾಲಾ ಶೈಕ್ಷಣಿಕ ವ್ಯವಸ್ಥೆಯು ಸಾಮೂಹಿಕವಾಗಿ ಕಲಿಕಾ ವಿಧಾನಗಳನ್ನು ಅನುಸರಿಸುತ್ತದೆ. ಅದು ವ್ಯಕ್ತಿಗತವಾದ ಸಾಮರ್ಥ್ಯ ಮತ್ತು ಆಸಕ್ತಿಗಳ ಬಗ್ಗೆ ಮತ್ತು ಭಿನ್ನತೆಯ ಕಡೆಗೆ ಗಮನ ಹರಿಸುವುದಿಲ್ಲ. ಇಂದಿನ ವಿದ್ಯಾಭ್ಯಾಸದ ಪರಿಯು ಮುದ್ರಿತ ಜ್ಞಾನಭಂಡಾರವನ್ನು ಸ್ವಾಧೀನ ಪಡಿಸಿಕೊಳ್ಳವುದಕ್ಕೆ ಸೀಮಿತವಾಗಿದ್ದು, ವಿದ್ಯಾರ್ಥಿಯು ಹೊಂದಿರಬಹುದಾದ ನೋಡಿ, ಕೇಳಿ ಅಥವಾ ಅನುಭವದಿಂದ ಪಡೆದ ಜ್ಞಾನ ಅಥವಾ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ.
ಸ್ವತಂತ್ರವಾಗಿ ಆಲೋಚಿಸುವುದು, ಪ್ರಯೋಗಗಳನ್ನು ಮಾಡುವುದು, ಆತ್ಮವಿಶ್ವಾಸ, ಧನಾತ್ಮಕ ಚಿಂತನೆ ಮಕ್ಕಳನ್ನು ಸೃಜನಶೀಲ ವ್ಯಕ್ತಿಗಳಾಗುವತ್ತ ಮುನ್ನಡೆಸುತ್ತವೆ. ಸೃಜನಶೀಲ ಗುಣ ಮಕ್ಕಳ ಕೌಶಲ್ಯ ಮತ್ತು ಪ್ರತಿಭೆ ವ್ಯಕ್ತಪಡಿಸುತ್ತದೆ. ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಹೊಸವಸ್ತುಗಳ ತಯಾರಿ ಅಥವಾ ಸಂಶೋಧನೆಗೆ ಮುಂದಾಗುವಂತೆ ಹೆತ್ತವರು, ಶಿಕ್ಷಕರು ಪ್ರೋತ್ಸಾಹಿಸಬೇಕು ಮತ್ತು ಅವುಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು.

ಕಲೆ, ವಿಜ್ಞಾನ-ತಂತ್ರಜ್ಞಾನ, ಗಣಿತ ಇತ್ಯಾದಿಗಳ ಬಗೆಗಿನ ಹೊಸ ಹೊಸ ಚಿಂತನೆ ಕಲ್ಪನೆಗಳನ್ನು ಹೊಂದಿರುವ ಸೃಜನಶೀಲ ವೀಡಿಯೋಗಳನ್ನು ಮಕ್ಕಳಿಗೆ ತೋರಿಸಿ ಸದ್ಬಳಕೆ ಮಾಡುವಂತೆ ಹುರಿದುಂಬಿಸಬೇಕು.

ಪ್ರವಾಸ ಹೋಗಿ
ಸುತ್ತಮುತ್ತಲಿನ ಸ್ಥಳ, ದೇಶ-ವಿದೇಶಗಳಿಗೆ ಪ್ರವಾಸ ತೆರಳುವುದು ಕೂಡ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಅರಿವಿನ ವಿಸ್ತಾರಕ್ಕೆ  ಸಹಾಯಕಾರಿ. ಸಮಾನಮನಸ್ಕ ಗೆಳೆಯರ ಜತೆಗೋ ಅಥವಾ ಕುಟುಂಬದ ಜತೆಗೋ ಪ್ರವಾಸ ಹೋಗುವುದರಿಂದ ಮನಸ್ಸು ರಿಲ್ಯಾಕ್ಸ್  ಆಗುವುದರ ಜತೆಗೆ ಹೊರಜಗತ್ತನ್ನು ನೋಡುವ ಅವಕಾಶ ದೊರೆತು ಹೊಸ ಚಿಂತನೆಗಳು ಮೂಡುತ್ತವೆ. ಹಾಗೇ ಅಧ್ಯಯನ ಪ್ರವಾಸ ಕೈಗೊಳ್ಳುವುದರಿಂದ ಕೂಡ ವಿಶೇಷ ಮಾಹಿತಿ ಲಭಿಸುತ್ತದೆ ಮತ್ತು ಯೋಚನೆಗಳು ಹೊಳೆಯುತ್ತವೆ. ವಿಜ್ಞಾನ ಮೇಳ, ಆಸಕ್ತಿಗೆ ಪೂರಕವಾದ ವಸ್ತು ಪ್ರದರ್ಶನ, ಚರ್ಚಾ ಸ್ಪರ್ಧೆ, ಸಂವಾದಗಳಲ್ಲಿ ಭಾಗವಹಿಸುವುದು ಕೂಡ ಬುದ್ಧಿಯನ್ನು ಒರೆಗೆ ಹಚ್ಚಲು ಸಹಕಾರಿ.

ಸೃಜನಶೀಲ ಗುಣ
ವಿಭಿನ್ನ ಮತ್ತು ನವೀನ ಚಿಂತನೆಯನ್ನು ಸೃಜನಶೀಲ ಗುಣ ಎನ್ನುವರು. ಕೇವಲ ಪಠ್ಯ ಪುಸ್ತಕದ ಅಧ್ಯಯನದಿಂದ ಮಕ್ಕಳು ಇದನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಂಶೋಧನೆ, ಪ್ರಯೋಗಾತ್ಮಕ ಮನಸ್ಸು ಹೊಂದುವುದು ಅಗತ್ಯ. ಬುದ್ಧಿವಂತಿಕೆ, ಪ್ರತಿಭೆ, ಕೌಶಲ್ಯಗಳನ್ನು ಬಳಸಿ ಹೊಸತನವನ್ನು ಸೃಷ್ಟಿಸುವುದೇ ಸೃಜನಶೀಲ ಗುಣ.