ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ, ನಡೆ-ನುಡಿ, ಚಿಂತನೆ ಪ್ರತಿಯೊಬ್ಬರ ಬದುಕಿಗೂ ಸ್ಫೂರ್ತಿ ನೀಡುವಂತಹದ್ದು.
![]() |
ಡಾ| ಎ.ಪಿ.ಜೆ. ಅಬ್ದುಲ್ ಕಲಾಂ (ಸಂಗ್ರಹ ಚಿತ್ರ) |
ಕನಸು ಯೋಚನೆಗಳನ್ನು ಯೋಜನೆಗಳಾಗುವತ್ತ ದಾರಿ ತೋರುತ್ತದೆ. ಕನಸೆನ್ನುವುದು ನಿದ್ರಿಸಿದಾಗ ಕಾಣುವುದಲ್ಲ, ಬದಲಾಗಿ ನಿದ್ರಿಸಗೊಡದಿರುವುದು ಎಂದು ಹೇಳಿದ ಕಲಾಂ ಅವರ ಮಾತು ಸದಾ ಮಕ್ಕಳು ಮತ್ತು ಯುವಜನರ ಪಾಲಿಗೆ ಪ್ರೇರಣಾ ಶಕ್ತಿ ಇದ್ದಂತೆ.
ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರಿಗೆ ಅಬ್ದುಲ್ ಕಲಾಂ ಸ್ಫೂರ್ತಿಯಾಗಿದ್ದರು. ಯಾಕೆಂದರೆ ಅವರ ನುಡಿಮುತ್ತುಗಳು ಅಷ್ಟು ಅರ್ಥಪೂರ್ಣವಾಗಿತ್ತು. ಅಂಥಾ ಕೆಲವು ನುಡಿಮುತ್ತುಗಳೇ ಭವಿಷ್ಯದ ದಾರಿಯನ್ನು ಗುರುತಿಸುವಲ್ಲಿ ಮತ್ತು ಮುನ್ನಡೆಸಲು ದಾರಿದೀಪ.
ಭಾವನೆ ಗೌರವಿಸುವ
ಮಕ್ಕಳೊಂದಿಗೆ ಬಹಳ ಆತ್ಮೀಯವಾಗಿದ್ದು, ಅವರೊಂದಿಗೆ ಅನುಭವಗಳನ್ನು ಹಂಚಿಕೊಂಡು ಅವರು ಸಾಧನೆಗಳಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸುತ್ತಿದ್ದರು. ಪ್ರೀತಿ, ಪರಸ್ಪರ ಭಾವನೆಗಳನ್ನು ಗೌರವಿಸುವ ಹಾಗೂ ಕಲಿತ ಪಾಠವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡ ಅನನ್ಯಚೇತನ ಅವರಾಗಿದ್ದರು.
ಚಿಂತನೆಯ ಮನಸ್ಸು ನಿಮ್ಮ ಮೂಲ ಆಸ್ತಿಯಾಗಿರಬೇಕು. ಆಗ ಜೀವನದಲ್ಲಿ ಏಳು ಬೀಳುಗಳು ಬಂದರೂ ದೃಢವಾಗಿ ನಿಲ್ಲಬಹುದು ಎಂಬ ಅವರ ಮಾತು ಸವಾಲುಗಳನ್ನು ಎದುರಿಸಲು ಪೂರಕ.
ಕಷ್ಟ- ನಷ್ಟಗಳನ್ನು ಅನುಭವಿಸಿ, ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಇತರರಿಗೆ ತಿಳುವಳಿಕೆ ಯನ್ನು ಕಟ್ಟಿಕೊಟ್ಟವರಲ್ಲಿ ಡಾ| ಕಲಾಂ ಅವರು ಅಗ್ರಗಣ್ಯರು. "ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲಾಗದು. ಆದರೆ ನಿಮ್ಮ ಅಭ್ಯಾಸಗಳನ್ನು ನೀವು ಬದಲಾಯಿಸಿಕೊಳ್ಳಬಹುದು. ಬದಲಾದ ಅಭ್ಯಾಸಗಳು ಖಂಡಿತವಾಗಿ ಭವಿಷ್ಯವನ್ನು ಬದಲಿಸಬಲ್ಲವು.' ಎಂದರಲ್ಲದೆ ತಾನೇ ಅದನ್ನು ಅಳವಡಿಸಿ ಮಾದರಿಯಾಗಿದ್ದಾರೆ.
ಸಮಸ್ಯೆಗೆ ನಾಯಕನಾಗಿ
ಅನುಭವ ಮತ್ತು ತೂಕದ ಮಾತುಗಳ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುವ ಹಾಗೂ ಹಿಡಿದಿಟ್ಟು ಕೊಳ್ಳುವ ಮಾಂತ್ರಿಕ ಶಕ್ತಿ ಹೊಂದಿದ್ದ ಅವರು ನಾಯಕತ್ವದ ಬಗ್ಗೆ ತನ್ನದೇ ನಿಲುವುಗಳನ್ನು ಒಳಗೊಂಡಿದ್ದರು. ಅದಕ್ಕಾಗಿ ಅವರು ‘ಯಾವುದೇ ಮಹತ್ಕಾರ್ಯ ಸಾಧಿಸುವಲ್ಲಿ ಸಮಸ್ಯೆಗಳಿರುವುದು ಸಹಜ. ಆದರೆ ಸಮಸ್ಯೆಯೇ ನಾಯಕನಾಗಬಾರದು. ನೀವು ಆ ಸಮಸ್ಯೆಗೆ ನಾಯಕನಾಗಿ ಅದನ್ನು ಎದುರಿಸಿ, ಸೋಲಿಸಿ ಮತ್ತು ಯಶಸ್ಸು ಕಾಣಿರಿ’ ಎಂದಿದ್ದರು. ಆಕಾಂಕ್ಷೆ, ಆಲೋಚನೆ, ದೂರದೃಷ್ಟಿತ್ವ ಜತೆಗೆ ಸರಳ ಸಜ್ಜನಿಕೆಯ ವ್ಯಕ್ತಿತ್ವ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ.
ಗೆಲುವಿನ ಹೋರಾಟ ಸದೃಢವಾಗಿರಲಿ
‘ಕೇವಲ ಯಶೋಗಾಥೆಗಳನ್ನು ಓದಬೇಡಿ. ಅದರಿಂದ ಕೇವಲ ಸಂದೇಶ ದೊರೆಯುತ್ತದೆ. ಸೋಲಿನ ಕಥೆಗಳನ್ನು ಓದಿರಿ. ಯಶಸ್ಸು ಸಾಧಿಸಲು ಕೆಲವು ಮಾರ್ಗಗಳೂ ಕಾಣಿಸುತ್ತವೆ. ಗೆಲುವಿನ ಹೋರಾಟ ಸದೃಢವಾಗಿದ್ದರೆ ಅಂಜುಬುರುಕುತನದ ಸೋಲು ಸುಳಿಯಲು ಸಾಧ್ಯವಿಲ್ಲ’ ಎನ್ನುವ ಮೂಲಕ ಡಾ| ಕಲಾಂ ಅವರು ಸೋಲಿನಿಂದ ಹತಾಶರಾಗದೆ ಮರಳಿಯತ್ನವ ಮಾಡಿ ಗುರಿಸಾಧಿಸುವಂತೆ ಪ್ರೇರೇಪಿದ್ದಾರೆ.
ಓರ್ವ ಶ್ರೇಷ್ಠ ವಿಜ್ಞಾನಿಯಾಗಿ, ಶಿಕ್ಷಕನಾಗಿ, ಮಾರ್ಗದರ್ಶಕನಾಗಿ, ಅತ್ಯುತ್ತಮ ರಾಷ್ಟ್ರಪತಿಗಳಾಗಿ, ದೇಶ ಪ್ರೇಮಿಯಾಗಿ ಜೀವನಾನುಭವದ ಗಣಿಯಾಗಿ, ಸಕಾರಾತ್ಮಕ ಚಿಂತನೆಯ ಚಿಲುಮೆಯಾಗಿ, ಕನಸುಗಾರನಾಗಿ ಭಾರತೀಯರೆಲ್ಲರಿಗೂ ಡಾ| ಅಬ್ದುಲ್ ಕಲಾಂ ಅವರು ಸ್ಫೂರ್ತಿದಾಯಕರು.