
ವಿಘ್ನನಿವಾರಕ, ಸಿದ್ಧಿವಿನಾಯಕ, ಮೂಷಿಕ ವಾಹನ, ಲಂಬೋದರ, ವ್ನಿೇಶ, ಏಕದಂತ, ವಕ್ರತುಂಡ, ಗಣರಾಜ, ಗಣೇಶ, ಮೊದಕಪ್ರಿಯ ಎಂದೆಲ್ಲಾ ಕರೆಸಿಕೊಳ್ಳುವ ಗಣಪತಿಯ ಹಬ್ಬ ಬಂದೇ ಬಿಡ್ತು. ಪ್ರತಿ ವರ್ಷ ಭಾದ್ರಪದ ಶುಕ್ಲದ ಚೌತಿಯಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಮೊದಲು ವಂದಿಪೆ ನಿನಗೆ ಗಣನಾಥ’ ಎಂಬಂತೆ ಯಾವುದೇ ಕೆಲಸ-ಕಾರ್ಯ, ಶುಭ ಕಾರ್ಯಗಾಳಾಗಿರಲಿ ಪ್ರಾರಂಭಿಸುವ ಮೊದಲು ಗಣಪತಿಯನ್ನು ಸ್ಮರಿಸುವುದು ನಮ್ಮ ಸಂಪ್ರದಾಯ. ಮೊದಲು ಗಜವದನನ ಪೂಜೆ ಮಾಡದಿದ್ದರೆ ಅನ್ಯ ದೇವತೆಗಳಿಗೆ ಮಾಡಿದ ಪೂಜೆಯೂ ಸಫಲಿಸುವುದಿಲ್ಲ ಎಂಬ ನಂಬಿಕೆಯಿದೆ. ಹೆಚ್ಚಿನ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿಯೂ ಮೊದಲಿಗೆ ಸ್ವಸ್ತಿಕವಿಟ್ಟು ಗಣಪನನ್ನು ಸ್ಮರಿಸುತ್ತಾರೆ.
ಗಣಪತಿಯ ಜನನದ ಬಗ್ಗೆ ಕತೆಯೊಂದರಲ್ಲಿ ಇಂತಿದೆ. ಪಾರ್ವತಿಯು ಒಂದು ದಿನ ಸ್ನಾನಕ್ಕೆಂದು ಹೊರಟಾಗ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ತನ್ನ ಮೈಯಲ್ಲಿನ ಮಣ್ಣನೇ ತೆಗೆದು ಅದರಿಂದ ಗಣಪತಿಯನ್ನು ಸೃಷ್ಟಿಸಿ ಮನೆ ಕಾವಲಿಗೆ ನಿಲ್ಲಿಸಿದಳು ಎಂಬ ಉಲ್ಲೇಖವಿದೆ. ಗಣಪತಿ ಮನೆ ಕಾಯುತ್ತಿರುವಾಗ ಅಲ್ಲಿಗೆ ಪರಶಿವ ಮತ್ತು ಆತನ ಗಣಗಳು ಬರುತ್ತಾರೆ. ಗಣಪತಿಯು ಮನೆ ಪ್ರವೇಶಿಸದಂತೆ ಅವರನ್ನು ತಡೆಯುತ್ತಾನೆ. ಇದರಿಂದ ಕೋಪಗೊಂಡ ಈಶ್ವರನು ಗಣಪತಿಯ ತಲೆಯನ್ನು ತನ್ನ ತ್ರಿಶೂಲದದಿಂದ ತಿವಿದು ಎಸೆಯುವನು. ಆ ಸಂದರ್ಭದಲ್ಲಿ ಸ್ನಾನಕ್ಕೆಂದು ಹೋದ ಪಾರ್ವತಿ ದೇವಿಯ ಆಗಮನವಾಗುವುದು. ರುಂಡ-ಮುಂಡ ಬೇರ್ಪಟ್ಟು ಬಿದ್ದಿರುವ ಮಗನನ್ನು ಕಂಡ ಪಾರ್ವತಿಯು ರೋಧಿಸುತ್ತಾ ‘‘ಆತ ತನ್ನ ಮಗ, ಅವನನ್ನು ಮೊದಲಿನಂತೆ ಮಾಡುವಂತೆ ಹಠ ಹಿಡಿಯುವಳು. ಪತ್ನಿಯ ಮಾತಿಗೆ ಒಲ್ಲೆ ಎನ್ನಲಾಗದೆ ಶಿವ ತನ್ನ ಗಣಗಳಲ್ಲಿ ಮುಸ್ಸಂಜೆ ಹೊತ್ತಿನಲ್ಲಿ (ಸೂರ್ಯಸ್ತಮಾನದ ಸಮಯ) ಬಡಗುದಿಕ್ಕಿಗೆ ತಲೆಯಿಟ್ಟು ಮಲಗಿರುವವರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸುವಂತೆ ತಿಳಿಸಿದನು. ಶಿವನ ಅಪ್ಪಣೆಯಂತೆ ಹುಡುಕಲು ಹೊರಟ ಗಣಗಳಿಗೆ ಎಲ್ಲೆಲ್ಲೂ ಹುಡುಕಿದರೂ ಯಾರೊಬ್ಬರೂ ಸಿಗದೆ ಕೊನೆಗೆ ಆನೆ ಮರಿಯೊಂದು ಮುಸ್ಸಂಜೆಯಲ್ಲಿ ಬಡಗು ದಿಕ್ಕಿಗೆ ತಲೆಯಿಟ್ಟು ಮಲಗಿ ನಿದ್ರಿಸುತ್ತಿರುವುದು ಕಾಣಸಿಕ್ಕಿತು. ಅದರ ತಲೆಯನ್ನು ತುಂಡರಿಸಿ ತಂದು ಗಣಪತಿಯ ದೇಹಕ್ಕೆ ಜೋಡಿಸಿದುದರಿಂದ ಆತ ಗಜಮುಖನಾದ.
ಗಣಪತಿಯ ಹುಟ್ಟಿನ ಬಗ್ಗೆ ವಿವಿಧ ಪುರಾಣಗಳಲ್ಲಿ ಬೇರೆಬೇರೆ ರೀತಿಯ ಕತೆಗಳಿವೆ.
ಬ್ರಹ್ಮವೈರ್ವತ ಪುರಾಣ: ಇದ ಪ್ರಕಾರ ವಿಷ್ಣುವಿನ ಕೃಪೆಯಿಂದ ಪಾರ್ವತಿಗೆ ಜನಿಸಿದ ಮಗುವೆ ಗಣಪತಿ. ಶನಿದೇವನ ದೃಷ್ಟಿ ಬಿದ್ದುದರಿಂದ ಆತನ ತಲೆ ಇಲ್ಲವಾಯಿತು. ಆಗ ವಿಷ್ಣುವು ಆನೆಯ ತಲೆತಂದು ಮಗುವಿನ ಕುತ್ತಿಗೆಗೆ ಜೋಡಿಸುತ್ತಾನೆ. ಒಂದು ದಿನ ಮಹದೇವನನ್ನು ಕಾಣಲು ಬಂದ ಪರಶುರಾಮನನ್ನು ತಡೆದುದಕ್ಕಾಗಿ ಆತ ಗಣಪತಿಯ ಒಂದು ದಂತ ಮುರಿದ.
ಮತ್ಸು ಪುರಾಣ: ಪಾರ್ವತಿಯು ತನ್ನ ಶರೀರದ ಕೊಳೆಯಿಂದ ಗಣಪತಿಯನ್ನು ನಿರ್ಮಿಸಿ, ಪ್ರಾಣ ಶಕ್ತಿಯನ್ನು ತುಂಬಿದಳು. ಆದ್ದರಿಂದ ಗಣಪತಿಯು ಈ ರೀತಿಯ ವಿಕಾರ ರೂಪ ಪಡೆದನು.
ಶಿವ ಪುರಾಣ: ಶಿವನೇ ಗಣೇಶನ ತಲೆಯನ್ನು ಕಡಿದು, ಅನಂತರ ಆನೆಯ ತಲೆ ತಂದಿಟ್ಟನು.
ವರಾಹ ಪುರಾಣ: ಶಿವನ ಮುಖದ ತೆಜಸ್ಸಿನಿಂದ ಹುಟ್ಟಿದ ಬಾಲಕ ಗಣೇಶ. ಅವನ ರೂಪ, ತೇಜಸ್ಸುಗಳನ್ನು ಕಂಡು ಆತ್ಮವಿಶ್ವಾಸ ಕಳಕೊಂಡ ಪಾರ್ವತಿಯು ಮಗನಿಗೆ ಕುರೂಪನಾಗೆಂದು ಶಾಪ ನೀಡುತ್ತಾಳೆ. ಹಾಗಾಗಿ ಗಣಪತಿಗೆ ಈ ವಿಕೃತ ರೂಪ ಲಭಿಸಿತು.
ಸ್ಕಂದ ಪುರಾಣ: ವರೇಣ್ಯನೆಂಬ ರಾಜನ ಮಗನೇ ಗಣೇಶ. ಆತನಿಗೆ ಹುಟ್ಟುವಾಗಲೇ ಆನೆಯಂತಹ ತಲೆ, ದೊಡ್ಡ ಹೊಟ್ಟೆ, ನಾಲ್ಕು ಭಜಗಳು ಇರುವುದನ್ನು ನೋಡಿ ಹೆದರಿದ ರಾಜನು ಮಗುವನ್ನು ಕೊಲ್ಲುವುದಕ್ಕೆ ಸೇವಕರ ಕೈಯಲ್ಲಿ ಕಳುಹಿಸುತ್ತಾನೆ. ಅವರು ಗಣೇಶನನ್ನು ಕೊಲ್ಲದೆ ಕಾಡಿನಲ್ಲಿರುವ ಪಾರ್ಶ್ವ ಮುನಿಯ ಆಶ್ರಮದ ಬಳಿ ಬಟ್ಟು ಬರುತ್ತಾರೆ. ಮಕ್ಕಳಿಲ್ಲದ ಪಾರ್ಶ್ವ ಮುನಿ ದಂಪತಿಯು ಈ ಮಗುವನ್ನು ಸಾಕುತ್ತಾರೆ.
ಶ್ರೀಗಣೇಶ ಪುರಾಣ: ಇದರ ಪ್ರಕಾರ ‘ಮಹೋತ್ಕಟ’ ಎಂಬುದು ಗಣೇಶನ ಮೂಲ ಹೆಸರು. ಉಪನಯನ ಸಂಸ್ಕಾರ ಅದ ಬಳಿಕ ಆತನಿಗೆ ಬೇರೆ ಹೆಸರುಗಳನ್ನಿಡಲಾಯಿತು. ಗಣಪತಿಯು ಬೇರೆ ಬೇರೆ ಯುಗಗಳಲ್ಲಿ ವಿವಿಧ ರೂಪಗಳನ್ನು ತಾಳುತ್ತಾನೆ ಎಂದು ಹೇಳಲಾಗಿದೆ.
ವಿಶ್ವರೂಪಿ
ಓಂಕಾರವನ್ನು ದೇವನಾಗರಿ ಭಾಷೆಯಲ್ಲಿ ಬರೆದಾಗ ಅದು ಗಣೇಶನ ಆಕೃತಿಯನ್ನ ಹೊಂದುತ್ತದೆ. ಆದ್ದರಿಂದಲೇ ಆತನಿಗೆ ಓಂಕಾರ ರೂಪಿ ಎಂಬ ಹೆಸರು ಬಂದಿದೆ. ಅಲ್ಲದೆ ಗಣಪತಿಯನ್ನು ಅನಂತ ರೂಪ, ಹೆಸರುಗಳಂದ ಪೂಜಿಸಲಾಗುತ್ತದೆ. ಆದ್ದರಿಂದಲೇ ಅವನನ್ನು ವಿಶ್ವರೂಪಿ ಎನ್ನುತ್ತಾರೆ. ಆತನ ಮುಖ್ಯವಾದ ರೂಪಗಳೆಂದರೆ: ಯಕ್ಷ ಗಣಪತಿ, ಪಂಚಮುಖಿ ಗಣಪತಿ, ಶಕ್ತಿ ಗಣಪತಿ, ನೃತ್ಯ ಗಣಪತಿ, ವಕ್ರತುಂಡ ಮಹಾಕಾಯ, ವಿದ್ಯಾ ಗಣಪತಿ, ಶ್ವೇತ ಗಣಪತಿ, ಕೃಷ್ಣ ಗಣಪತಿ, ರಕ್ತವರ್ಣ (ಸಿಂಧೂರವರ್ಣ), ಋದ್ಧಿ ಗಣಪತಿ, ಸಿದ್ಧಿ ಗಣಪತಿ, ಲಕ್ಷ್ಮೀ ಗಣಪತಿ, ದುರ್ಗಾ ಗಣಪತಿ, ಸಂಕಷ್ಟಕಹರ ಗಣಪತಿ, ಸೃಷ್ಟಿ ಗಣಪತಿ, ವೀರ ಗಣಪತಿ, ಪಿಂಗಳ ಗಣಪತಿ, ಬೀಜ ಗಣಪತಿ, ಧ್ವಜ ಗಣಪತಿ, ಯೋಗ ಗಣಪಿತಿ, ಹೇರಂಬ ಗಣಪತಿ, ಮೂಷಕ ಗಣಪತಿ, ಅಶ್ವಾರೂಢ ಗಣಪತಿ, ಢುಂಢಿರಾಜ, ಮಹಾ ಗಣಪತಿ, ಭಕ್ತ ಗಣಪತಿ, ದ್ವಿಜ ಗಣಪತಿ, ಉಚ್ಛಿಷ್ಟ ಗಣಪತಿ, ವಿಘ್ನ ಗಣಪತಿ, ಪದ್ಮಾಸನ ಗಣಪತಿ, ನಾಗ ಯಜ್ಞೋಪವೀತಧಾರೀ, ಮಯೂರೇಶ್ವರ, ಉಷ್ಣೀಷ ಗಣಪತಿ, ಬಾಲ ಗಣಪತಿ, ತರಣ ಗಣಪತಿ, ತ್ರಿಮುಖ ಗಣಪತಿ, ಊರ್ಧ್ವ ಗಣಪತಿ, ಏಕಾಕ್ಷರ ಗಣಪತಿ, ಏಕದಂತ ಗಣಪತಿ, ಹರಿದ್ರಾ ಗಣಪತಿ ಇತ್ಯಾದಿ.
ವಿದ್ಯೆ, ಬುದ್ಧಿಯ ಅಧಿ ದೇವತೆ
ಗಣಪತಿಯನ್ನು ವಿದ್ಯೆ ಬುದ್ಧಿ, ಸಂಪತ್ತು, ಜ್ಞಾನದ ಅಧಿದೇವತೆ ಎಂದು ಕರೆಯಲಾಗುತ್ತದೆ. ಗಣಪತಿಯು ಭಜಕ ಜನರಿಗೆ ಮುಖ್ಯವಾಗಿ ಮಕ್ಕಳಿಗೆ ಅತ್ಯಂತ ಪ್ರೀತಿಯ ದೇವನೂ ಹೌದು. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಆರೋಗ್ಯಕರ ವ್ಯಂಗಕ್ಕೆ ಗುರಿಯಾಗುವವನು. ಮ್ಮೆ ಪರಮೇಶ್ವರನು ಷಣ್ಮಖು ಹಾಗೂ ಗಣಪತಿಯನ್ನು ಬಳಿಗೆ ಕರೆದು ಇಡೀ ಲೋಕಕ್ಕೆ ಪ್ರದಕ್ಷಿಣೆ ಹಾಕಿ ಮೊದಲು ಬಂದವರಿಗೆ ಒಂದು ಬಾಳೆ ಹಣ್ಣನ್ನು ಕೊಡುವುದಾಗಿ ಹೇಳಿದ. ತತ್ಕ್ಷಣವೇ ನವಿಲನ್ನೇರಿ ಷಣ್ಮಖ ಲೋಕ ಪ್ರದಕ್ಷಿಣೆಗೆ ಹೊರಟ. ಆದರೆ ಗಣಪತಿ ಸ್ವಲ್ಪ ಯೋಚಿಸಿ ತನ್ನ ತಂದೆ-ತಾಯಿಗೆ ಒಂದು ಪ್ರದಕ್ಷಿಣೆ ಹಾಕಿ ಬಾಳೆ ಹಣ್ಣಿಗಾಗಿ ಕೈಚಾಚಿದ. ಆಗ ಪಾರ್ವತಿ ‘ನೀನು ಲೋಕ ಪ್ರದಕ್ಷಿಣೆ ಮಾಡಿಲ್ಲವಲ್ಲ’ ಎಂದಳು. ಅದಕ್ಕೆ ಗಣಪತಿ ‘ನಾನು ನಿಮಗೆ ಪ್ರದಕ್ಷಿಣೆ ಹಾಕಿಲ್ಲವೆ ನಿಮ್ಮಲ್ಲಿ ಎಲ್ಲ ಲೋಕಗಳೂ ಅಡಗಿವೆಯಲ್ಲವೆ’ ಎಂದ. ಹೀಗೆ ಅವನು ಸಮಯಕ್ಕೆ ತಕ್ಕಂತೆ ಬುದ್ಧಿಚಾತುರ್ಯ ಉಪಯೋಗಿಸಿದಕ್ಕೆ ಶಿವ-ಪಾರ್ವತಿಯರು ಬಾಳೆ ಹಣ್ಣನ್ನು ನೀಡಿದರು. ಇದರಿಂದ ಕೋಪಗೊಂಡ ಷಣ್ಮಖನು ಗಣಪತಿಯ ಒಂದು ದಂತವನ್ನು ತುಂಡರಿಸುತ್ತಾನೆ. ಹೀಗೆ ಗಣಪತಿಯು ಏಕದಂತನಾದ ಎಂದು ಕತೆಯೊಂದರಿಂದ ತಿಳಿಯುತ್ತದೆ.
ವಿಶಿಷ್ಟ ನಾಯಕ
ಗಣಪತಿಯ ವಿಗ್ರಹ ಬಹಳ ಸುಂದರ ಕಲ್ಪನೆಯದ್ದು. ಗಜಮುಖ, ನಾಲ್ಕು ಕೈ, ದೊಡ್ಡ ಹೊಟ್ಟೆ, ಹೊಟ್ಟೆಗೆ ಹಾವು ಸುತ್ತಿರುವುದು, ಸವಾರಿಗೆ ಇಲಿ. ಅತಂಹ ವಿಲಕ್ಷಣ ಮೂರ್ತಿ ಗಣಪತಿ. ಗಣಗಳಿಗೆ ಅಧಿಪತಿ (ಒಡೆಯ) ಆದ್ದರಿಂದ ಗಣಪತಿ, ಗಣಗಳಿಗೆ ಈಶ ಆದ್ದರಿಂದ ಗಣೇಶ ಎಂದೆನಿಸಿಕೊಂಡಿದ್ದಾನೆ. ಆತ ವಿಶಿಷ್ಟ ನಾಯಕ. ಅದಕ್ಕಾಗಿಯೇ ವಿನಾಯಕ ಎನ್ನುವರು ಅವನನ್ನು. ನಾಯಕನಾದವನು ಹೇಗಿರಬೇಕು ಎಂಬುದಕ್ಕೆ ಆತ ಒಂದು ಉದಾಹರಣೆ. ಒಂದು ಕೈಯಲ್ಲಿ ಪಾಶ, ಇನ್ನೊಂದು ಕೈಯಲ್ಲಿ ಅಂಕುಶ, ಮತ್ತೊಂದು ಕೈಯಲ್ಲಿ ಮೋದಕ, ಮಗದೊಂದು ವರದ ಹಸ್ತ. ನಾಯಕ ಗಜ ಬಲವನ್ನು ಹೊಂದಿರಬೇಕು. ಆದರೆ ಆಗ ಅಧಿಕಾರದ ಮದ ಏರುತ್ತದಲ್ಲವೆ? ಆದರ ನಿಯಂತ್ರಣಕ್ಕೆ ಪಾಶ (ಹಗ್ಗ) ಎನ್ನುವ ಅಂಕುಶಬೇಕು. ಅದು ಇನ್ನೊಬ್ಬರ ಕೈಯಲ್ಲಿ ಅಲ್ಲ ಬದಲಾಗಿ ನಾಯಕನ ಕೈಯಲ್ಲಿ. ನಾಯಕನು ಸ್ವನಿಯಂತ್ರಣಕೊಳ್ಳಪಡಬೇಕು. ತನ್ನ ರಕ್ಷಣೆಯಲ್ಲಿರುವ ಜನಕ್ಕೆ ಸದಾ ಸುಖ, ಸಂತೋಷ ಹಂಚಬೇಕು ಅನ್ನುವುದೇ ಆತನ ಕೈಯಲ್ಲಿರುವ ಮೋದಕದ ಆಶಯ. ತನ್ನ ಅಧೀನದಲ್ಲಿರುವವರು ಭಯದಿಂದ ಮುಕ್ತರಾಗಿರಬೇಕು ಎಂಬುದನ್ನು ಸಾರುವುದೇ ಆತನ ಅಭಯ ಹಸ್ತದ ಉದ್ದೇಶ. ಇನ್ನೊಬ್ಬರಿಗೆ ಕೇಡುಂಟು ಮಾಡಬೇಕು ಎನ್ನುವ ಮೂಷಕ ಸ್ವಭಾವದ ಜನರೂ ನಮ್ಮಲ್ಲಿದ್ದಾರೆ. ಅಂತಹವರನ್ನು ಅಂಕಿತದಲ್ಲಿ ಇಟ್ಟುಕೊಳ್ಳಬೇಕು. ಅವರ ಮೇಲೆ ನಾಯಕ ಸವಾರಿ ಮಾಡಬೇಕು ಎನ್ನುವುದನ್ನು ಆತ ಮೂಷಿಕ ವಾಹನನಾಗಿರುವುದು ಸೂಚಿಸುತ್ತದೆ.
ಗಣಪ ಉರಗ ಭೂಷಣನಾದುದರ ಬಗ್ಗೆ ಒಂದು ಕತೆಯಲ್ಲಿ ಇಂತಿದೆ. ಆತ ಭಕ್ತರಿಗೆ ಬಹುಬೇಗನೆ ಒಲಿಯುವ ಭಕ್ತ ಪ್ರಿಯ ಜಯಗಣಪ. ಆದ್ದರಿಂದ ಚೌತಿಯ ದಿನದಂದು ತನ್ನ ಭಕ್ತರೆಲ್ಲರ ಮನೆಗಳಿಗೆ ತೆರಳಿ ತನ್ನ ಇಷ್ಟದ ತಿನಸುಗಳಾದ ಅಪ್ಪ, ಕಜ್ಜಾಯ, ಕಬ್ಬು, ಚಿರೋಟಿ, ಎಳ್ಳು ಉಂಡೆ, ಮೋದಕ ಇತ್ಯಾದಿಗಳನ್ನು ಹೊಟ್ಟೆ ತುಂಬಾ ಮೆಲ್ಲುತ್ತಾ ಹಳ್ಳಿಯ ಗದ್ದೆ ಬಳಿ ತೆರಳುತ್ತಿದ್ದ. ಆಗ ಕಾಲುಜಾರಿ ಬಿದ್ದ ಪರಿಣಾಮ ಹೊಟ್ಟೆ ಹರಿದೇ ಬಿಡ್ತು. ಇದನ್ನು ಕಂಡ ಚಂದಿರ ಗಹಗಹಿಸಿ ನಗಲು ಕೋಪಗೊಂಡ ಗಣಪತಿಯು ಪಕ್ಕದಲ್ಲಿ ಹರಿದಾಡುತ್ತಿದ್ದ ಹಾವೊಂದನ್ನು ಹಿಡಿದು ತನ್ನ ಹೊಟ್ಟೆಗೆ ಕಟ್ಟಿಕೊಂಡು ಚಂದಿರನಿಗೆ ಗದ್ದೆಯ ಕೆಸರೆರಚಿದ. ಅಂದಿನಿಂದ ಗಣಪತಿ ಉರಗ ಭೂಷಣನಾದ. ಚಂದಿರನ ಮೇಲೆ ಕಾಣುವ ಕಪ್ಪು ಗುರುತು ಗಣಪತಿ ಎಸೆದ ಮಣ್ಣಿನ ಕಲೆ ಎಂಬ ಹೇಳಿಕೆಯಿದೆ. ಚೌತಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆಯೂ ಜನರಲ್ಲಿದೆ.
ಗಣಪತಿಯ ಬಗ್ಗೆ ಹೀಗೆ ಹಲವಾರು ಕತೆಗಳು ಕೇಳಿ ಬರುತ್ತವೆ. ಗಣೇಶನ ಬಗ್ಗೆ ದೇಶದಲ್ಲಿನ ಬಹುಜನ ಭಕ್ತಿ-ಭಾವನೆಯನ್ನು ಇರಿಸಿಕೊಂಡಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಗಣಪತಿಯ ಕೆಲವೊಂದು ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು. ಮುಖ್ಯವಾಗಿ ಶರವು, ಹಟ್ಟಿಂಗಡಿ, ಆನೆಗುಡ್ಡೆ, ಸೌತಡ್ಕ, ಕಾಸರಗೋಡಿನ ಮಧೂರು ಮೊದಲಾದವುಗಳು. ಜನರಿಗೆ ಗಣಪನೆಂದರೆ ಅಗಾಧ ಪ್ರೀತಿ ಮತ್ತು ಅಪಾರ ಭಕ್ತಿ. ಗಣಪನ ಚಿತ್ರಗಳನ್ನು ನೋಡಿದಷ್ಟು ಜನಕ್ಕೆ ಸಾಕೆನ್ನಿಸುವುದಿಲ್ಲ. ಆದ್ದರಿಂದಲೇ ಗಣಪನನ್ನು ವಿವಿಧ ವಸ್ತುಗಳಲ್ಲಿ ಚಿತ್ರಿಸಲಾಗುತ್ತದೆ. ಕಲ್ಲು, ಮಣ್ಣಿನಲ್ಲಿ ವಿಗ್ರಹಗಳನ್ನು ತಯಾರಿಸುವುದು ಮಾತ್ರವಲ್ಲದೆ ತರಕಾರಿ, ನಾಣ್ಯ, ಸಾಸಿವೆ ಕಾಳು, ಚಿನ್ನ, ಬೆಳ್ಳಿ, ಅಕ್ಕಿ, ಮರ ಹೀಗೆ ಬೇರೆ ಬೇರೆ ವಸ್ತುಗಳಲ್ಲಿ, ನಾನಾ ಭಂಗಿಗಳಲ್ಲಿ ರಚಿಸಲಾಗುತ್ತದೆ. ವಿನಾಯಕನ ಕಲಾಕೃತಿಗಳು ಚಿತ್ತಾಕರ್ಷಕವಾಗಿತ್ತವೆ. ಇದು ಗಣಪನ ಜನಮೆಚ್ಚುಗೆ ಕಾರಣವಾಗಿದೆ.
ಸಾರ್ವಜನಿಕ ಗಣೇಶೋತ್ಸವ
ದೇಶದೆಲ್ಲೆಡೆ ಸಾರ್ವಜನಿಕ ಗಣೇಶೋತ್ಸವ ಇಂದು ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಈ ಸಾರ್ವಜನಿಕ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭ ಲೋಕಮಾನ್ಯ ಬಾಲಗಂಗಾಧರ ತಿಲಕರು 1893ನೇ ಇಸವಿಯಲ್ಲಿ ಪ್ರಾರಂಭಿಸಿದರು. ಇದರ ಉದ್ದೇಶ ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ಅವರಲ್ಲಿ ದೇಶಪ್ರೇಮ ಬೆಳೆಸಬೇಕು. ಆ ಮೂಲಕ ಬ್ರಿಟಿಷರ ದಬ್ಭಾಳಿಕೆ ವಿರುದ್ಧ ಹೋರಾಟ ನಡೆಸುವುದಾಗಿತ್ತು. ಮೊದಲಿಗೆ ಮುಂಬಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಗೊಂಡಿತು. ಈ ಹಬ್ಬವನ್ನು ಭಾರತದಲ್ಲಿ ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಎಲ್ಲ ಜನರು ಒಂದುಗೂಡಿ ಆಚರಿಸಲಾಗುತ್ತದೆ.
ಗಣೇಶಾನಿ
ಸ್ತ್ರೀ ರೂಪದ ಗಣಿಪತಿಯು ಒಂದು ಅರ್ಪೂ ಕಲ್ಪನೆ. ಮಧ್ಯಪ್ರದೇಶದ ಭೇರಾಘಾಟನ ಯೋಗಿನೀ ದೇವಳದಲ್ಲಿ ಗಣಪತಿಯ ಸ್ತ್ರೀ ರೂಪದ ವಿಗ್ರಹವಿದೆ. ಅದನ್ನು ‘ಗಣೇಶಾನಿ’ ಎನ್ನುವರು. ಹಾಗೇ ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ ‘ಗಣೇಶಾನಿ’ ಪ್ರತಿಮೆಯಿದೆ. ಟಿಬೇಟಿನಲ್ಲಿಯೂ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳು ಕಾಣಸಿಗುತ್ತವೆ. ಶಿವನ ಶಕ್ತಿ ‘ಶಿವಾನಿ’ ಇದ್ದಂತೆ ಗಣೇಶನ ಶಕ್ತಿಯನ್ನು ‘ಗಣೇಶಾನಿ’ ಎಂದು ಜನರು ನಂಬಿರಬಹುದೆಂದು ಭಾವಿಸಲಾಗಿದೆ.