ಭಾನುವಾರ, ಅಕ್ಟೋಬರ್ 14, 2012

ತೆಂಗಿನ ಕಾಯಿ ಕೊಯ್ಯುವ ರೊಬೋಟ್!


ಮರವೇರಲು ಬಾರದವರು ಕೂಡ ಮರಹತ್ತಿ ತೆಂಗಿನ ಕಾಯಿ, ಅಡಿಕೆ ಕೀಳುತ್ತಾರೆ. ತೆಂಗು, ಅಡಿಕೆ ತೋಟಗಳಿಗೆ ಔಷ ಸಿಂಪಡಿಸುತ್ತಾರೆ. ಇದು ಸಾಧ್ಯವಾಗುವಂತಹ ಯಂತ್ರಗಳು ಈ ಹಿಂದೆಯೇ ಬಂದಿವೆ. ತೆಂಗಿನ ಕಾಯಿ ಕೀಳಲು ಕೆಲವು ಕಡೆ ಕೋತಿಗಳನ್ನೂ ಬಳಸುತ್ತಾರೆ. ಆದರೆ ಮರ ಹತ್ತುವ 'ರೊಬೋಟ್' ಕುರಿತು ಕೇಳಿದ್ದೀರಾ? ಕೇರಳದ ಕಲ್ಲಿಕೋಟೆಯ ಕೃಷಿಕ ಹಾಗೂ ವಿಜ್ಞಾನಿ ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ಪ್ರಕಾಶನ್ ತಟ್ಟಾರಿ ಸ್ವಂತ ಪರಿಶ್ರಮದಿಂದ ಇಂತಹ ಯಂತ್ರವನ್ನು ಸಿದ್ಧಪಡಿಸಿದ್ದಾರೆ. 'ತೆಂಗಿನ ಮರ ಏರುವ ರೊಬೋಟ್' ಎಂದು ಅವರೇ ಇದಕ್ಕೆ ನಾಮಕರಣ ಮಾಡಿದ್ದಾರೆ.
ನಬಾರ್ಡ್ನ ನೆರವಿನೊಂದಿಗೆ ಕಾಸರಗೋಡಿನ ಸಿಪಿಸಿಆರ್ಐಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಇದರ ಪ್ರಾತ್ಯಕ್ಷಿಕೆ ನಡೆಯಿತು. ಮಾನವ ತೆಂಗಿನ ಮರವೇರಿ ಮಾಡುವ ಎಲ್ಲ ಕೆಲಸಗಳನ್ನೂ ಈ 'ರೊಬೋಟ್' ನಿರ್ವಹಿಸುತ್ತದೆ. ದೂರದಿಂದ ನೋಡಿದರೆ ಬೃಹತ್ ಗಾತ್ರದ ಕಡ್ಡಿ ಹುಳದಂತೆ ಭಾಸವಾಗುತ್ತದೆ.
ರಿಮೋಟ್ ಬಳಕೆ 
ರಿಮೋಟ್ ಮೂಲಕ ರೊಬೋಟ್ ಅನ್ನು ನಿಯಂತ್ರಿಸಲಾಗುತ್ತದೆ. ರೀಚಾರ್ಜ್ ಮಾಡಬಹುದಾದ ಬ್ಯಾಟರಿಯಿಂದ ಚಲಿಸುವ ಸಣ್ಣ ಮೋಟಾರ್ನ ಸಹಾಯದಿಂದ ಇದು ಕಾರ್ಯ ನಿರ್ವಹಿಸುತ್ತದೆ. ಕಬ್ಬಿಣದ ಪೈಪುಗಳೆರಡನ್ನು ಒಂದರೊಳಗೊಂದಿರಿಸಿ, ಸ್ಪ್ರಿಂಗ್ ಆ್ಯಕ್ಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಪೈಪಿನ ಮೇಲ್ತುದಿಗೆ ಜೋಡಿಸಿರುವ ತಟ್ಟೆಯಾಕಾರದ ಬ್ಲೇಡ್ ತೆಂಗಿನ ಕಾಯಿ, ತೆಂಗಿನ ಗರಿಗಳನ್ನು ಕೊಯ್ಯುತ್ತದೆ. ಇದಕ್ಕೆ ಒಮ್ಮೆಗೇ ನಾಲ್ಕು ಬ್ಲೇಡ್ಗಳನ್ನು ಜೋಡಿಸಲು ಸಾಧ್ಯವಿದೆ. ರಿಮೋಟ್ ಕಂಟ್ರೋಲ್ನ ಒಂದು ಬಟನ್ ಅದುಮಿ ನಮಗೆ ಬೇಕಾದ ಕಾಯಿಯನ್ನೇ ಅಥವಾ ತೆಂಗಿನ ಗೊನೆಯೇ ಬೇಕಿದ್ದರೆ ಗೊನೆಯನ್ನೂ ಕೊಯ್ಯಬಹುದು. ಸುಮಾರು 80 ಕಿಲೋ ಭಾರವಿರುವ ಈ ರೊಬೋಟ್ಗೆ 25 ಅಡಿ ಎತ್ತರದ ತೆಂಗಿನ ಮರವನ್ನೇರಲು 40 ಸೆಕೆಂಡ್ ಸಾಕು. ಇದರ ತಯಾರಿಗೆ ರೂ. 15 ಸಾವಿರ ವೆಚ್ಚ ತಗುಲುತ್ತದೆ.
ತಟ್ಟಾರಿ ಸಾಧನೆ 
ತೆಂಗಿನ ಮರವನ್ನೇರುವ ವ್ಯಕ್ತಿಯಂತೆ ಮರವನ್ನು ಎರಡು ಕೈ ಮತ್ತು ಕಾಲುಗಳಿಂದ ಹಿಡಿದು ನೆಗೆಯುತ್ತಾ ಮರವೇರುವ ರೊಬೋಟ್ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತದೆ. ಯಂತ್ರದ ಕೈ, ಕಾಲುಗಳಿಗೆ ಹಿಗ್ಗುವ ಮತ್ತು ಕುಗ್ಗುವ ಗುಣವಿದೆೆ. ಇದರಿಂದ ಮರ ದಪ್ಪ ಅಥವಾ ತೆಳ್ಳಗಿದ್ದರೂ, ಎಷ್ಟೇ ಅಂಕು - ಡೊಂಕಾಗಿದ್ದರೂ ರೊಬೋಟ್ ಸಲೀಸಾಗಿ ಹತ್ತುತ್ತದೆ.
 ಇಂತಹ ರೊಬೋಟ್ ಒಂದನ್ನು ಕಂಡುಹಿಡಿದಿರುವುದು ಇದೇ ಮೊದಲು. ಇದು ಕೃಷಿ ಕ್ಷೇತ್ರದಲ್ಲಿ ಪ್ರಕಾಶನ್ ತಟ್ಟಾರಿ ಮಾಡಿದ ಮಹತ್ತರ ಸಾಧನೆ. ಆದರೆ ಇದಿನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದು ತಟ್ಟಾರಿ ಬಯಕೆ. ಸಾಮಾನ್ಯ ರೈತರಿಗೆ ರೊಬೋಟ್ ಬೆಲೆ ಸ್ವಲ್ಪ ದುಬಾರಿ ಎನಿಸಬಹುದು. ಆದರೆ ಕಾರ್ಖಾನೆಗಳ ಮೂಲಕ ಬೃಹತ್ ಮಟ್ಟದಲ್ಲಿ ಇವುಗಳ ಉತ್ಪಾದನೆ ಆರಂಭವಾದರೆ ಬೆಲೆ ಕಡಿಮೆಯಾಗುತ್ತದೆ. 'ಈಗ ಕೇವಲ ಒಂದು ಯಂತ್ರವನ್ನು ಮಾತ್ರ ತಯಾರಿಸಲಾಗಿದೆ. ಇದರ ಕಾರ್ಯ ವೈಖರಿಯ ಕುರಿತು ಕೃಷಿಕರಿಗೆ ತಿಳಿಸಿ, ಅವರಿಂದ ಯಂತ್ರದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧೆಡೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ' ಎನ್ನುತ್ತಾರೆ ತಟ್ಟಾರಿ.
ರೈತರಿಗೆ ಸಂತಸ
ಇಲ್ಲಿ ಮನುಷ್ಯರು ಮರವೇರದೆ ಕೇವಲ ಯಂತ್ರವೊಂದು ಮರವೇರಿ ತೆಂಗಿನ ಕಾಯಿ ಕೊಯ್ಯುವುದು ವಿಶೇಷ. ತೆಂಗಿನ ಮರವೇರುವ ಕಾರ್ಮಿಕರ ಕೊರತೆಯಿಂದ ಕಂಗೆಟ್ಟಿರುವ ರೈತರ ಪಾಲಿಗೆ ಇದು ಸಂತೋಷದ ಸಂಗತಿ. ಅಲ್ಲದೆ ಅಡಿಕೆ, ತೆಂಗಿನ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದರಿಂದ ಮಧ್ಯಮ ವರ್ಗದ ಕೃಷಿಕರು ಕೂಡ ಇಂತಹ ಯಂತ್ರಗಳನ್ನು ಕೊಳ್ಳಲು ಮನಸ್ಸು ಮಾಡಬಹುದೇನೋ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ