ಹರಿವೆ ಉಷ್ಣವಲಯದಲ್ಲಿ ಬೆಳೆಯುವು ಸೊಪ್ಪು ತರಕಾರಿ. ಇದರಲ್ಲಿ ಅಧಿಕವಾಗಿರುವ ಪೌಷ್ಟಿಕಾಂಶ, ಔಷಧೀಯ ಗುಣ ದೇಹಾರೋಗ್ಯ ಕಾಪಾಡಲು ಸಹರಕಾರಿ. ಇದು ಹರಿವೆಯ ಹಿರಿಮೆ ಕೂಡ. ಹರಿವೆ ಕಾಂಡವು ಅಷ್ಟು ಗಟ್ಟಿಯಾಗಿರುವುದಿಲ್ಲ. ಗಿಡದಲ್ಲಿ ಹಲವಾರು ಕವಲೊಡೆದು ರೆಂಬೆಗಳು ಹುಟ್ಟಿಕೊಳ್ಳುವುದು. ಇದರಿಂದ ಪೊದೆಯಂತೆ ಹರಡಿ ಬೆಳೆಯುವುದು.
ಮೂಲ: ಹರಿವೆ ಕೃಷಿಯನ್ನು ವರ್ಷದ ಎಲ್ಲ ಕಾಲದಲ್ಲೂ ಮಾಡಬಹುದು. ಮಳೆಗಾಲ ಇದಕ್ಕೆ ಹೆಚ್ಚು ಉತ್ತಮ. ಇದು ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣದ ರಾಜ್ಯಗಳಲ್ಲಿ ಕಂಡುಬರುವುದರಿಂದ ಸ್ವದೇಶಿ ಮೂಲದ್ದು ಎಂದು ಹೆಚ್ಚಿನ ಮಂದಿ ಅಂದುಕೊಂಡಿದ್ದಾರೆ. ಆದರೆ ಇದು ದೂರದ ದಕ್ಷಿಣ ಅಮೆರಿಕಾದ ಮೆಕ್ಷಿಕೊ ಮೂಲದ್ದಾಗಿದೆ. ಅಲ್ಲಿ ಇದನ್ನು ವಾರ್ಷಿಕ ಕೃಷಿಯಾಗಿ ಬೆಳೆಯುತ್ತಾರೆ.
ವೈವಿಧ್ಯ ಹೆಸರು: ಹರಿವೆ ‘ಅಮರಾಂಥೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು ಹಲವಾರು ಹೆಸರುಗಳನ್ನು ಹೊಂದಿದೆ. ಮುಖ್ಯವಾಗಿ ಹರಿವೆ, ಹರವಿ, ಹರ್ಗಿ, ದಂಟಿನ ಸೊಪ್ಪು, ಕೀರೇ ಸೊಪ್ಪು, ರಾಜಗೀರ್, ಕಿರ್ಕಸಾಲಿ ಇತ್ಯಾದಿ. ಭಾರತದಲ್ಲಿ ಮಾತ್ರವಲ್ಲದೆ ಮಲೇಶಿಯಾ, ತೈವಾನ್, ಸೌತ್ ಫೆಸಿಪಿಕ್ಗಳಲ್ಲಿ ಇದು ಕಾಣ ಸಿಗುತ್ತದೆ.
ವಿಧ: ಹರಿವೆಯಲ್ಲಿ ಮುಖ್ಯವಾಗಿ ಬಣ್ಣಗಳ ಆಧಾರದಲ್ಲಿ ಎರಡು ವಿಧ. ಇಂದು ಕೆಂಪು ಹರಿವೆ, ಇನ್ನೊಂದು ಬಿಳಿ ಹರಿವೆ. ಇವುಗಳಲ್ಲದೆ ಅದರ ಎಲ್ಲೆಗಳಲ್ಲಿನ ವ್ಯತ್ಯಾಸದ ಹಿನ್ನಲೆಯಲ್ಲಿ ಆರು ವಿಧಗಳನ್ನು ಗುರುತಿಸಲಾಗಿದೆ. ಹಳ್ಳಿಗಳಲ್ಲಿ ಚಿಲಕರಿವೆ, ಗೊದ್ದರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ನೋಡಬಹುದು.
ಪೌಷ್ಟಿಕಾಂಶ: ಹರಿವೆಯಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ, ಜೀವಸತ್ವಗಳು, ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿಗಳಿವೆ. ಇದರಿಂದ ಹರಿವೆ ನಮ್ಮ ದೇಹಕ್ಕೆ ಆಹಾರ ರೂಪದ ವೈದ್ಯ ಕೂಡ ಹೌದು.
ಅಡುಗೆ: ಹರಿವೆ ಸೊಪ್ಪು, ದಂಡನ್ನು ಬಳಸಿ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸುತ್ತಾರೆ. ಮುಖ್ಯವಾಗಿ ಪಲ್ಯ, ಸಾರು, ಸಾಸಿವೆ ಇತ್ಯಾದಿ. ಹರಿವೆಯ ಬೀಜವನ್ನು ಧಾನ್ಯದ ತೆನೆಯಾಗಿ ಬಳಸುತ್ತಾರೆ. ಅದನ್ನು ಒಣಗಿಸಿ, ಹಿಟ್ಟು ತಯಾರಿಸಿ ಅದರಿಂದ ಹಪ್ಪಳ, ರೊಟ್ಟಿ ಮೊದಲಾದವುಗಳನ್ನು ತಯಾರಿಸುತ್ತಾರೆ.
ಕೃಷಿ: ಹರಿವೆ ಕೃಷಿಗೆ ಕಪ್ಪು, ಕೆಂಪು ಗೊಡ್ಡು ಮಣ್ಣು, ಮರಳು ಮಿಶ್ರಿತ ಗೊಡ್ಡು ಮಣ್ಣು ಸೂಕ್ತ. ಸ್ಥಳಾವಕಾಶದ ಕೊರತೆ ಇದ್ದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ ಕೃಷಿ ಮಾಡಬಹುದು. ಒಂದರಿಂದ ಒಂದೂವರೆ ಅಂಗುಲ ಎತ್ತರದ ಮಡಿಗಳನ್ನು ತಯಾರಿಸಿ ಅದರಲ್ಲಿ ಬೀಜ ಬತ್ತನೆ ಮಾಡಬೇಕು. ಮಡಿ ತಯಾರಿಸು ವೇಳೆ ಮಣ್ಣಿಗೆ ಒಣಗೊಬ್ಬರ ಮಿಶ್ರ ಮಾಡಿದರೆ ಉತ್ತಮ. ಉದ್ದದ ಸಾಲುಗಳಾಗಿ ಅಥವಾ ಅಗಲವಾಗಿ ಮಣ್ಣು ಹರಡಿ ಕೂಡ ಮಡಿ ತಯಾರಿಸಿಬಹುದು. ಸಸಿ ಮೊಳಕೆ ಬಂದೊಡನೆ ಅಗಲವಾಗಿ ಮಣ್ಣು ಹರಡಿ ನಿರ್ಮಿಸಿದ ಮಡಿಗಳಿಂದ ಕಿತ್ತು ಉದ್ದದ ಸಾಲುಗಳಲ್ಲಿ ನಾಟಿ ಮಾಡಿದರೆ ಹರಿವೆ ಹುಲುಸಾಗಿ ಬೆಳೆಯುತ್ತದೆ. ಅಲ್ಲದೆ ಗೊಬ್ಬರ, ನೀರು ಹಾಕಲು, ಕಳೆಕೀಳಲು ಸಹಕಾರಿ.
ಪುಡಿ ಗೊಬ್ಬರಕ್ಕೆ ಬೀಜವನ್ನು ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಚಿಕ್ಕದಾಗಿರುವ ಹರಿವೆ ಬೀಜ ಸಮಾನವಾಗಿ ಹರಡಿ ಬೀಳುವುದು. ಬೀಜ ಬಿತ್ತಿದ ಕೂಡಲೇ ಮಡಿಯ ಮೇಲೆ ಹುಡಿ ಮಣ್ಣನ್ನು ತೆಳುವಾಗಿ ಹರಡಬೇಕು. ದಿನಕ್ಕೆ ಎರಡು ಬಾರಿ ನೀರು ಹಾಕಬೇಕು.
ಗೊಬ್ಬರ: ಹಟ್ಟಿಗೊಬ್ಬರ, ತರಗೆಲೆ, ಸೊಪ್ಪು, ಬೂದಿ, ಆಕಳ ಗಂಜಲ, ಯೂರಿಯಾ ಇತ್ಯಾದಿಗಳನ್ನು ಬಳಸಲಾಗುತ್ತದೆ.
ಕೊಯ್ಲು: ಬತ್ತನೆ ಮಾಡಿದ 20-25 ದಿನಗಳಲ್ಲಿ ಸೊಪ್ಪು ಕೀಳಬಹುದು. ಹಿಡಿಹಿಡಿಯಾಗಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಸುಮಾರು ಏಳು - ಎಂಟು ತಿಂಗಳುಗಳ ಕಾಲ ಹರಿವೆ ಕೊಯ್ಲಿಗೆ ದೊರೆಯುತ್ತದೆ. ದಂಟನ್ನು ಕೊಯ್ಲು ಮಾಡುವಾಗ ಬುಡದಿಂದ ಒಂದು ಅಂಗುಲದಷ್ಟು ಮೇಲಿನಿಂದ ತುಂಡರಿಸಬೇಕು. ಕೊಯ್ಲು ಮಾಡಿದ ಅನಂತರ ಗಿಡಕ್ಕೆ ಹುಡಿಗೊಬ್ಬರ, ಬೂದಿ, ಸುಡುಮಣ್ಣು ನೀಡಬೇಕು.
ಔಷಧೀಯ ಗುಣ: ಖನಿಜ, ಕಬ್ಬಿಣದ ಅಂಶ ಹರಿವೆಯಲ್ಲಿ ಅಧಿಕವಾಗಿರುವುದರಿಂದ ರಕ್ತದ ಉತ್ಪಾದನೆಗೆ ಸಹಕಾರಿಯಾಗಿದೆ. ಹರಿವೆಯಲ್ಲಿನ ನಾರಿನ ಅಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಿಗೆ ಹರಿವೆ ಸೊಪ್ಪಿನ ರಸಕ್ಕೆ ಚಿಟಿಕೆ ಏಲಕ್ಕಿ ಪುಡಿ ಮತ್ತು ಜೇನು ಮಿಶ್ರ ಮಾಡಿ ನೀಡುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ. ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆ ಹಾಲು ವೃದ್ಧಿಸುವುದು. ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಹರಿವೆ ರಸ, ನಿಂಬೆ ರಸ ಮಿಶ್ರ ಮಾಡಿ ನೀಡುತ್ತಾರೆ. ಬಾವು, ಗಾಯಗಳಾಗಿದ್ದರೆ ಹರಿವೆ ಸೊಪ್ಪಿನ ಲೇಪ ಹಾಕಿದರೆ ಬೇಗನೆ ಗುಣವಾಗುವುದು. ಹರಿವೆ ಸೊಪ್ಪಿನ ಬಳಕೆ ಅಜೀರ್ಣಕಾರಕ ಭೇದಿ, ಡಯೇರಿಯ ತಡೆಗಟ್ಟ ಬಹುದು. ಕೀರೇ ಸೊಪ್ಪಿನ ರಸ ಮತ್ತು ನಿಂಬೆ ರಸ ಮಿಶ್ರ ಮಾಡಿ ತಲೆಗೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುವುದು. ಬೇಸಗೆಯಲ್ಲಿ ಹರಿವೆ ಸೊಪ್ಪು ಸೇವನೆಯಿಂದ ದೇಹ ತಂಪಾಗಿರುತ್ತದೆ. ಮುಳ್ಳರಿವೆಯಲ್ಲಿ ಬೆನ್ನು, ಕಾಲು ಸೆಳೆತ ತಡೆಗಟ್ಟುವ ಗುಣವಿದೆ. ಹರಿವೆ ಸೊಪ್ಪನ್ನು ಬೇಯಿಸಿದ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು, ಗಂಟಲು ಕಿರಿಕಿರಿ ನಿವಾರಣೆ. ಅನಿಮಿಯ, ರಕ್ತದ ದೋಷ ಇರುವವರು ಹರಿವೆ ಬೀಜದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಿದರೆ ಉತ್ತಮ. ಅಲ್ಲದೆ ಹರಿವೆ ಸೊಪ್ಪಿನಲ್ಲಿ ರಕ್ತ ಸ್ರಾವ ತಡೆಗಟ್ಟುವ ಗುಣವಿದೆ.