ಭಾನುವಾರ, ಜುಲೈ 29, 2012

ಚಿಂದಿಯಲ್ಲಿ ಅರಳುವ ಕಲೆ ‘ಸಾಂಝಿ’


ಉಪಯೋಗಿಸಿದ ಯಾವುದೇ ಹಾಳೆ ಅಥವಾ ಖಾಲಿ ಕಾಗದವೇ ಇರಬಹುದು ಅದನ್ನು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಹಾಕಬೇಕೆಂದಿಲ್ಲ. ಬದಲಾಗಿ ವಿವಿಧ ರೀತಿಯಲ್ಲಿ ಕತ್ತರಿಸಿ ಅವುಗಲ್ಲಿ ಬೇರೆ ಬೇರೆ ಕಲಾಕೃತಿಗಳನ್ನು ರಚಿಸಬಹುದು. ಇದು ಭಾರತದ ಪುರಾತನ ಕಲಾಪ್ರಕಾರಗಳಲ್ಲಿ ಒಂದು. ಕಾಗದವನ್ನು ಚಿತ್ತಾಕರ್ಷಕವಾಗಿ ಕತ್ತರಿಸುವ ಈ ಕಲೆಗೆ ‘ಸಾಂಝಿ’ ಎನ್ನುತ್ತಾರೆ.
ಸಾಂಝಿ ಕಲೆಯಲ್ಲಿ ಬಣ್ಣ, ಕುಂಚಗಳ ಹಂಗಿಲ್ಲದೆ ಕತ್ತರಿ, ಚಾಕುಗಳನ್ನು ಬಳಸಿ ಸುಂದರವಾದ ಆಕೃತಿಗಳನ್ನು ರಚಿಸಸಲಾಗುತ್ತದೆ. ಇದು ಕಲಾವಿದನ ಕೈಚಳಕ, ನೈಪುಣ್ಯಕ್ಕೆ ಸಾಕ್ಷಿ. ಇದರಲ್ಲಿ ಹೆಚ್ಚಿನ ದೈಹಿಕ ಶ್ರಮದ ಬಳಕೆಯಿಲ್ಲ. ಬದಲಾಗಿ ಕಲಾಗರನ ಸೃಜನಶೀಲ ಗುಣ, ಚಾಣಾಕ್ಷತನ ಹಾಗೂ ಚಾಕಚಕ್ಯತೆ ವ್ಯಕ್ತವಾಗುತ್ತದೆ.
ಭಕ್ತಿ ಮಾರ್ಗದ ಕೊಡುಗೆ 
ಈ ಕಲೆಯು ನಮ್ಮ ದೇಶದಲ್ಲಿ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ. ಉತ್ತರ ಭಾರತದಲ್ಲಿ ಸಾಂಝಿ ಕಲೆ ತುಂಬಾ ಪ್ರಾಮುಖ್ಯ ಪಡೆದಿದೆ. ಭಕ್ತಿ ಮಾರ್ಗದ ಕೊಡುಗೆಯಾಗಿ ಇದು ಬೆಳೆದು ಬಂದಿದೆ. ಈ ಕಲಾಕೃತಿಗಳನ್ನು ಮೊದಲಿಗೆ ದೇವಾಲಯಗಳಲ್ಲಿ ಮಾತ್ರ ಬಳಸುತ್ತಿದ್ದರಂತೆ. ಅನಂತರ ಸಾರ್ವಜನಿಕರ ಉಪಯೋಗಕ್ಕೂ ಬಂದಿತು. ಇಂದು ರಂಗೋಲಿ ಹಾಕಲು ಬಳಸುವ ವಿವಿಧ ವಿನ್ಯಾಸದ ತಟ್ಟೆಗಳ ಕಲ್ಪನೆ ಭಕ್ತಿ ಪಂಥದ ಕಾಲದಲ್ಲೇ ಇತ್ತು. ಆಗ ಕಾಗದಗಳನ್ನು ಕೆಲವೊಂದು ದೇವರಗಳ ಆ ಕಲಾಕಾರದಲ್ಲಿ ಕತ್ತರಿಸಿ ಅವುಗಳ ಮೇಲೆ ಬಣ್ಣದ ಹುಡಿಗಳನ್ನು ಹರಡಿ ಅನಂತರ ಕಾಗದವನ್ನು ಮೆಲ್ಲನೆ ಮೇಲಕ್ಕೆತ್ತಿ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರು.
ಹಬ್ಬ ಹರಿದಿನಗಳ ಸಂದರ್ಭ ದೇವಾಲಯಗಳಲ್ಲಿ, ಕೆಲವು ಮನೆಗಳ ಮುಂದೆಯೂ ಇವುಗಳೇ ವಿಶೇಷ ಆಕರ್ಷಣೆ. ‘ಸಾಂಝಿ’ಯಲ್ಲಿ ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸುವ ಕಲಾಕೃತಿಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. ಈ ಕಲೆ ಕೇವಲ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ ದಕ್ಷಿಣದ ಕೇರಳ, ಕರ್ನಾಟಕಗಳಲ್ಲಿಯೂ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.
ವಿದ್ಯಾವಂತರಾಗಿರಬೇಕಿಲ್ಲ 
ಸಾಂಝಿ ಕಲಾವಿದರಾಗಲು ಯಾವುದೇ ಶಾಲೆ, ಕಾಲೇಜುಗಳಲ್ಲಿ ಓದಿರಬೇಕಿಲ್ಲ. ಇದು ವ್ಯಕ್ತಿಯ ಆಸಕ್ತಿ, ಚಿಂತನೆ ಮತ್ತು ಕೈಚಳಕವನ್ನು ಅವಲಂಭಿಸಿದೆ. ಎಂಥವರಿಗೂ ಇದನ್ನು ಸುಲಭವಾಗಿ ಅಭ್ಯಸಿಸಬಹುದು. ಈ ಕಲೆಯನ್ನು ಯಾವುದೇ ಒಂದು ವರ್ಗ ಅಥವಾ ಜನಾಂಗಕ್ಕೆ ಸೇರಿದವರೇ ಅಭಿವೃದ್ಧಿಪಡಿಸಿರುವುದಲ್ಲ. ಇದು ಜನಪದ ಕಲೆಯಾಗಿದ್ದು, ಒಬ್ಬರಿಂದೊಬ್ಬರಿಗೆ ಕಲಿಸಲ್ಪಟ್ಟು, ಮುಂದುವರಿದುಕೊಂಡು ಬಂದಿದೆ.
 ಮದುವೆ, ಮುಂಜಿಗಳ ಸಂದರ್ಭ ಮನೆ ಮಂಟಪಗಳ ಅಲಂಕಾರಕ್ಕಾಗಿಯೂ ಈ ಕಲೆಯನ್ನು ಬಳಸುತ್ತಾರೆ. ಉತ್ತರ ಕನ್ನಡದ ಕುಮುಟಾ, ಕಾರವಾರ, ಶಿರಸಿ, ಸಿದ್ದಾಪುರ ಮುಂತಾದೆಡಡೆಗಳಲ್ಲಿ ಇದನ್ನು ‘ಪರ್ಪರೆ’ ಎಂದು ಕರೆಯುತ್ತಾರೆ. ಇಂತಹ ಅನೇ ಕಲೆಗಳು ಭಾರತದ ವಿವಿಧೆಡೆಗಳಲ್ಲಿವೆ. ಆದರೆ ಆಧುನೀಕರಣದಿಂದಾಗಿ ಅವು ಇಂದು ಮೂಲೆ ಸೇರಿ ನಶಿಸಿ ಹೋಗುತ್ತಿವೆ. ನಮ್ಮ ದೇಶದ ಸಾಂಸ್ಕೃತಿಕ ಸಂಪತ್ತುಗಳಾದ ಅಂತಹ ಕಲೆಗಳನ್ನು ಗುರುತಿಸಿ, ಉಳಿಸಿ, ಬೆಳೆಸುವತ್ತ ಸರಕಾರಗಳು ಗಮನ ಹರಿಸಬೇಕಿದೆ.
ವಿವಿಧ ರಾಷ್ಟ್ರಗಳಲ್ಲಿ ‘ಸಾಂಝಿ’
ಕಲೆಯು ಆಯಾ ದೇಶಗಳ ಸಂಸ್ಕೃತಿಯ ಪ್ರತೀಕ. ಭಾರತದ ಜನಪದ ಕಲೆಯೆಂದೇ ಗುರುತಿಸಲ್ಪಟ್ಟಿರುವ ‘ಸಾಂಝಿ’ಯನ್ನು ಹೋಲುವ ಅನೇಕ ಕಲಾಪ್ರಕಾರಗಳು ಹಲವಾರು ದೇಶಗಳಲ್ಲಿ ಕಾಣಬಹುದು. ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿವೆ. ಚೀನಾ ಹಾಗೂ ಜಪಾನ್ಗಳಲ್ಲಿ ‘ಕಿರಿ-ಗಾಮಿ’, ‘ಕಿಪಿ-ಇ’, ‘ಮನ್-ಕಿರಿ’, ‘ಸೆನ್-ಶಿ’, ‘ಜಿಯಾನ್-ಝಿ’ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿವೆ. ಪೋಲ್ಯಾಂಡ್ನಲ್ಲಿ ‘ವಿಚಿನಾನಿಕಿ’, ಸ್ಪೇನ್ನಲ್ಲಿ ‘ಆಪೆಲ್ ಪಿಕಡೊ’ ಫ್ರಾನ್ಸ್ನಲ್ಲಿ ‘ಡೆಕೋಪರ್’, ಅಮೇರಿಕಾದಲ್ಲಿ ‘ಪೆಪಿಟೋಮನಿ’ ಎಂಬ ಹೆಸರಿನಲ್ಲಿ ಈ ಕಲೆ ಪ್ರಚಲಿತದಲ್ಲಿದೆ.

ಕಾವಿಯನುಟ್ಟು ದೀಕ್ಷೆಯ ತೊಟ್ಟು

ಕಾವಿಯನುಟ್ಟು
ದೀಕ್ಷೆಯ ತೊಟ್ಟು
ಕಾಮ, ಕ್ರೋದವ ಬದಿಯಲಿ ಬಿಟ್ಟು
ಭಗವಂತನತ್ತ ದೃಷ್ಟಿಯ ನೆಟ್ಟು

ಕಾಶಿಗೆ ಯಾತ್ರೆ ಹೋಗೊಣ
ಬದುಕನು ಸಾರ್ಥಕ ಗೊಳಿಸೋಣ
ವಿಶ್ವನಾಥನ ನೆನೆಯೋಣ
 ಕಷ್ಟ ಕಾರ್ಪಣ್ಯಗಳ ಮರೆಯೋಣ

ಪವಿತ್ರ ಕ್ಷೇತ್ರಗಳಿಗೆ ಪ್ರದಕ್ಷಿಣೆ ಹಾಕಿ
ಜಂಜಾಟದ ಜೀವನ ಕಳೆಯೋಣ
ಪುಣ್ಯ ಭೂಮಿಯ ಸ್ಪರ್ಶಿಸಿ ನಾವು
ಸುಂದರ ಮೂರ್ತಿಯ ಕಣ್ತುಂಬೋಣ

ವೃದ್ಧಾಪ್ಯದಲಿ ವೃತಾಚರಣೆ ಮಾಡಿ
ಆರೋಗ್ಯ ಭಾಗ್ಯವ ಪಡೆಯೋಣ
ಆಸೆ, ಆಕಾಂಕ್ಷೆಗಳಿಗೆಲ್ಲ ಲಗಾಮು ಹಾಕಿ
ತೀರ್ಥಾಟನೆ ಗೈದು ಬಾಳಲಿ ನೆಮ್ಮದಿ ಗಳಿಸೋಣ

ಹೀರೆಯ ಹಿರಿತನ


ಹೇರಳ ಪೌಷ್ಟಿಕಾಂಶ ಭರಿತ ಹಸುರು ತರಕಾರಿ ಹೀರೆ. ಭಾರತವೇ ಹೀರೆ ಕಾಯಿಯ ಮೂಲ ಎಂದು ಹಲವ ಸಸ್ಯಶಾಸ್ತ್ರಜ್ಞರು ಅಭಿಪ್ರಾಯಿಸಿದರೆ, ಕೆಲವರು ಮಾತ್ರ ಭಾರತ, ಇಂಡೋನೇಶ್ಯಾ, ಸುಡಾನ್, ಜಾವಾದ್ವೀಪಗಳು ಕೂಡ ಇದರ ತವರು ಎಂದಿದ್ದಾರೆ. ಸಸ್ಯಶಾಸ್ತ್ರದ ಪ್ರಕಾರ ಸೋರೆ, ಹಾಗಲದಂತೆ ಹೀರೆಯು ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಹೀರೆಯ ಬಳ್ಳಿಗೂ ಸೋರೆಯ ಬಳ್ಳಿಗೂ ಯಾವುದೇ ಸಾಮ್ಯತೆ ಇಲ್ಲ. ದರೆ ಹಾಗಲದ ಬಳ್ಳಿ, ಎಲೆ, ಬೀಜಕ್ಕೂ ಸ್ವಲ್ಪ ಹೋಲಿಕೆ ಇದೆ. ಕಾಯಿಯ ಆಕಾರ, ರುಚಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದರ ಬಳ್ಳಿ, ಎಲೆ, ಕಾಯಿ ಎಲ್ಲವೂ ಕಡು ಹಸುರು ಬಣ್ಣದಿಂದ ಕೂಡಿರುತ್ತವೆ. ಕಾಯಿ ಉದ್ದವಾಗಿದ್ದು, ತುದಿ ಸ್ವಲ್ಪ ಉಬ್ಬಿರುತ್ತವೆ. ಕಾಯಿಗಳಲ್ಲಿ ಉದ್ದಕ್ಕೆ ಉಬ್ಬಿದ ಏಣು, ಅಗಲವಾದ ಗೀರುಗಳಿರುತ್ತವೆ. ಕಾಯಿಗಲ ಮೇಲ್ಮೈ ಒರಟಾಗಿರುತ್ತವೆ. ಬಲಿತ ಬೀಜಗಳು ಕಪ್ಪು ಬಯ ಹೊಂದಿದ್ದು, ಸಿಪ್ಪೆ ಗಟ್ಟಿಯಾಗಿರುತ್ತವೆ.
ಪೌಷ್ಟಿಕಾಂಶ: ಮಾನವನ ಶರೀಕ್ಕೆ ಅತ್ಯಗತ್ಯವಾದ ಪ್ರೊಟೀನ್, ಶರ್ಕರಪಿಷ್ಟ, ರಂಜಕ, ಕೊಬ್ಬು, ಕಬ್ಬಿಣ, ಥಯಮಿನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ರೈಬೋಫ್ಲೆವಿನ್, ‘ಸಿ’ ಜೀವಸತ್ವ ಮುಂತಾದವುಗಳು ಹೀರೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿದೆ.
ಔಷಧೀಯ ಗುಣ: ಮೂಲವ್ಯಾದಿ, ಸಕ್ಕರೆ ಕಾಯಿಲೆ ಇರುವವರು ಹೀರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಹೀರೆಯ ಎಲೆಗಳ ರಸವನ್ನು ಹಚ್ಚುವುದರಿಂದ ಗಾಯ ವಾಸಿಯಾಗುವುದು. ಹೀರೆ ಕಾಯಿಯ ಬೀಜ ಮತ್ತು ಮಜ್ಜಿಗೆ ಸೇವನೆಯಿಂದ ಆಮಶಂಕೆ ಶಮನಕ್ಕೆ ಸಹಕಾರಿ.
ತಳಿ: ಹೀರೆಕಾಯಿಯಲ್ಲಿ ಸ್ಥಳೀಯ ತಳಿಗಳಲ್ಲದೆ ಸಂಶೋಧನೆಗಲ ಮೂಲಕ ಕೆಲವೊಂದು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೂಸಾನಸ್ದಾರ್: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಇದರಲ್ಲಿ ರುಚಿ, ಫಸಲೂ ಅಧಿಕ. ಸಿ.ಓ.-1: ಇದನ್ನು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಸಂಶೋಧಿಸಿದೆ.
ಅಡುಗೆ: ಹೀರೆಕಾಯಿಯನ್ನು ಬಳಸಿ ಬೇರೆ ಬೇರೆ ತರದ ಹಲವಾರು ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಮೇಲೋಗರ, ಸಾಂಬಾರು, ಪೋಡಿ, ಹೀರೆಕಾಯಿ ಚಿಪ್ಪೆಯ ಚಟ್ನಿ, ತಂಬ್ಳಿ ಇತ್ಯಾದಿ.
 ಕೃಷಿ: ಹೀರೆ ವರ್ಷದ ಎಲ್ಲ ಕಾಲದಲ್ಲೂ ನಾಟಿ ಮಾಡಬಹುದಾದ ಬೆಳೆ. ಆದರೆ ಉಷ್ಣ ಹವಾಗುಣ ಬೆಳೆಗೆ ಉತ್ತಮ. ಸಾಮಾನ್ಯವಾಗಿ ಜೂನ್-ಜುಲೈಯಲ್ಲಿ ಇದರ ನಾಟಿಮಾಡುತ್ತಾರೆ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಕಪ್ಪು ಅಥವಾ ಕೆಂಪು ಗೊಡ್ಡು ಮಣ್ಣು ಹೀರೆ ಕೃಷಿಗೆ ಸೂಕ್ತ. ಸುಮಾರು 2-21/2 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ: ಹೀರೆ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಪ್ರಮೇಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುವುಣಿಸುವುದು ಅಗತ್ಯ.

ಹೊರೆಯಲ್ಲ ಸೋರೆ


ಸಸ್ಯಶಾಸ್ತ್ರದ ಪ್ರಕಾರ ಸೋರೆ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು, ಬಳ್ಳಿಯಂತೆ ಬೆಳೆಯುವ ಗಿಡವಾಗಿದೆ. ಸೋರೆ ಬಳ್ಳಿಯು ಬಿಳಿ ಹಸುರ ಬಣ್ಣದಿಂದ ಕೂಡಿದ್ದು, ಮೇಲ್ಮೈ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತ. ಇದು ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇತರ ಬೆಳೆಗಳಿಗೆ ಹೋಲಿಸಿದರೆ ಸೋರೆ ಕೃಷಿ ಹೊರೆಯಲ್ಲ. ಇದೊಂದು ಸುಲಭ ಮತ್ತು ಕಡಿಮೆ ಖರ್ಚಿನ ಬೆಳೆಯಾಗಿದೆ.
ಸೋರೆಯ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ದಕ್ಷಿಣ ಭಾರತ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ ಮತ್ತು ಬಳಸುತ್ತಾರೆ.
ಔಷಧೀಯ ಗುಣ: ಕೆಲವೊಂದು ಔಷಧದ ತಯಾರಿಯಲ್ಲಿ ಸೋರೆಕಾಯಿಯನ್ನು ಬಳಸಲಾಗುತ್ತದೆ. ವೈದರು ಕೆಲ ಕಾಯಿಲೆಗಳಿಗೂ ಸೋರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಲು ಸೂಚಿಸುತ್ತಾರೆ.
ಪೌಷ್ಟಿಕಾಂಶ:  ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್, ರಂಜಕ, ‘ಸಿ’ ಜೀವಸತ್ವ ಇತ್ಯಾದಿ ಪೌಷ್ಟಿಕಾಂಶಗಳು ಹೇರಳವಾಗಿದೆ.
ಅಡುಗೆ: ಸೋರೆಕಾಯಿಯನ್ನು ಬಳಸಿ ಹಲವಾರು ರುಚಿಗಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಎಳೆಯ ಸೋರೆಕಾಯಿ ಪದಾರ್ಥಕ್ಕೆ ಉತ್ತಮ. ಮುಖ್ಯವಾಗಿ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ (ಬಾಲೆ ಎಲೆ ಕಡುಬು) ಇತ್ಯಾದಿಗಳನ್ನು ತಯಾರಿಸುತ್ತಾರೆ.
ಕೃಷಿ:  ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಉತ್ತಮ. ಇದು ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೈತ್ಯ ಹವಾಗುಣ ಈ ಬೆಳೆಗೆ ಅಷ್ಟು ಸಹಕಾರಿಯಲ್ಲ. ದೀರ್ಘ ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ. ಸೋರೆ ಕೃಷಿಗೆ ಜೂನ್-ಜುಲೈ, ಅಕ್ಟೋಬರ್-ನವೆಂಬರ್ ಅಥವಾ ಫೆಬ್ರವರಿ-ಮಾರ್ಚ್ ತಿಂಗಳುಗಳು ಸೂಕ್ತ ಸಮಯ. ಸುಮಾರು 2 ಫೀಟ್ ಅಗಲದ ಮಡಿಗಳನ್ನು ತಯಾರಿಸಿ. ಮಡಿ ತಯಾರಿ ವೇಳೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1 1/2 ರಿಂದ 2 ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಬೀಜ ಬಿತ್ತನೆಯ ಒಂದು ವಾರದಲ್ಲಿ ಗಿಡ ಮೊಳಕೆ ಬರುತ್ತವೆ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬಹುದು. ಬಳ್ಳಿ ಹಬ್ಬಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶ ಬೇಕಾದಷ್ಟಿದ್ದರೆ ನೆಲದಲ್ಲಿಯೇ ಬಳ್ಳಿ ಹಬ್ಬಲು ಬಿಡಬಹುದು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
ಗೊಬ್ಬರ:  ಸೋರೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.

ಕೊಯ್ಲು: ಕಾಯಿಳತಾಗಿರುವಾಗಲೇ ಕೊಯ್ಲು ಮಾಡಬೇಕು. ಕಾಯಿಗಳ ಮೇಲೆ ಉಗುರಿನ ತುದಿಯಿಂದ ಚುಚ್ಚಿದರೆ ಬಹಳ ಬೇಗನೆ ಗಾಯಗಳಾದರೆ ಅದು ಎಳತಾಗಿದೆ ಎಂದರ್ಥ. ಎಳತು ಕಾಯಿಗೆ ಹೆಚ್ಚಿನ ಬೇಡಿಕೆ ಇರೋದು.
ತಳಿ:  ಸಾಮಾನ್ಯವಾಗಿ ಸೋರೆಕಾಯಿಯಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು ದುಂಡಗಿನದ್ದು, ಇನ್ನೊಂದು ಉದ್ದ ದುಂಡಗಾಗಿರುವುದು. ಕೃಷಿ ವಿಜ್ಞಾನಿಗಳು ಸೋರೆಕಾಯಿಯಲ್ಲೂ ಹಲವಾರು ತಳಿಗಳನ್ನು ಸಂಶೋಧಿಸಿದ್ದಾರೆ. ಮುಖ್ಯವಾಗಿ ಪೂಸಾಸಮ್ಮರ್ ಪ್ರಾಲಿಫಿಕ್ ಲಾಂಗ್, ಪೂಸಾಪ್ರಾಲಿಫಿಕ್ ರೌಂಡ್, ಅರ್ಕಾಬಹಾರ್, ಪೊಸಾಮೇಘದೂತ್, ಪೂಸಮಂಜರಿ ಇತ್ಯಾದಿ.
ಆಟಿಕೆ ತಯಾರಿ: ಸೋರೆಕಾಯಿ ಬಿಳಿ ಹಸುರು ಬಣ್ಣದಿಂದ ಕೂಡಿದ್ದು, ಕಾಯಿ ಬಲಿತಂತೆ ಭಾರ ಕಡಿಮೆಯಾಗುವುದು. ಒಣಗಿದಾಗ ಒಳಭಾಗ ಟೊಳ್ಳಗಾಗುವುದು. ಇದರ ಬೀಜ ಹಲ್ಲಿನ ಆಕಾರ ಹೊಂದಿದೆ. ಹಳ್ಳಿಗಳಲ್ಲಿ ಮಕ್ಕಳು ಈಜು ಕಲಿಯಲು ಟೊಳ್ಳಗಾದ ಸೋರೆಬುರುಡೆಯನ್ನು ನಡುವಿಗೆ ಕಟ್ಟಿಕೊಳ್ಳುವುದುಂಟು. ಸೋರೆಬುರುಡೆಯಿಂದ ತಂಬೂರಿಯಂತಹ ಆಟಿಕೆಗಳನ್ನು ತಯಾರಿಸಲಾಗುತ್ತದೆ.

ಹರಿವೆ ಹಿರಿಮೆ

ಹರಿವೆ ಉಷ್ಣವಲಯದಲ್ಲಿ ಬೆಳೆಯುವು ಸೊಪ್ಪು ತರಕಾರಿ. ಇದರಲ್ಲಿ ಅಧಿಕವಾಗಿರುವ ಪೌಷ್ಟಿಕಾಂಶ, ಔಷಧೀಯ ಗುಣ ದೇಹಾರೋಗ್ಯ ಕಾಪಾಡಲು ಸಹರಕಾರಿ. ಇದು ಹರಿವೆಯ ಹಿರಿಮೆ ಕೂಡ. ಹರಿವೆ ಕಾಂಡವು ಅಷ್ಟು ಗಟ್ಟಿಯಾಗಿರುವುದಿಲ್ಲ. ಗಿಡದಲ್ಲಿ ಹಲವಾರು ಕವಲೊಡೆದು ರೆಂಬೆಗಳು ಹುಟ್ಟಿಕೊಳ್ಳುವುದು. ಇದರಿಂದ ಪೊದೆಯಂತೆ ಹರಡಿ ಬೆಳೆಯುವುದು.
ಮೂಲ: ಹರಿವೆ ಕೃಷಿಯನ್ನು ವರ್ಷದ ಎಲ್ಲ ಕಾಲದಲ್ಲೂ ಮಾಡಬಹುದು. ಮಳೆಗಾಲ ಇದಕ್ಕೆ ಹೆಚ್ಚು ಉತ್ತಮ. ಇದು ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣದ ರಾಜ್ಯಗಳಲ್ಲಿ ಕಂಡುಬರುವುದರಿಂದ ಸ್ವದೇಶಿ ಮೂಲದ್ದು ಎಂದು ಹೆಚ್ಚಿನ ಮಂದಿ ಅಂದುಕೊಂಡಿದ್ದಾರೆ. ಆದರೆ ಇದು ದೂರದ ದಕ್ಷಿಣ ಅಮೆರಿಕಾದ ಮೆಕ್ಷಿಕೊ ಮೂಲದ್ದಾಗಿದೆ. ಅಲ್ಲಿ ಇದನ್ನು ವಾರ್ಷಿಕ ಕೃಷಿಯಾಗಿ ಬೆಳೆಯುತ್ತಾರೆ.
ವೈವಿಧ್ಯ ಹೆಸರು:   ಹರಿವೆ ‘ಅಮರಾಂಥೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು ಹಲವಾರು ಹೆಸರುಗಳನ್ನು ಹೊಂದಿದೆ. ಮುಖ್ಯವಾಗಿ ಹರಿವೆ, ಹರವಿ, ಹರ್ಗಿ, ದಂಟಿನ ಸೊಪ್ಪು, ಕೀರೇ ಸೊಪ್ಪು, ರಾಜಗೀರ್, ಕಿರ್ಕಸಾಲಿ ಇತ್ಯಾದಿ. ಭಾರತದಲ್ಲಿ ಮಾತ್ರವಲ್ಲದೆ ಮಲೇಶಿಯಾ, ತೈವಾನ್, ಸೌತ್ ಫೆಸಿಪಿಕ್ಗಳಲ್ಲಿ ಇದು ಕಾಣ ಸಿಗುತ್ತದೆ.
ವಿಧ:   ಹರಿವೆಯಲ್ಲಿ ಮುಖ್ಯವಾಗಿ ಬಣ್ಣಗಳ ಆಧಾರದಲ್ಲಿ ಎರಡು ವಿಧ. ಇಂದು ಕೆಂಪು ಹರಿವೆ, ಇನ್ನೊಂದು ಬಿಳಿ ಹರಿವೆ. ಇವುಗಳಲ್ಲದೆ ಅದರ ಎಲ್ಲೆಗಳಲ್ಲಿನ ವ್ಯತ್ಯಾಸದ ಹಿನ್ನಲೆಯಲ್ಲಿ ಆರು ವಿಧಗಳನ್ನು ಗುರುತಿಸಲಾಗಿದೆ. ಹಳ್ಳಿಗಳಲ್ಲಿ ಚಿಲಕರಿವೆ, ಗೊದ್ದರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ನೋಡಬಹುದು. ಪೌಷ್ಟಿಕಾಂಶ: ಹರಿವೆಯಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ, ಜೀವಸತ್ವಗಳು, ವಿಟಮಿನ್, ಕ್ಯಾಲ್ಸಿಯಂ ಇತ್ಯಾದಿಗಳಿವೆ. ಇದರಿಂದ ಹರಿವೆ ನಮ್ಮ ದೇಹಕ್ಕೆ ಆಹಾರ ರೂಪದ ವೈದ್ಯ ಕೂಡ ಹೌದು.
ಅಡುಗೆ: ಹರಿವೆ ಸೊಪ್ಪು, ದಂಡನ್ನು ಬಳಸಿ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸುತ್ತಾರೆ. ಮುಖ್ಯವಾಗಿ ಪಲ್ಯ, ಸಾರು, ಸಾಸಿವೆ ಇತ್ಯಾದಿ. ಹರಿವೆಯ ಬೀಜವನ್ನು ಧಾನ್ಯದ ತೆನೆಯಾಗಿ ಬಳಸುತ್ತಾರೆ. ಅದನ್ನು ಒಣಗಿಸಿ, ಹಿಟ್ಟು ತಯಾರಿಸಿ ಅದರಿಂದ ಹಪ್ಪಳ, ರೊಟ್ಟಿ ಮೊದಲಾದವುಗಳನ್ನು ತಯಾರಿಸುತ್ತಾರೆ.
ಕೃಷಿ:  ಹರಿವೆ ಕೃಷಿಗೆ ಕಪ್ಪು, ಕೆಂಪು ಗೊಡ್ಡು ಮಣ್ಣು, ಮರಳು ಮಿಶ್ರಿತ ಗೊಡ್ಡು ಮಣ್ಣು ಸೂಕ್ತ. ಸ್ಥಳಾವಕಾಶದ ಕೊರತೆ ಇದ್ದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ ಕೃಷಿ ಮಾಡಬಹುದು. ಒಂದರಿಂದ ಒಂದೂವರೆ ಅಂಗುಲ ಎತ್ತರದ ಮಡಿಗಳನ್ನು ತಯಾರಿಸಿ ಅದರಲ್ಲಿ ಬೀಜ ಬತ್ತನೆ ಮಾಡಬೇಕು. ಮಡಿ ತಯಾರಿಸು ವೇಳೆ ಮಣ್ಣಿಗೆ ಒಣಗೊಬ್ಬರ ಮಿಶ್ರ ಮಾಡಿದರೆ ಉತ್ತಮ. ಉದ್ದದ ಸಾಲುಗಳಾಗಿ ಅಥವಾ ಅಗಲವಾಗಿ ಮಣ್ಣು ಹರಡಿ ಕೂಡ ಮಡಿ ತಯಾರಿಸಿಬಹುದು. ಸಸಿ ಮೊಳಕೆ ಬಂದೊಡನೆ ಅಗಲವಾಗಿ ಮಣ್ಣು ಹರಡಿ ನಿರ್ಮಿಸಿದ ಮಡಿಗಳಿಂದ ಕಿತ್ತು ಉದ್ದದ ಸಾಲುಗಳಲ್ಲಿ ನಾಟಿ ಮಾಡಿದರೆ ಹರಿವೆ ಹುಲುಸಾಗಿ ಬೆಳೆಯುತ್ತದೆ. ಅಲ್ಲದೆ ಗೊಬ್ಬರ, ನೀರು ಹಾಕಲು, ಕಳೆಕೀಳಲು ಸಹಕಾರಿ.
ಪುಡಿ ಗೊಬ್ಬರಕ್ಕೆ ಬೀಜವನ್ನು ಮಿಶ್ರ ಮಾಡಿ ಬಿತ್ತನೆ ಮಾಡಿದರೆ ಚಿಕ್ಕದಾಗಿರುವ ಹರಿವೆ ಬೀಜ ಸಮಾನವಾಗಿ ಹರಡಿ ಬೀಳುವುದು. ಬೀಜ ಬಿತ್ತಿದ ಕೂಡಲೇ ಮಡಿಯ ಮೇಲೆ ಹುಡಿ ಮಣ್ಣನ್ನು ತೆಳುವಾಗಿ ಹರಡಬೇಕು. ದಿನಕ್ಕೆ ಎರಡು ಬಾರಿ ನೀರು ಹಾಕಬೇಕು.
ಗೊಬ್ಬರ: ಹಟ್ಟಿಗೊಬ್ಬರ, ತರಗೆಲೆ, ಸೊಪ್ಪು, ಬೂದಿ, ಆಕಳ ಗಂಜಲ, ಯೂರಿಯಾ ಇತ್ಯಾದಿಗಳನ್ನು ಬಳಸಲಾಗುತ್ತದೆ. ಕೊಯ್ಲು: ಬತ್ತನೆ ಮಾಡಿದ 20-25 ದಿನಗಳಲ್ಲಿ ಸೊಪ್ಪು ಕೀಳಬಹುದು. ಹಿಡಿಹಿಡಿಯಾಗಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಸುಮಾರು ಏಳು - ಎಂಟು ತಿಂಗಳುಗಳ ಕಾಲ ಹರಿವೆ ಕೊಯ್ಲಿಗೆ ದೊರೆಯುತ್ತದೆ. ದಂಟನ್ನು ಕೊಯ್ಲು ಮಾಡುವಾಗ ಬುಡದಿಂದ ಒಂದು ಅಂಗುಲದಷ್ಟು ಮೇಲಿನಿಂದ ತುಂಡರಿಸಬೇಕು. ಕೊಯ್ಲು ಮಾಡಿದ ಅನಂತರ ಗಿಡಕ್ಕೆ ಹುಡಿಗೊಬ್ಬರ, ಬೂದಿ, ಸುಡುಮಣ್ಣು ನೀಡಬೇಕು.
ಔಷಧೀಯ ಗುಣ: ಖನಿಜ, ಕಬ್ಬಿಣದ ಅಂಶ ಹರಿವೆಯಲ್ಲಿ ಅಧಿಕವಾಗಿರುವುದರಿಂದ ರಕ್ತದ ಉತ್ಪಾದನೆಗೆ ಸಹಕಾರಿಯಾಗಿದೆ. ಹರಿವೆಯಲ್ಲಿನ ನಾರಿನ ಅಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಗರ್ಭಿಣಿಯರಿಗೆ ಹರಿವೆ ಸೊಪ್ಪಿನ ರಸಕ್ಕೆ ಚಿಟಿಕೆ ಏಲಕ್ಕಿ ಪುಡಿ ಮತ್ತು ಜೇನು ಮಿಶ್ರ ಮಾಡಿ ನೀಡುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ. ಬಾಣಂತಿಯರಿಗೆ ಇದನ್ನು ಕೊಡುವುದರಿಂದ ಎದೆ ಹಾಲು ವೃದ್ಧಿಸುವುದು. ಕುಂಟಿತ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಹರಿವೆ ರಸ, ನಿಂಬೆ ರಸ ಮಿಶ್ರ ಮಾಡಿ ನೀಡುತ್ತಾರೆ. ಬಾವು, ಗಾಯಗಳಾಗಿದ್ದರೆ ಹರಿವೆ ಸೊಪ್ಪಿನ ಲೇಪ ಹಾಕಿದರೆ ಬೇಗನೆ ಗುಣವಾಗುವುದು. ಹರಿವೆ ಸೊಪ್ಪಿನ ಬಳಕೆ ಅಜೀರ್ಣಕಾರಕ ಭೇದಿ, ಡಯೇರಿಯ ತಡೆಗಟ್ಟ ಬಹುದು. ಕೀರೇ ಸೊಪ್ಪಿನ ರಸ ಮತ್ತು ನಿಂಬೆ ರಸ ಮಿಶ್ರ ಮಾಡಿ ತಲೆಗೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ದೂರವಾಗುವುದು. ಬೇಸಗೆಯಲ್ಲಿ ಹರಿವೆ ಸೊಪ್ಪು ಸೇವನೆಯಿಂದ ದೇಹ ತಂಪಾಗಿರುತ್ತದೆ. ಮುಳ್ಳರಿವೆಯಲ್ಲಿ ಬೆನ್ನು, ಕಾಲು ಸೆಳೆತ ತಡೆಗಟ್ಟುವ ಗುಣವಿದೆ. ಹರಿವೆ ಸೊಪ್ಪನ್ನು ಬೇಯಿಸಿದ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು, ಗಂಟಲು ಕಿರಿಕಿರಿ ನಿವಾರಣೆ. ಅನಿಮಿಯ, ರಕ್ತದ ದೋಷ ಇರುವವರು ಹರಿವೆ ಬೀಜದಿಂದ ತಯಾರಿಸಿದ ತಿಂಡಿಗಳನ್ನು ಸೇವಿಸಿದರೆ ಉತ್ತಮ. ಅಲ್ಲದೆ ಹರಿವೆ ಸೊಪ್ಪಿನಲ್ಲಿ ರಕ್ತ ಸ್ರಾವ ತಡೆಗಟ್ಟುವ ಗುಣವಿದೆ.

ಬುಧವಾರ, ಜುಲೈ 11, 2012

ಅಲಸಂಡೆ ಬೆಳೆ


‘ಫ್ಯಾಬೇಸಿ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಅಲಸಂಡೆ ಭಾರತೀಯ ಮೂಲದ ಒಂದು ಪೌಷ್ಠಿಕಾಂಶಯುಕ್ತ ಹಸುರು ತರಕಾರಿ. ಅಲಸಂಡೆ ಎಳತಾಗಿರುವಾಗ ತಿನ್ನಲು ಬಲು ರುಚಿ. ಕಾಣಲು ಇದು ಬಳ್ಳಿಯಂತಿರುವುದಲ್ಲದೆ ಇದೊಂದು ಬಳ್ಳಿಯಲ್ಲಿ ಬೆಳೆಯುವ ತರಕಾರಿ ಕೂಡ ಹೌದು.
 ಅಲಸಂಡೆಯ ಇತಿಹಾಸದ ಪ್ರಕಾರ ‘‘ಅದು ಭಾರತದಲ್ಲಿ ಹುಟ್ಟಿ ಚೀನ ಮತ್ತು ಪೂರ್ವದ ಇತರ ರಾಷ್ಟ್ರಗಳಿಗೆ ಪಸರಿಸಿತು’’. ಆಫ್ರಿಕಾದ ಕಾಡುಗಳಲ್ಲಿ ಇದನ್ನೇ ಹೋಲುವ ಹಲವು ಸಸ್ಯ ಪ್ರಭೇದಗಳು ಕಾಣಸಿಗುತ್ತವೆಯಂತೆ. ಆದ್ದರಿಂದ ಸಸ್ಯಶಾಸ್ತ್ರಜ್ಞರು ಇದರ ಮೂಲ ‘ಆಫ್ರಿಕಾ’ ಇರಬಹುದು ಎಂದು ಅನುಮಾನಿಸಿದ್ದಾರೆ. ವೈವಿಧ್ಯ ಹೆಸರು: ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಲಸಂಡೆ ಎಂದು ಕರೆಯುವ ಈ ತರಕಾರಿಯನ್ನು ಬೇರೆ ಬೇರೆ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುವರು. ಆಂಗ್ಲ ಭಾಷೆಯಲ್ಲಿ ಈಗ ‘cowpea’ ಎನ್ನಲಾಗುತ್ತದೆ. ಮೊದಲು ‘callivance’ ಎನ್ನುತ್ತಿದ್ದರು. ಮೈಸೂರಿನ ಕೆಲವೆಡೆ ‘ಕಾರಮಣಿ’, ‘ತರಗುಣಿ’, ಕುರ್ಸಂದಿ ಮತ್ತೆ ಕೆಲವೆಡೆ ಅಲಸಂದೆ ಎಂದೆಲ್ಲ ಕರೆಯುತ್ತಾರೆ.
 ಪೌಷ್ಟಿಕಾಂಶ: ಅಲಸಂಡೆಯಲ್ಲಿ ಉತ್ತಮ ಪೌಷ್ಟಿಕಾಂಶಗಳಿವೆ. ಮುಖ್ಯವಾಗಿ ಕಬ್ಬಿಣ, ‘ಎ’, ‘ಬಿ1’, ‘ಬಿ2’ ಜೀವಸತ್ವ, ಪಿಷ್ಟ, ಕೊಬ್ಬು, ಸಸಾರಜನಕ, ಸುಣ್ಣ, ಸೋಡಿಯಂ, ರಂಜಕ, ನಯಾಸಿನ್ ಇತ್ಯಾದಿ. ಪೌಷ್ಟಿಕಾಂಶಗಳಲ್ಲದೆ ಮಾನವ ದೇಹಕ್ಕೆ ಅಗತ್ಯವಾದ ಕೆಲವು ‘ಅಮೈನೋ ಆಮ್ಲ’ಗಳನ್ನು ಹೊಂದಿದೆ.
ಔಷಧವಾಗಿ: ಅಲಸಂಡೆ ಬಳಸಿ ತಯಾರಿಸಿದ ಪದಾರ್ಥಗಳ ಸೇವಸೆಯಿಂದ ಮಲಬದ್ಧತೆ ನಿವಾರಣೆಯಾಗಬಲ್ಲದು. ಅಲಸಂಡೆಯ ಒಣಗಿದ ಕಾಳುಗಳನ್ನು ಬೇಯಿಸಿದ ನೀರನ್ನು ಪ್ರತಿದಿನ ಒಂದು ಲೋಟ ಕುಡಿಯುವುದರಿಂದ ಆಮಪಿತ್ತ ಶಮನವಾಗುವುದು. ಅಲಸಂಡೆಯ ಎಳೆಯ ಹಸುರು ಕಾಳನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಬಾಯಿ ಹುಣ್ಣು, ಅಲಸಂಡೆಯಿಂದ ತಯಾರಿಸಿದ ಹುರಿಗಾಳನ್ನು ಪ್ರತಿ ನಿತ್ಯ ಒಂದು ಹಿಡಿಯಂತೆ ಸೇವಿಸಿದರೆ ನರದೌರ್ಬಲ್ಯ ಇಲ್ಲದಾಗುವುದು. ಅಲಸಂಡೆ ಕಾಳುಗಳ ಹೆಚ್ಚಿನ ಸೇವನೆ ಹೊಟ್ಟೆ ಉಬ್ಬರಿಸುವುಕೆಗೆ ಕಾರಣವಾದೀತು. ಎಸಿಡಿಟಿ ತೊಂದರೆ ಇರುವವರು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಅಡುಗೆ: ಅಲಸಂಡೆಯನ್ನು ಬಳಸಿ ನಾನಾ ವಿಧದ ರುಚಿಕಟ್ಟಾದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಹುಳಿ, ಎಳೆಯಕಾಳಿ, ಕಾಳಿನಿಂದ ಸಾರು, ಸಾಂಬಾರು ಇತ್ಯಾದಿ. ಅಲ್ಲದೆ ಪಲಾವು ತಯಾರಿ ವೇಳೆಯೂ ಇದನ್ನು ಬೀನ್ಸ್ ಬದಲಾಗಿ ಬಳಕೆ ಮಾಡುತ್ತಾರೆ. ಇದರ ಕಾಳಿನಿಂದ ತಯಾರಿಸುವ ಹುರಿಗಾಳು ಬಳ ತಿನ್ನಲು ಸ್ವಾದಿಷ್ಟಕರವಾಗಿತ್ತದೆ.
 ಕೃಷಿ: ಇದೊಂದು ಅಲ್ಪಾವಧಿ ಬೆಳೆಯಾಗಿದ್ದು, ಎಲ್ಲ ತರದ ಮಣ್ಣುಗಳಲ್ಲೂ ಬೆಳೆಯ ಬಹುದು. ಆದರೆ ನೀರು ಬಹು ಬೇಗನೆ ಇಂಗಿ ಹೋಗುವ ಮರಳು ಮಿಶ್ರಿತ ಗೊಡ್ಡು ಉತ್ತಮ. ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣುಗಳಲ್ಲೂ ಅಲಸಂಡೆ ಉತ್ತಮ ಇಲುವರಿ ನೀಡುತ್ತದೆ. ಸಮತಟ್ಟಾದ ಪ್ರದೇಶಗಳಲ್ಲಿ ಈ ದನ್ನು ಬೇಸಗೆ, ಮಳೆಗಾಲಗಳೆರಡರಲ್ಲೂ ಬೆಳೆಯ ಬಹುದು. ಇದರಲ್ಲಿ ಮಳೆಗಾಲದ, ಬೇಸಗೆ ಕಾಲಗಳಲ್ಲಿ ಬೆಳೆಯಲು ಬೇರೆ ಬೇರೆ ತಳಿಗಳಿವೆ. ಬಿತ್ತನೆ: ಸಾಮಾನ್ಯವಾಗಿ ಮೇ- ಜುಲೈ ಹಾಗೂ ಡಿಸೆಂಬರ್ - ಜನವರಿ ತಿಂಗಳುಗಳಲ್ಲಿ ಅಲಸಂಡೆ ಕೃಷಿ ಮಾಡುತ್ತಾರೆ. ವಿಪರೀತ ಚಳಿ ಅಥವಾ ಸೆಕೆ ಇಲ್ಲದ ಪ್ರದೇಶಗಳಲ್ಲಿ ವರ್ಷವಿಡೀ ಬೆಳೆಯ ಬಹುದು. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2  ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸುಮಾರು ಎರಡು ದಿನಗಳಿಗೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಹವಾಮಾನವನ್ನು ಅನುಸರಿಸಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಕಾಯಿ ಬೆಳೆಯುವ ಸಮಯದಲ್ಲಿ ಗಿಡಗಳಲ್ಲಿ ತೇವಾಂವದ ಕೊರತೆ ಉಂಟಾಗಬಾರದು. ಕೊಯ್ಲು: ನಾರಿಲ್ಲದ ಎಳತು ಕಾಯಿಗಳನ್ನು ಕೊಯ್ಯಬೇಕು. ಗಿಡದಲ್ಲಿ ಕಾಯಿಗಳು ಮೂಡಿ 10ರಿಂದ 15 ದಿನಗಳಲ್ಲಿ ಕೊಯ್ಲು ಮಾಡಿದರೆ ಕಾಯಿ ಎಳತಾಗಿದ್ದು, ನಾರಿನಿಂದ ಮುಕ್ತವಾಗಿರುತ್ತವೆ.
ಗೊಬ್ಬರ: ಅಲಸಂಡೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸುತ್ತಾರೆ. ಅಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.
ತಳಿ: ಅಲಸಂಡೆಯಲ್ಲಿ ಸ್ಥಳೀಯ ತಳಿಗಳಲ್ಲದೆ ಬೇರೆ ಬೇರೆ ಋತುಮಾನಗಳಿಗೆ ಅನುಗುಣವಾಗಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೂಸಾ ಫಲ್ಗುಣಿ: ಇದು ಬೇಸಗೆ ಕಾಲಕ್ಕೆ ಸೂಕ್ತವೆನಿಸಿದ ತಳಿ. ಪೊದೆಯಾಕಾರದಲ್ಲಿ ಗಿಡ್ಡವಾಗಿ ಬೆಳೆಯುವ ಅಲಸಂಡೆಯಾಗಿದೆ. ಕಡು ಹಸುರು ಬಣದಿಂದ ಕೂಡಿದ ಸುಮಾರು 12.5 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ. ಪೂಸಾ ದೋಫಸಲಿ: ಬೇಸಗೆ ಹಾಗೂ ಮಳೆಗಾಲ ಎರಡಕ್ಕೂ ಸೂಕ್ತವಾದ ತಳಿ ಇದಾಗಿದೆ. ಸುಮಾರು 18 ಸೆಂ.ಮೀ. ಉದ್ದ ಕಾಯಿಗಳನ್ನು ಬಿಡುತ್ತದೆ. ಪೂಸಾ ಬರ್ಸಾತಿ: ಇದು ಮಳೆಗಾಲಕ್ಕೆ ಮಾತ್ರ ಸರಿ ಎನಿಸುವ ತಳಿಯಾಗಿದೆ. ಸುಮಾರು 25ರಿoದ 27 ಸೆಂ.ಮೀ. ನಷ್ಟು ಉದ್ದ ಕಾಯಿಗಳನ್ನು ಬಿಡುತ್ತದೆ. ಎಸ್ 288: ಇದೊಂದು ವರ್ಷಾದ್ಯಂತ ಕೃಷಿ ಮಾಡಲು ಸೂಕ್ತವಾಗಿರುವ ತಳಿಯಾಗಿದೆ.

ಬಸಳೆ ಲಾಭದಾಯಕ ಉಪ ಕೃಷಿ


ಬಸಳೆ ಆರೋಗ್ಯಕ್ಕೆ ಹಿತಕರವಾದ ಒಂದು ಸೊಪ್ಪು ತರಕಾರಿ. ಇದಕ್ಕೆ ಬೇಡಿಕೆ ಹೆಚ್ಚು. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ. ಆದರೆ ಪಟ್ಟಣಗಳಲ್ಲಿ ದೊರೆಯುವುದು ವಿರಳ. ಇದರ ಸೇವನೆಯಿಂದ ನಮ್ಮ ದೇಹ ಬಲವು ಹೆಚ್ಚುವುದು. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ಬಸಳೆಯ ಕಟ್ಟೊಂದಕ್ಕೆ ಸುಮಾರು ಹತ್ತರಿಂದ ಇಪ್ಪತು ರೂಪಾಯಿ ಬೆಲೆ ಇರುತ್ತದೆ.
 ಇದೊಂದು ಭಾರತೀಯ ಮೂಲದ ಸೊಪ್ಪು ತರಕಾರಿ. ಬಳ್ಳಿಯಂತೆ ಹಬ್ಬಿ ಬೆಳೆಯುವು ಗಿಡವಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ.
ಔಷಧೀಯ ಗುಣ: ಬಸಳೆಯಲ್ಲಿ ಹೇರಳವಾಗಿ ಔಷಧೀಯ ಗುಣವಿದೆ. ಬಸಳೆ ಸೇವನೆಯಿಂದ ರೋಗ ನಿರೋಧಕ ಗುಣ ವೃದ್ಧಿ. ಇದರ ದಡಿಯನ್ನು ಜಗಿಯುವುದರಿಂದ ಬಾಯಿ ಹಣ್ಣು, ಮಲಬದ್ಧತೆ ಕಡಿಮೆಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತು ಅಂಶ ಲಭಿಸುವುದು. ಅಡುಗೆ:
ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಬಸಳೆಯೊಂದಿಗೆ ಪಚ್ಚೆ ಹೆಸರು, ಹಲಸಿನ ಬೇಳೆ, ಹುರುಳಿ, ಅಲಸಂಡೆ ಕಾಳು ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ.
ಬಸಳೆ ನಾಟಿ:  ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರು ಬಸಳೆ ಬೆಳೆಯ ಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಆದರೆ ಬಿಸಿಲು ಅಗತ್ಯ. ಮರದ ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿಗೆ ಕೂಲಿಯಾಳುಗಳ ಅಗತ್ಯವೂ ಇಲ್ಲ. ಮನಸ್ಸು ಮಾಡಿದರೆ ಗೃಹಿಣಿಯರೇ ಬಿಡುವಿನ ವೇಳೆಯಲ್ಲಿ ಬಸಳೆ ಬೆಳೆಯಬಹುದು. ಮುಂಗಾರು ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾದಾಗ ಬಸಳೆ ನಾಟಿ ಮಾಡಲು ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ. ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಸೂಲುಗಳನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಒಂದರಿಂದ ಒಂದೂವರೆ ಅಡಿ ಆಳದ ಸಾಲುಗಳನ್ನು ತಯಾರಿಸಿ ಅದರಲ್ಲಿ ಸುಮಾರು ಎರಡರಿಂದ ಮೂರು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು.
ಗೊಬ್ಬರ: ಬಳ್ಳಿ ನಾಟಿ ಮಾಡಿದಾಗಲೇ ನೀರಿನಾಂಶ ಉಳಿದುಕೊಳ್ಳಲು ದನ ಸಗಣಿ, ಸೊಪ್ಪು, ತರಗೆಲೆ, ಅಡಿಕೆ ಸಿಪ್ಪೆ ಇತ್ಯಾದಿಗಳನ್ನು ಹಾಕಬಹುದು. ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವಚ್ಛವಾಗಿರುತ್ತವೆ. ಕೊಯ್ಲು: ಬಸಳೆ ನಾಟಿ ಮಾಡಿ ಸುಮಾರು ಐದರಿಂದ ಆರು ವಾರಗಳಲ್ಲಿ ಕಟಾವು ಮಾಡಬಹುದು. ಬಸಳೆ ದಡಿ, ಸೊಪ್ಪು ಎಳತಾಗಿರುವಾಗಲೇ ಕಟಾವು ಮಾಡಿದರೆ ಅಡುಗೆಗೆ ಉತ್ತಮವಾಗಿರುತ್ತವೆ. ಕಟವು ಪ್ರಾರಂಭವಾದ ಮೇಲೆ ನಿರಂತರ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ಮಾಡಬಹುದು.

ಸೋಮವಾರ, ಜುಲೈ 2, 2012

ಕನಸು


ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?
ನಿದ್ರೆಲಿ ಇರಲು
ಅರೆ ಕ್ಷಣ ಬಂದು
ಎಚ್ಚರವಾಗಲು ನೀನೋಡ್ತಿ
ಕೆಲವೊಮ್ಮೆ ಬಂದು
ಹೆದರಿಸಿ ಹೋಗ್ತಿ
ಇನ್ನು ಕೆಲವೊಮ್ಮೆ ಬಂದು
ಖುಷಿ ಪಡಿಸಿ ಹೋಗ್ತಿ
ಕನಸು ಕನಸು
ಯಾಕಿಂಗಾಡ್ತಿ?
ಮನಸಲಿ ನಿಲ್ಲದೆ
ಹಿಂಗ್ಯಾಕೋಡ್ತಿ?

ಸ್ವತಂತ್ರ ಭಾರತದ ವೈಭವ


ಭ್ರಷ್ಟಾಚಾರದ ರಕ್ಕಸ ನರ್ತನ
ಶ್ರೀಸಾಮಾನ್ಯರ ಮರ್ದನ
ಸ್ವೇಚ್ಛ ರಾಜಕಾರಣಿಗಳಿಗೆ
ಸ್ವರ್ಗ ದರ್ಶನ

ಅಂದು ವಿದೇಶಿ
ಆಕ್ರಮಿಗಳ ಕಾಟ
ಇಂದು ನಮ್ಮಲೇ ಇರುವ
ತಿಗಣೆ, ಹೇನುಗಳ ಹೀರಾಟ

ಹಿಂದಿನವರು ಸ್ವಾತಂತ್ರ್ಯಕ್ಕಾಗಿ
ಹೋರಾಡಿದರು
ಈಗಿನವರು ಕುರ್ಚಿಗಾಗಿ
ಬಡಿದಾಡಿದರು

ಬಿಗಿಯುವರು ಭಾಷಣ
ನಾವೆಲ್ಲರೊಂದೆಯೆಂದು
ಸಭೆ ಮುಗಿದೊಡನೆ
ಎಲ್ಲರು ಒಂದು... ಒಂದು... ಇಂದು

ನಂಬಿಕೆಗೆ ಬೆಲೆಯಿಲ್ಲ
ಇದು ನಯವಂಚಕರ ಕಾಲ
ಸ್ವಾಭಿಮಾನಿಗಳಿಗೆ,
ಸತ್ಯನಿಷ್ಠರಿಗಿಲ್ಲಿ ಕೊನೆಗಾಲ

ಕಾಳಧನದ ಮದವೇರಿ
ರಾಮ ರಾಜ್ಯದ ಕನಸು ಮರೆಯಾಗಿ
ಸ್ವಾ(ರ್ಥ)ರಾಜ್ಯ ಮೆರೆಯುತಿದೆ
ಇದು ಸ್ವತಂತ್ರ ಭಾರತದ ವೈಭವ

ಟಿವಿ, ಕಂಪ್ಯೂಟರ್ ಬಳಕೆ ವೇಳೆ ಸುರಕ್ಷತೆ ಬಗ್ಗೆ ಗಮನಿಸಿ


ಇಂದು ಟಿವಿ. ಕಂಪ್ಯೂಟರ್ಗಳನ್ನು ಬಳಕೆ ಮಾಡದವರು ಬಹಳ ವಿರಳ. ಪಕ್ಕದ ಮನೆಯಯವರು 32 ಇಂಚಿನ ಟಿವಿ, ಎಲ್ಸಿಡಿ ಕಂಪ್ಯೂಟರ್ ತಂದಿದ್ದಾರೆಂದು ಸಾವಿರೂರು ರೂಪಾಯಿ ವೆಚ್ಚ ಮಾಡಿ ಟಿವಿ, ಕಂಪ್ಯೂಟರ್ ಖರೀದಿಸುವ ಮೊದಲು ಅದರ ನಿರ್ವಹಣೆ ನಮ್ಮಿಂದ ಸಾಧ್ಯವೇ ಎಂದು ಯೋಚಿಸಿ. ಅದರ ಜತೆಗೆ ಸುರಕ್ಷತಾ ಕ್ರಮಗಳ ಬಗೆಗೂ ಗಮನ ಹರಿಸುವುದು ಅತ್ಯಗತ್ಯ. ಟೀವಿಯನ್ನು ಹತ್ತಿರದಿಂದ ವೀಕ್ಷಿಸಿದರೆ ಕಣ್ಣು ಹಾಳಾಗುತ್ತದೆ. ಆದ್ದರಿಂದ ದೂರ ಕುಳಿತು ನೋಡಿ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಆದರೆ ಟಿವಿ ನೋಡಿದರೆ ಒಮ್ಮೆಲೆ ಕಣ್ಣು ಕಳೆದುಕ್ಳೊುವುದಿಲ್ಲ. ಬದಲಿಗೆ ಕಣ್ಣಿಗೆ ಆಯಾಸವಾಗುತ್ತದೆ. ಶ್ರೀಘ್ರವಾಗಿ ನಿದ್ದೆ ಬರುತ್ತದೆ. ಸುಸ್ತಾದ ಕಣ್ಣುಗಳಿಗೆ ಆಕ್ಷಣ ಕೊಂಚ ದೃಷ್ಟಿದೋಷ ಉಂಟಾಗುತ್ತದೆ. ನಿರಂತರ ಟಿವಿ ನೋಡುವುದರಿಂದ ಅಂತಹ ಅನುಭವವಾಗಬಹುದು. ಸ್ವಲ್ಪ ಕಣ್ಣು ಮುಚ್ಚಿ ಕುಳಿತರೆ ಸರಿಹೋಗುವುದು.
ಅದೇ ರೀತಿ ಟೀವಿಯನ್ನು ಕತ್ತಲ ಕೋಣೆಯಲ್ಲೂ ನೋಡಬಾರದು ಹಾಗೂ ಅತೀ ಹೆಚ್ಚು ಬೆಳಕಿನಲ್ಲೂ ನೋಡಬಾರದು. ಆದರೆ, ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಟೆಲಿವಿಷನ್ ಮೇಲೆ ನೇರವಾಗಿ ಬೆಳಕು ಬೀಳುವಂತಿರಬಾರದು. ನಿಮ್ಮ ಕಣ್ಣಿನ ದೃಷ್ಟಿಗೂ ನೇರವಾಗಿ ಬೆಳಕು ಇರಬಾರದು ಹಾಗೂ ಸನ್ಗ್ಲಾಸ್ ಹಾಕಿಕೊಂಡು ಟೀವಿ ನೋಡಬಾರದು. ಟೀವಿ ನೋಡುವುದರಿಂದ ಕಣ್ಣಿಗೆ ಯಾವುದೇ ತೊಂದರೆ ಆಗದಂತೆ ರಕ್ಷಿಸಿಕೊಳ್ಳಬೇಕಾದರೆ ನಿಮ್ಮ ಟೀವಿ ಸ್ಕ್ರೀನ್ ಅಗಲದ ಮೂರರಿಂದ ನಾಲ್ಕು ಪಟ್ಟು ದೂರದಲ್ಲಿ ಕುಳಿತು ನೋಡಬೇಕು. ಟೀವಿಯನ್ನು ಕನಿಷ್ಠ 30 ಡಿಗ್ರಿ ಕೋನದಲ್ಲಿ ನೋಡಿದರೆ ಉತ್ತಮ ಎಂದು ಖ್ಯಾತ ವಿದ್ಯುನ್ಮಾನ ತಂತ್ರಜ್ಞ ಬೆರ್ನಾಡ್ ಲೆಚ್ನೆರ್ ತನ್ನ ‘ಲೆಚ್ನೆರ್ ಡಿಸ್ಟೆನ್ಸ್ ಸೂತ್ರ’ದಲ್ಲಿ ಹೇಳಿದ್ದಾರೆ. ಕೆನಡಿಯನ್ ಅಸೋಸಿಯೇಷನ್ ಆ್ ಆಪ್ತೊಮೆಟ್ರಿಸ್ಟ್ ಸಲಹೆ ಪ್ರಕಾರ ಟ್ವೆಂಟಿ-20 ಸೂತ್ರದಲ್ಲಿ ಇಪ್ಪತ್ತು ನಿಮಿಷ ಟೀವಿ ನೋಡಿದರೆ, 20 ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು ಎಂದಿದೆ.
ಕಂಪ್ಯೂಟರ್ ಬಳಕೆ ರೀತಿ
ಇಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಇಲ್ಲದ ಕ್ಷೇತ್ತವೆ ಇಲ್ಲ ಎನ್ನಬಹುದು. ಆದರೆ ಬಹಳ ಮಂದಿಗೆ ಕಂಪ್ಯೂಟರ್ ಬಳಕೆ ಹೇಗೆ ಮಾಡಬೇಕು, ಮಾನಿಟರ್ಗೂ ಕಣ್ಣಿನ ದೃಷ್ಟಿಗೂ ಎಷ್ಟು ಅಂತರವಿರಬೇಕು, ಹೇಗೆ ಮಾನಿಟರ್ ಇಡಬೇಕು, ಬೆಳಕು ಎಷ್ಟಿರಬೇಕು ಹಾಗೂ ಯಾವ ಕಡೆಯಿಂದ ಬರಬೇಕು ಎಂಬ ಬಗ್ಗೆ ತಿಳಿದಿಲ್ಲ.
ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಕನಿಷ್ಠ 25 ಇಂಚ್ಗಳ ದೂರದಲ್ಲಿರಬೇಕು. ನೀವು ಕುಳಿತಿರುವ ಸ್ಥಳದಿಂದ ನಿಮ್ಮ ದೃಷ್ಟಿಗೆ ಸಮಾನಾಂತರ ಅಥವಾ 15ರಿಂದ 20 ಡಿಗ್ರಿ ಕೆಳಗಿರಬೇಕು ಇಲ್ಲವೆ ನಿಮ್ಮ ಅಡ್ಡವಾದ ದೃಷ್ಟಿಯ 15 ಡಿಗ್ರಿ ಮತ್ತು 50 ಡಿಗ್ರಿ ಕೆಳಗೂ ಮಾನಿಟರ್ ಇಡಬಹುದು.
ಸ್ವಚ್ಛವಾಗಿಡಿ  
ಎಲ್ಸಿಡಿ, ಎಲ್ಇಡಿ ಹಾಗೂ ಪ್ಲಾಸ್ಮಾ ಟೀವಿಗಳ ಸ್ಕ್ರೀನ್ಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ಮಾಡಿರುವುದರಿಂದ ಅವುಗಳು ಬೇಗನೆ ಧೂಳನ್ನು ಆಕರ್ಷಿಸುತ್ತವೆ. ಆದ್ದರಿಂದ ಅವುಗಳ ಸ್ಕ್ರೀನ್ಗಳನ್ನು ಸ್ವಚ್ಛಗೊಳಿಸಲು ಮೈಕ್ರೋ ೈಬರ್ಯುಕ್ತ ಬಟ್ಟೆಗಳನ್ನು ಹಾಗೂ ಪ್ರತ್ಯೇಕ ಸ್ಪ್ರೇ ಅನ್ನು ಟೀವಿ ಕೊಳ್ಳುವಾಗ ಜತೆಯಲ್ಲಿ ನೀಡಿರುತ್ತಾರೆ. ಅದನ್ನು ಮಾತ್ರವೇ ಬಳಸಿ ಸ್ವಚ್ಛ ಮಾಡುವುದು ಒಳ್ಳೆಯದು. ಒದ್ದೆ ಬಟ್ಟೆ, ಸೋಪ್ ನೀರು ಇತ್ಯಾದಿ ಬಳಕೆ ಸಮಂಜಸವಲ್ಲ.

ಹಾಗಲ: ಬಾಯಿಗೆ ಕಹಿ; ದೇಹಕ್ಕೆ ಸಿಹಿ


ಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದಿರುವ ತರಕಾರಿ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸುರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೂಲ: ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಪ್ರಪಂಚದ ಹೆಚ್ಚಿನ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ. ಇದರ ಎಲೆ ಮತ್ತ ಕಾಯಿಯ ಬಣ್ಣ ಹಸುರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತವೆ. ಕಾಡುಗಳಲ್ಲಿ ಹಾಗಲವನ್ನೇ ಹೋಲುವ ಇತರ ಕಾಯಿಗಳು ಕಾಣಸಿಗುತ್ತವೆ.
ಪೌಷ್ಟಿಕಾಂಶ  
ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಮಿನ್, ಕ್ಯಾಲಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.
  ಔಷಧೀಯ ಗುಣ
ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಇದರ ಬಳಕೆಯಿಂದ ರೋಗ ನಿರೊಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು. ಹಾಗಲ ಕಾಯಿ ರಸ ಮೊಡವೆ ನಿವಾರಕ ಕೂಡ ಹೌದು. ಅಡುಗೆ: ಹಾಗಲ ಕಾಯಿಯಿಂದ ರುಚಿ ರುಚಿಯಾದ ನಾನಾ ತರದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಹಾಗಲ ಕಾಯಿ ಗೊಜ್ಜು, ಮೆಣಸುಕಾಯಿ, ಸಾಂಬಾರು, ಸೆಂಡಿಗೆ ಇತ್ಯಾದಿ. ಹಾಗಲ ತಳಿ: ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್ ಮೊದಲಾದವುಗಳು.
ಕೃಷಿ
ಇದಕ್ಕೆ ಬೆಚ್ಚಗಿನ ಹವಾಗುಣ ಉತ್ತಮವಾಗಿರುತ್ತದೆ. ಆದರೆ ಸುಡು ಬಿಸಿಲು ಹಾಗೂ ತೀರಾ ಚಳಿಯ ವಾತಾವರಣ ಈ ಬೆಳೆಗೆ ಸರಿಹೊಂದುವುದಿಲ್ಲ. ಮುಂಗಾರಿನ ಬೆಳೆ ಜೂನ್-ಜುಲೈ ಹಾಗೂ ಬೇಸಗೆ ಬೆಳೆ ಜನವರಿ-ಫೆಬ್ರವರಿ ತಿಂಗಳಲ್ಲಿ ಮಾಡಿದರೆ ಇಳುವರಿ ಅಧಿಕ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಗೊಡ್ಡು ಮಣ್ಣು ಹಾಗೂ ರೇವೆಗೋಡು ಮಣ್ಣು ಹಾಗಲ ಕೃಷಿಗೆ ಉತ್ತಮ. ಕೆಂಪು ಮಣ್ಣಿನಲ್ಲೂ ಕೃಷಿ ಮಾಡಬಹುದು. ಹುಳಿ, ಕ್ಷಾರಯುತ ಮಣ್ಣು, ಜೌಗುಪೀಡಿತ ಮಣ್ಣು, ತಗ್ಗು ಪ್ರದೇಶ ಇದರ ಕೃಷಿಗೆ ಯೋಗ್ಯವಲ್ಲ. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆ ಬರಲಾರದು. ಅದಕ್ಕಾಗಿ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ.
ಬೀಜ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿಯಾದಂತೆ ಅದು ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ
 ಹಾಗಲ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಅಗತ್ಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುಣಿಸಬೇಕು.

ಬೆಂಡೆ ಪುರಾಣ


ಇದೇನು ಬೆಂಡೆ ಪುರಾಣ ! ಎಂದು ಆಶ್ಚರ್ಯ ಪಡಬೇಡಿ. ನಾವು - ನೀವು ಹೆಚ್ಚಾಗಿ ಅಡುಗೆಗೆ ಬಳಸುವ ಬೆಂಡೆಕಾಯಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬೆಂಡೆಕಾಯಿಯನ್ನು ನೋಡಿದ ತತ್ಕ್ಷಣ ಮಹಿಳೆಯರ ಕೈ ಬೆರಳು ನೆನಪಿಗೆ ಬರುವವುದರಿಂದ ಬ್ರಿಟಿಷರು ಇದಕ್ಕೆ ‘ಲೇಡಿಸ್ ಫಿಂಗರ್’ ಎಂದು ಹೆಸರಿಟ್ಟಿದ್ದಾರೆ. ಸಸ್ಯ ಶಾಸ್ತ್ರದ ಪ್ರಕಾರ ಇದು ‘ಮಲ್ವೇಸಿ’ ಎನ್ನುವ ಸಸ್ಯ ಕುಟುಂಬಕ್ಕೆ ಸೇರಿದೆ. ಇದು ದಕ್ಷಿಣ ಆಫ್ರಿಕಾ ಅಥವಾ ಏಷ್ಯಾ ಮೂಲದಿಂದ ಬಂದಿದೆ ಎನ್ನಲಾಗುತ್ತಿದೆ. ಸುಮಾರು 10 - 12ನೇ ಶತಮಾನಗಳಲ್ಲಿ ಅರಬ್ಬಿ ಜನಾಂಗದವರ ಸಂಚಾರದ ಮೂಲಕ ಮೆಡಿಟರೇನಿಯನ್ ರಾಷ್ಟ್ರಗಳಿಗೆ ಪಸರಿಸಿರಬೇಕು ಎಂದು ಪ್ರತೀತಿ. ಸುಮಾರು 16ನೇ ಶತಮಾನದ ಮೊದಲೇ ಇದು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರಬೇಕು. ಆಫ್ರಿಕಾ, ಯುಎಸ್ಎ ಹಾಗೂ ಮೆಡಿಟರೇನಿಯನ್ ರಾಷ್ಟ್ರಗಳಲ್ಲಿ ಬೆಂಡೆ ‘ಓಕ್ರ’ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇದು ಉತ್ತರ ಆಫ್ರಿಕಾ ಖಂಡದ ಭಾಷ ವರ್ಗಕ್ಕೆ ಸೇರಿದ ಪದ. ಆ ಪ್ರದೇಶದ ಆದಿವಾಸಿಗಗಳು ತರಕಾರಿಯಾಗಿ ಇದನ್ನು ಬಳಸುತ್ತಿದ್ದರು.
ಪೌಷ್ಟಿಕಾಂಶ 
ಬೆಂಡೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತೇವೆ. ಆದರೆ ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಮುಖ್ಯವಾಗಿ ಅದರಲ್ಲಿ ಪಿಷ್ಟ, ಸಾರಜನಕ, ಕೊಬ್ಬು, ಸುಣ್ಣ, ರಂಜಕ, ಕಬ್ಬಿಣ, ಮ್ಯಾಗ್ನೀಷಿಯಂ, ‘ಎ’ ಜೀವಸತ್ವ, ‘ಬಿ1’ ಜೀವಸತ್ವ, ‘ಬಿ2’ ಜೀವಸತ್ವ, ನಯಾಸಿನ್, ‘ಸಿ’ ಜೀವಸತ್ವ, ಪೊಟ್ಯಾಷಿಯಂ, ಆಕ್ಯಾಲಿಕ್ ಆಮ್ಲ,ಗಳಂತಹ ಪೌಷ್ಟಿಕಾಂಶಗಳಿವೆ.
ಔಷಧಿಯಾಗಿ ಬೆಂಡೆ
ಬೆಂಡೆ ಒಂದು ತಂಪು, ಪಿತ್ತ ಶಮನ ಹಾಗೂ ಉರಿಯನ್ನು ಕಡಿಮೆ ಮಾಡಬಲ್ಲ ಆಹಾರ. ಶೀತ, ಕೆಮ್ಮು ಇರುವವರು ಬೆಂಡೆಕಾಯಿಯೊಂದಿಗೆ ಶುಂಠಿ ಮತ್ತು ಮೆಣಸು ಸೇರಿಸಿ ಸೇವಿಸುವುದು ಉತ್ತಮ. ಬಲಿತ ಬೆಂಡೆಯನ್ನು ಎಸೆಯದೆ ತೊಳೆದು ಒಣಗಿಸಿಟ್ಟು, ದೊಸೆ ಹಿಟ್ಟಿನೊಂದಿಗೆ ಸೇರಿತಿರುವಿದರೆ ದೋಸೆ ಮೃದುವಾಗುವುದು. ಸ್ಥೂಲ ಕಾಯದವರಿಗೆ, ಮಧುಮೇಹಿಗಳಿಗೆ ಇದು ಉತ್ತಮ ತರಕಾರಿ. ಇದನ್ನು ತಿನ್ನುವುದರಿಂದ ಮಲವಿಸರ್ಜನೆ ಸುಲಭ. ಬೆಂಡೆಕಾಯಿಯಿಂದ ತಯಾರಿಸಿದ ಜ್ಯೂಸ್, ದಾಹವನ್ನು ಬಲುಬೇಗ ನಿವಾರಿಸುವುದು.
ಬೆಂಡೆ ಪದಾರ್ಥ
ಬೆಂಡೆಕಾಯಿಂದ ಹಲವಾರು ವಿಧವಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಪ್ರಮುಖವಾಗಿ ಪಲ್ಯ, ಸಂಬಾರು, ಬೆಂಡೆಗೊಜ್ಜು, ಬೆಂಡೆಕಾಯಿ ರಸಂ, ಬೆಂಡೆಕಾಯಿ ಸಾಸಿವೆ, ಬೆಂಡೆಕಾಯಿ ಫ್ರೈ, ಬೆಂಡೆ ಬಜೆ, ಬೆಂಡೆಕಾಯಿ ಬಾಳಕ, ಬೆಂಡೆ ಹುಳಿ ಇತ್ಯಾದಿ.
ಬೆಂಡೆ ಕೃಷಿ
ಬೆಂಡೆ ಕೃಷಿಗೆ ನೀರು ಚೆನ್ನಾಗಿ ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಮಣ್ಣು ಉತ್ತಮ. ಈ ಬೆಳೆಗೆ ಸರಿಯಾದ ಬಿಸಿಲು ಬೇಕು. ಇದು ಉಷ್ಣ ವಲಯದ ತರಕಾರಿ ಆದ್ದರಿಂದ ಕನಿಷ್ಟ 17 ಡಿಗ್ರಿ ಸೆ.ನಿಂದ 33 ಡಿಗ್ರಿ ಸೆ. ವರೆಗೆ ಉಷ್ಣತೆ ಇರುವ ಪ್ರದೇಶಗಳಲ್ಲಿ ಎಲ್ಲೆಡೆ ಬೆಳೆಯ ಬಹುದಾಗಿದೆ. ಬೆಂಡೆಯನ್ನು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದು. ಹೆಚ್ಚಾಗಿ ಜನವರಿ-ಫೆಬ್ರವರಿ ಹಾಗೂ ಜೂನ್-ಜುಲೈ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡಲಾಗುತ್ತದೆ.
ಕೊಯ್ಲು
ಬೆಂಡೆ ಗಿಡವಾಗಿ 40-45 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಸಿ ಹೂ ಬಿಟ್ಟ ಅನಂತರ 3ರಿಂದ 7 ದಿನಗಳಲ್ಲಿ ಕಾಯಿಗಳು ಮೂಡುತ್ತವೆ. ನಾರಿಲ್ಲದ ಎಳೆಯ ಕಾಯಿಗಳನ್ನು 3-4 ದಿಗನಗಳಿಗೊಮ್ಮೆ ಕೊಯ್ಯಬಹುದು. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆಯ ಸಮಯ ಕೊಯ್ಲಿಗೆ ಸೂಕ್ತ. ಆಗಿಂದಾಗೆಗ್ಗೆ ಅನೇಕ ಬಾರಿ ಕೊಯ್ಲು ಮಾಡುವುದರಿ,ದ ಕಾಯಿಯ ಇಳುವರಿ ಹಾಗೂ ಗುಣಮಟ್ಟ ಹೆಚ್ಚುತ್ತದೆ. ಹಟ್ಟಿ ಗೊಬ್ಬರ ಅಥವಾ ಸಾವಯವ ಗೊಬ್ಬರಗಳನ್ನು ಬಲಸುವುದೇ ಉತ್ತಮ. ಇದರಿಂದ ಬಹುಕಾಲ ಕೊಯ್ಲುಲು ಸಾಧ್ಯ. ಇದಲ್ಲದೆ ಸುಡುಮಣ್ಣು ಅಥವಾ ಬೂದಿ, ಸೊಪ್ಪುನ್ನು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ಕಹಿಬೇವಿನ ಹಿಂಡಿಯನ್ನು ನೀರಿನಲ್ಲಿ ನೆನೆಸಿ ಬೂದಿಯೊಂದಿಗೆ ಮಿಶ್ರಮಾಡಿ ಹಾಕಬಹುದು.
ರಕ್ಷಣೆ
ಕ್ರಿಮಿಕೀಟಗಳ, ರೋಗ ಬಾಧೆಗಳಿಂದ ಬೆಂಡೆ ಕೃಷಿಯನ್ನು ರಕ್ಷಿಸಲು ರಾಸಾಯನಿಕ ವಸ್ತುಗಳ ಸಿಂಪಡಣೆಗಿಂತ ಗೋಮೂತ್ರದ ಔಷಧವನ್ನು ತಯಾರಿಸಿ ಬಳಸಿದರೆ ಉತ್ತಮ.
 ಗೋಮೂತ್ರದ ಔಷಧ ತಯಾರಿ: ಒಂದು ಕೊಡ ನೀರಿಗೆ ಒಂದು ಕೇಜಿ ಹುಳಿ ಬೆಲ್ಲ, ಎರಡು ಲೀಟರ್ ಗೋಮೂತ್ರ ಮಿಶ್ರಮಾಡಿ ಒಂದು ದಿವಸ ಹಾಗೇ ಬಿಟ್ಟು ಮಾರನೇ ದಿನ ಗಿಡಗಳ ಮೇಲೆ, ಬುಡ ಹಾಗೂ ಸುತ್ತಲೂ ಸಿಂಪಡಿಸಬೇಕು. ತಿಂಗಳಲ್ಲಿ ಮೂರು ಬಾರಿ ಈ ರೀತಿ ಸಿಂಪಡಿಸುವುದರಿಂದ ಕೀಟ, ವಿವಿಧ ರೋಗಗಳಿಂದ ದೂರವಿರಬಹುದು.

ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ



ಕತ್ತಲಲ್ಲೇ ಅರಳಿ ಕತ್ತಲಲ್ಲೇ ಅಂತ್ಯಕಾಣುವ ಕತ್ತಲ ರಾಜ್ಯದ ಸಾಮ್ರಾಜ್ಞೆ ಬ್ರಹ್ಮಕಮಲ. ಅರಳಿದ ಅಲ್ಪಕಾಲದಲ್ಲೇ ಸುವಾಸನೆ ಬೀರುತ್ತಾ, ತನ್ನ ಸೌಂದರ್ಯ ರಾಶಿಯಿಂದ ಕಣ್ಮನಸೂರೆಗೊಳ್ಳುವ ಈ ಹೂ ಅರಳುವದು ವರ್ಷಕ್ಕೊಮ್ಮೆ. ಅದರಂತೆ ಇದರ ಆಯಸ್ಸು ಕೂಡ ಕೆಲವೇ ಗಂಟೆಗಳು. ಕೇವಲ ಎಲೆಯಲ್ಲೇ ಹೂ ಬಿಟ್ಟು ಆಕರ್ಷಿಸುವ ಈ ಬ್ರಹ್ಮಕಮಲಕ್ಕೆ ಸರಿಸಾಟಿ ಹೂ ಮತ್ತೊಂದಿಲ್ಲ.