ಸೋಮವಾರ, ಜುಲೈ 2, 2012

ಹಾಗಲ: ಬಾಯಿಗೆ ಕಹಿ; ದೇಹಕ್ಕೆ ಸಿಹಿ


ಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದಿರುವ ತರಕಾರಿ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸುರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೂಲ: ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಪ್ರಪಂಚದ ಹೆಚ್ಚಿನ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ. ಇದರ ಎಲೆ ಮತ್ತ ಕಾಯಿಯ ಬಣ್ಣ ಹಸುರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತವೆ. ಕಾಡುಗಳಲ್ಲಿ ಹಾಗಲವನ್ನೇ ಹೋಲುವ ಇತರ ಕಾಯಿಗಳು ಕಾಣಸಿಗುತ್ತವೆ.
ಪೌಷ್ಟಿಕಾಂಶ  
ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಮಿನ್, ಕ್ಯಾಲಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.
  ಔಷಧೀಯ ಗುಣ
ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಇದರ ಬಳಕೆಯಿಂದ ರೋಗ ನಿರೊಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು. ಹಾಗಲ ಕಾಯಿ ರಸ ಮೊಡವೆ ನಿವಾರಕ ಕೂಡ ಹೌದು. ಅಡುಗೆ: ಹಾಗಲ ಕಾಯಿಯಿಂದ ರುಚಿ ರುಚಿಯಾದ ನಾನಾ ತರದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಹಾಗಲ ಕಾಯಿ ಗೊಜ್ಜು, ಮೆಣಸುಕಾಯಿ, ಸಾಂಬಾರು, ಸೆಂಡಿಗೆ ಇತ್ಯಾದಿ. ಹಾಗಲ ತಳಿ: ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್ ಮೊದಲಾದವುಗಳು.
ಕೃಷಿ
ಇದಕ್ಕೆ ಬೆಚ್ಚಗಿನ ಹವಾಗುಣ ಉತ್ತಮವಾಗಿರುತ್ತದೆ. ಆದರೆ ಸುಡು ಬಿಸಿಲು ಹಾಗೂ ತೀರಾ ಚಳಿಯ ವಾತಾವರಣ ಈ ಬೆಳೆಗೆ ಸರಿಹೊಂದುವುದಿಲ್ಲ. ಮುಂಗಾರಿನ ಬೆಳೆ ಜೂನ್-ಜುಲೈ ಹಾಗೂ ಬೇಸಗೆ ಬೆಳೆ ಜನವರಿ-ಫೆಬ್ರವರಿ ತಿಂಗಳಲ್ಲಿ ಮಾಡಿದರೆ ಇಳುವರಿ ಅಧಿಕ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಗೊಡ್ಡು ಮಣ್ಣು ಹಾಗೂ ರೇವೆಗೋಡು ಮಣ್ಣು ಹಾಗಲ ಕೃಷಿಗೆ ಉತ್ತಮ. ಕೆಂಪು ಮಣ್ಣಿನಲ್ಲೂ ಕೃಷಿ ಮಾಡಬಹುದು. ಹುಳಿ, ಕ್ಷಾರಯುತ ಮಣ್ಣು, ಜೌಗುಪೀಡಿತ ಮಣ್ಣು, ತಗ್ಗು ಪ್ರದೇಶ ಇದರ ಕೃಷಿಗೆ ಯೋಗ್ಯವಲ್ಲ. ಸುಮಾರು 3 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬೇಗನೆ ಮೊಳಕೆ ಬರಲಾರದು. ಅದಕ್ಕಾಗಿ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ.
ಬೀಜ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿಯಾದಂತೆ ಅದು ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ
 ಹಾಗಲ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಅಗತ್ಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುಣಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ