ಭಾನುವಾರ, ಜುಲೈ 29, 2012

ಹೀರೆಯ ಹಿರಿತನ


ಹೇರಳ ಪೌಷ್ಟಿಕಾಂಶ ಭರಿತ ಹಸುರು ತರಕಾರಿ ಹೀರೆ. ಭಾರತವೇ ಹೀರೆ ಕಾಯಿಯ ಮೂಲ ಎಂದು ಹಲವ ಸಸ್ಯಶಾಸ್ತ್ರಜ್ಞರು ಅಭಿಪ್ರಾಯಿಸಿದರೆ, ಕೆಲವರು ಮಾತ್ರ ಭಾರತ, ಇಂಡೋನೇಶ್ಯಾ, ಸುಡಾನ್, ಜಾವಾದ್ವೀಪಗಳು ಕೂಡ ಇದರ ತವರು ಎಂದಿದ್ದಾರೆ. ಸಸ್ಯಶಾಸ್ತ್ರದ ಪ್ರಕಾರ ಸೋರೆ, ಹಾಗಲದಂತೆ ಹೀರೆಯು ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಹೀರೆಯ ಬಳ್ಳಿಗೂ ಸೋರೆಯ ಬಳ್ಳಿಗೂ ಯಾವುದೇ ಸಾಮ್ಯತೆ ಇಲ್ಲ. ದರೆ ಹಾಗಲದ ಬಳ್ಳಿ, ಎಲೆ, ಬೀಜಕ್ಕೂ ಸ್ವಲ್ಪ ಹೋಲಿಕೆ ಇದೆ. ಕಾಯಿಯ ಆಕಾರ, ರುಚಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇದರ ಬಳ್ಳಿ, ಎಲೆ, ಕಾಯಿ ಎಲ್ಲವೂ ಕಡು ಹಸುರು ಬಣ್ಣದಿಂದ ಕೂಡಿರುತ್ತವೆ. ಕಾಯಿ ಉದ್ದವಾಗಿದ್ದು, ತುದಿ ಸ್ವಲ್ಪ ಉಬ್ಬಿರುತ್ತವೆ. ಕಾಯಿಗಳಲ್ಲಿ ಉದ್ದಕ್ಕೆ ಉಬ್ಬಿದ ಏಣು, ಅಗಲವಾದ ಗೀರುಗಳಿರುತ್ತವೆ. ಕಾಯಿಗಲ ಮೇಲ್ಮೈ ಒರಟಾಗಿರುತ್ತವೆ. ಬಲಿತ ಬೀಜಗಳು ಕಪ್ಪು ಬಯ ಹೊಂದಿದ್ದು, ಸಿಪ್ಪೆ ಗಟ್ಟಿಯಾಗಿರುತ್ತವೆ.
ಪೌಷ್ಟಿಕಾಂಶ: ಮಾನವನ ಶರೀಕ್ಕೆ ಅತ್ಯಗತ್ಯವಾದ ಪ್ರೊಟೀನ್, ಶರ್ಕರಪಿಷ್ಟ, ರಂಜಕ, ಕೊಬ್ಬು, ಕಬ್ಬಿಣ, ಥಯಮಿನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ರೈಬೋಫ್ಲೆವಿನ್, ‘ಸಿ’ ಜೀವಸತ್ವ ಮುಂತಾದವುಗಳು ಹೀರೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿದೆ.
ಔಷಧೀಯ ಗುಣ: ಮೂಲವ್ಯಾದಿ, ಸಕ್ಕರೆ ಕಾಯಿಲೆ ಇರುವವರು ಹೀರೆಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಹೀರೆಯ ಎಲೆಗಳ ರಸವನ್ನು ಹಚ್ಚುವುದರಿಂದ ಗಾಯ ವಾಸಿಯಾಗುವುದು. ಹೀರೆ ಕಾಯಿಯ ಬೀಜ ಮತ್ತು ಮಜ್ಜಿಗೆ ಸೇವನೆಯಿಂದ ಆಮಶಂಕೆ ಶಮನಕ್ಕೆ ಸಹಕಾರಿ.
ತಳಿ: ಹೀರೆಕಾಯಿಯಲ್ಲಿ ಸ್ಥಳೀಯ ತಳಿಗಳಲ್ಲದೆ ಸಂಶೋಧನೆಗಲ ಮೂಲಕ ಕೆಲವೊಂದು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೂಸಾನಸ್ದಾರ್: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಇದರಲ್ಲಿ ರುಚಿ, ಫಸಲೂ ಅಧಿಕ. ಸಿ.ಓ.-1: ಇದನ್ನು ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯ ಸಂಶೋಧಿಸಿದೆ.
ಅಡುಗೆ: ಹೀರೆಕಾಯಿಯನ್ನು ಬಳಸಿ ಬೇರೆ ಬೇರೆ ತರದ ಹಲವಾರು ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಪಲ್ಯ, ಮೇಲೋಗರ, ಸಾಂಬಾರು, ಪೋಡಿ, ಹೀರೆಕಾಯಿ ಚಿಪ್ಪೆಯ ಚಟ್ನಿ, ತಂಬ್ಳಿ ಇತ್ಯಾದಿ.
 ಕೃಷಿ: ಹೀರೆ ವರ್ಷದ ಎಲ್ಲ ಕಾಲದಲ್ಲೂ ನಾಟಿ ಮಾಡಬಹುದಾದ ಬೆಳೆ. ಆದರೆ ಉಷ್ಣ ಹವಾಗುಣ ಬೆಳೆಗೆ ಉತ್ತಮ. ಸಾಮಾನ್ಯವಾಗಿ ಜೂನ್-ಜುಲೈಯಲ್ಲಿ ಇದರ ನಾಟಿಮಾಡುತ್ತಾರೆ. ನೀರು ಬಸಿಯುವುದು ಬಹಳ ಅಗತ್ಯವಾದ್ದರಿಂದ ಮರಳು ಮಿಶ್ರಿತ ಕಪ್ಪು ಅಥವಾ ಕೆಂಪು ಗೊಡ್ಡು ಮಣ್ಣು ಹೀರೆ ಕೃಷಿಗೆ ಸೂಕ್ತ. ಸುಮಾರು 2-21/2 ಫೀಟ್ ಅಗಲದ ಕಾಲುವೆಗಳನ್ನು ತಯಾರಿಸಿ. ಕಾಲುವೆಯಲ್ಲಿರುವ ಮಣ್ಣಿಗೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ 1ರಿಂದ 1 1/2   ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಮಳೆಗಾಲಕ್ಕೆ ಎತ್ತರದ ಮಡಿಗಳಾದ ಸೂಕ್ತ. ಬಿತ್ತನೆ ವೇಳೆ ಪ್ರತಿ ಕುಳಿಗಳಲ್ಲಿ 3-4 ಬೀಜ ಹಾಕಿ, ಅವು ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಪ್ರತಿಯೊಂದು ಕುಳಿಗಳಲ್ಲೂ ಎರಡು ಸಸಿ ಉಳಿಸಿ. ಇದರ ಬೀಜದ ಸಿಪ್ಪೆ ಗಟ್ಟಿಯಾಗಿರುವುದರಿಂದ ಬಿತ್ತನೆಯ ಮೊದಲ ದಿನ ಬೀಜವನ್ನು ತಣ್ಣೀರಿನಲ್ಲಿ 5-6 ಗಂಟೆಗಳ ಕಾಲ ನೆನೆ ಹಾಕಿ. ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೊಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬೇಕು. ಸಾಧ್ಯವಾದರೆ ಚಪ್ಪರ ಹಾಕಿದರೆ ಉತ್ತಮ. ಬಳ್ಳಿ ಹುಲುಸಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ಹಳದಿ ಬಣ್ಣದ ಹೂ ಬಿಡುತ್ತವೆ. ಅನಂತರ ಒಂದೆರಡು ವಾರಗಳಲ್ಲಿ ಕಾಯಿ ಮೂಡುವುದು. ಕಾಯಿ ಬಲಿತು ಪಕ್ವಗೊಂಡಂತೆ ಬಳಕೆಗೆ ಅಷ್ಟೊಂದು ಯೋಗ್ಯವೆನಿಸುವುದಿಲ್ಲ. ಆದ್ದರಿಂದ ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡುವುದು ಸೂಕ್ತ.
ಗೊಬ್ಬರ: ಹೀರೆ ಬೆಳೆಗೆ ಗೊಬ್ಬರವಾಗಿ ಸೊಪ್ಪು, ಬೂದಿ, ಸುಡುಮಣ್ಣು, ಹಟ್ಟಿಗೊಬ್ಬರ, ಆಕಳಗಂಜಲ, ನೆಲಗಡಲೆ ಹಿಂಡಿ, ಆಡಿನ ಹಿಕ್ಕೆ, ಮೊಲದ ಹಿಕ್ಕೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳಲ್ಲದೆ ಪ್ರತಿದಿನ ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಾಹದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು. ಮಳೆಗಾಲದ ಬೆಳೆಯಾದರೆ ನೀರು ಹಾಕುವ ಪ್ರಮೇಯವಿಲ್ಲ. ಬೇಸಗೆಯಲ್ಲಿ 2 ದಿನಕ್ಕೊಮ್ಮೆ ಬೆಳಗ್ಗೆ ಅಥವಾ ಸಂಜೆ ನೀರುವುಣಿಸುವುದು ಅಗತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ