ಬುಧವಾರ, ಜುಲೈ 11, 2012

ಬಸಳೆ ಲಾಭದಾಯಕ ಉಪ ಕೃಷಿ


ಬಸಳೆ ಆರೋಗ್ಯಕ್ಕೆ ಹಿತಕರವಾದ ಒಂದು ಸೊಪ್ಪು ತರಕಾರಿ. ಇದಕ್ಕೆ ಬೇಡಿಕೆ ಹೆಚ್ಚು. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಗುತ್ತದೆ. ಆದರೆ ಪಟ್ಟಣಗಳಲ್ಲಿ ದೊರೆಯುವುದು ವಿರಳ. ಇದರ ಸೇವನೆಯಿಂದ ನಮ್ಮ ದೇಹ ಬಲವು ಹೆಚ್ಚುವುದು. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ಬಸಳೆಯ ಕಟ್ಟೊಂದಕ್ಕೆ ಸುಮಾರು ಹತ್ತರಿಂದ ಇಪ್ಪತು ರೂಪಾಯಿ ಬೆಲೆ ಇರುತ್ತದೆ.
 ಇದೊಂದು ಭಾರತೀಯ ಮೂಲದ ಸೊಪ್ಪು ತರಕಾರಿ. ಬಳ್ಳಿಯಂತೆ ಹಬ್ಬಿ ಬೆಳೆಯುವು ಗಿಡವಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ.
ಔಷಧೀಯ ಗುಣ: ಬಸಳೆಯಲ್ಲಿ ಹೇರಳವಾಗಿ ಔಷಧೀಯ ಗುಣವಿದೆ. ಬಸಳೆ ಸೇವನೆಯಿಂದ ರೋಗ ನಿರೋಧಕ ಗುಣ ವೃದ್ಧಿ. ಇದರ ದಡಿಯನ್ನು ಜಗಿಯುವುದರಿಂದ ಬಾಯಿ ಹಣ್ಣು, ಮಲಬದ್ಧತೆ ಕಡಿಮೆಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತು ಅಂಶ ಲಭಿಸುವುದು. ಅಡುಗೆ:
ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಬಸಳೆಯೊಂದಿಗೆ ಪಚ್ಚೆ ಹೆಸರು, ಹಲಸಿನ ಬೇಳೆ, ಹುರುಳಿ, ಅಲಸಂಡೆ ಕಾಳು ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ.
ಬಸಳೆ ನಾಟಿ:  ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರು ಬಸಳೆ ಬೆಳೆಯ ಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಆದರೆ ಬಿಸಿಲು ಅಗತ್ಯ. ಮರದ ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿಗೆ ಕೂಲಿಯಾಳುಗಳ ಅಗತ್ಯವೂ ಇಲ್ಲ. ಮನಸ್ಸು ಮಾಡಿದರೆ ಗೃಹಿಣಿಯರೇ ಬಿಡುವಿನ ವೇಳೆಯಲ್ಲಿ ಬಸಳೆ ಬೆಳೆಯಬಹುದು. ಮುಂಗಾರು ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾದಾಗ ಬಸಳೆ ನಾಟಿ ಮಾಡಲು ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ. ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೊಡ್ಡು ಮಣ್ಣು ಇದಕ್ಕೆ ಸೂಕ್ತವಾಗಿರುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಸೂಲುಗಳನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಒಂದರಿಂದ ಒಂದೂವರೆ ಅಡಿ ಆಳದ ಸಾಲುಗಳನ್ನು ತಯಾರಿಸಿ ಅದರಲ್ಲಿ ಸುಮಾರು ಎರಡರಿಂದ ಮೂರು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು.
ಗೊಬ್ಬರ: ಬಳ್ಳಿ ನಾಟಿ ಮಾಡಿದಾಗಲೇ ನೀರಿನಾಂಶ ಉಳಿದುಕೊಳ್ಳಲು ದನ ಸಗಣಿ, ಸೊಪ್ಪು, ತರಗೆಲೆ, ಅಡಿಕೆ ಸಿಪ್ಪೆ ಇತ್ಯಾದಿಗಳನ್ನು ಹಾಕಬಹುದು. ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವಚ್ಛವಾಗಿರುತ್ತವೆ. ಕೊಯ್ಲು: ಬಸಳೆ ನಾಟಿ ಮಾಡಿ ಸುಮಾರು ಐದರಿಂದ ಆರು ವಾರಗಳಲ್ಲಿ ಕಟಾವು ಮಾಡಬಹುದು. ಬಸಳೆ ದಡಿ, ಸೊಪ್ಪು ಎಳತಾಗಿರುವಾಗಲೇ ಕಟಾವು ಮಾಡಿದರೆ ಅಡುಗೆಗೆ ಉತ್ತಮವಾಗಿರುತ್ತವೆ. ಕಟವು ಪ್ರಾರಂಭವಾದ ಮೇಲೆ ನಿರಂತರ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ಮಾಡಬಹುದು.

3 ಕಾಮೆಂಟ್‌ಗಳು:

  1. ಉಪಯುಕ್ತವಾದ ಮಾಹಿತಿ,
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಬಸಳೆಯನ್ನು ತಾರಸಿ ಮೇಲೆ ಸಹಾ ಬೆಳೆಯಬಹುದು. ಉತ್ತಮವಾದ ಇಳುವರಿ ಬರುತ್ತದೆ.

    ಪ್ರತ್ಯುತ್ತರಅಳಿಸಿ
  3. ಬಸಳೆಯನ್ನು ತಾರಸಿ ಮೇಲೆ ಸಹಾ ಬೆಳೆಯಬಹುದು. ಉತ್ತಮವಾದ ಇಳುವರಿ ಬರುತ್ತದೆ. ಬೀಜ ಬಿತ್ತಿ ಗಿಡ ಉತ್ಪಾದಿಸಬಹುದು. ದಷ್ಟ ಪುಷ್ಟವಾಗಿ ಬೆಳೆಯುತ್ತದೆ.

    ಪ್ರತ್ಯುತ್ತರಅಳಿಸಿ