ಕೇವಲ ಬೀಜಗಳನ್ನು ಬಿತ್ತಿ, ಸಸಿಗಳನ್ನು ನೆಟ್ಟು,ಚೆನ್ನಾಗಿ ನೀರು, ಗೊಬ್ಬರ ಹಾಕಿ ಸಲಹಿದರೆ ಕೃಷಿ ಕಾರ್ಯ ಮುಗಿಯುವುದಿಲ್ಲ. ಬೆಳೆದಂತಹ ಫಸಲುನ್ನು ಕಾಯ(ರಕ್ಷಿಸ)ಬೇಕು. ಇದು ನಿಜವಾಗಿಯೂ ಕೃಷಿಕರಿಗೊಂದು ಸವಾಲಿನ ವಿಷಯ. ಹೂ ಬಿಟ್ಟು ಮಿಡಿಯಾದಲ್ಲಿಂದ ಹಣ್ಣಾಗಿ ಕಟಾವು ಮಾಡಿದರೂ ಬೆಳೆಯನ್ನು ರಕ್ಷಿಸುವ ಕಾರ್ಯ ಮುಗಿಯುವುದಿಲ್ಲ. ಪ್ರತಿಯೊಂದು ಹಂತದಲೂ ಫಸಲಿಗೆ ವಿವಿಧ ರೀತಿಯ ತೊಂದರೆ ಉಂಟಾಗುವುದು ಸಾಮಾನ್ಯ ಅದರಿಂದ ಬೆಳೆಯನ್ನು ಕಾಪಾಡುವುದು ಸಾಹಸಗಾತೆಯೇ ಸರಿ. ಕ್ರಿಮಿ - ಕೀಟಗಳ ಬಾಧೆಯಿಂದ ಬೆಳೆಗಳ ರಕ್ಷಣೆಗೆ ಕೃಷಿಕರು ಔಷಧಿಗಳನ್ನು ಸಿಂಪಡಿಸುತ್ತಾರೆ. ಆದರೆ ಪ್ರಾಣಿ - ಪಕ್ಷಿಗಳು ಗದ್ದೆ - ತೋಟಗಳಲ್ಲಿರು ಫಸಲಿಗೆ ಕಾಟಕೊಡುವುದನ್ನು ತಪ್ಪಿಸಲು ಕಾವಲುಕಾಯುವ ಪದ್ಧತಿ ಹಳ್ಳಿಗಳಲ್ಲಿ ಕಾಣಬಹುದು. ಹೀಗೆ ಕಾಯುವವರಿಗೆ ಕೂರಲು ಸಣ್ಣ ಜೋಪಡಿಯನ್ನು ನಿರ್ಮಿಸುತ್ತಾರೆ. ಇದಕ್ಕೆ ಹಳ್ಳಿಗರು ‘ಮಾಳ’ ಎನ್ನುವರು.
ಮಾಳ ತಯಾರಿ
.jpg)
ಹಗಲಲ್ಲಿ ದನ, ಮಂಗ, ಕೆಲವೊಂದು ಪಕ್ಷಿಗಳ ಕಾಟವಾದರೆ, ರಾತ್ರಿ ನರಿ, ಕಾಡುಹಂದಿ, ಆನೆ ಹೆಗ್ಗಣ ಇತ್ಯಾದಿಗಳ ತೊಂದರೆ, ಕೆಲವೆಡೆ ಕಳ್ಳರ ಕೂಟವು ಇರುತ್ತದೆ. ಇವುಗಳಿಂದ ತೊಟ-ಗದ್ದೆಗಳಲ್ಲಿನ ಬೆಳೆಯನ್ನು ರಕ್ಷಿಸಲು ರೈತರು ಕಾವಲು ಕೂರುತ್ತಾರೆ. ಅಂತಹ ಕಾವಲುಗಾರರಿಗೆ ಮಳೆ, ಚಳಿ, ಗಾಳಿಗಳಿಂದ ರಕ್ಷಣೆ ಪಡೆಯಲು ಮಾಳಗಳನ್ನು ರಚಿಸಲಾಗುತ್ತದೆ.
ಚಳಿ ಕಾಯಿಸುವುದು
ಸಾಮಾನ್ಯವಾಗಿ ತೋಟ, ಗದ್ದೆಗಳಲ್ಲಿ ತಂಪಿನ ವಾತಾವರಣವಿರುತ್ತದೆ. ರಾತ್ರಿಯಾದಂತೆ ಚಳಿಯು ಹೆಚ್ಚು. ಚಳಿಯಿಂದ ರಕ್ಷಣೆಗೋಸ್ಕರ ಕಾವಲುಗಾರರು ಮಾಳದ ಪಕ್ಕದಲ್ಲಿ ಬೆಂಕಿ ಹಾಕಿ ಚಳಿಕಾಯಿಸುವುದು ವಿಶೇಷ. ಕಾಡುಪ್ರಾಣಿಗಳ ಕಾಟ ಜೋರಾಗಿದ್ದರೆ, ಎರಡು - ಮೂರು ಜನ ಕಾವಲಿಗೆ ಹೋಗುತ್ತಾರೆ. ಹೀಗೆ ಹೋದವರು ಬೆಂಕಿಯ ಮುಂದೆ ಕುಳಿತು ಹರಟೆ ಹೊಡೆಯುತ್ತಾ, ಜನಪದ ಹಾಡು ಹೇಳುತ್ತಾ, ಮತ್ತೆ ಕೆಲವರು ತಮಟೆ ಅಥವಾ ಕಬ್ಬಿಣದ ಡಬ್ಬಿಗಳನ್ನು ಸೊಡೆಯುತ್ತಾ ಕರ್ಕಶ ಸದ್ದು ಮಾಡುವುದು, ಇನ್ನಿತರ ಸಾಧನಗಳನ್ನು ಭಾರಿಸುತ್ತಾ ಪ್ರಾಣಿಗಳು ಬಾರದಂತೆ ಎಚ್ಚರವಾಗಿರುತ್ತಾರೆ. ಅಲ್ಲದೆ ಕಾವಲುಗಾರರು ನಿದ್ದೆ ಬಾರದಿರಲು ವೀಳ್ಯ ಹಾಕುವುದು, ಬೀಡಿ ಸೇದುವುದು, ಹುರಿದ ಹುಳಿ ಬೀಜ, ಅಕ್ಕಿ ಇತ್ಯಾದಿಗಳನ್ನು ತಿನ್ನುತ್ತಾರೆ.
ಮಾಳ ಮರೆಗೆ
ಆಧುನಿಕರಣದಿಂದಾಗಿ ಕೃಷಿಯೇ ಮೂಲೆಗುಂಪಾಗುತ್ತಿರುವುದು ಒಂದೆಡೆಯಾದರೆ, ಕಾಡು ನಾಶ, ಕಾಡುಪ್ರಾಣಿಗಳ ಅಳಿವಿನಿಂದಾಗಿ ಮಾಳ ತಯಾರಿಸಿ ಕಾವಲು ಕುಳಿತುಕೊಳ್ಳುವ ವ್ಯವಸ್ಥೆಯೇ ಇಂದು ಹಳ್ಳಿಗಳ್ಳಿ ಇಲ್ಲವಾಗಿವೆ. ಇದರಿಂದ ಮಾಳ ಮರೆಯಾಗಿದೆ. ಆದರೂ ಬಹಳ ಅಪರೂಪಕ್ಕೆ ಕೆಲವೆಡೆ ಮಾಳಗಳು ಕಾಣಸಿಗುತ್ತವೆ. ಮುಖ್ಯವಾಗಿ ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಲ್ಲಿ ಇಂದಿಗೂ ಮಾಳ ಗೋಚರಿಸುತ್ತವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ