ಮನಸ್ಸಿನ ಭಾವನೆಗಳನ್ನು ಬರಹ ರೂಪದಲ್ಲಿ ವ್ಯಕ್ತ ಪಡಿಸುವುದೇ ಸಾಹಿತ್ಯ. ಸಾಹಿತ್ಯ ಭಾವನೆಗಳ ತೋರುಪಡಿಸುವ ಪರಿಣಾಮಕಾರಿ ಸಾಧನ ಕೂಡಾ. ಪರಿಸರದ ಘಟನೆಗಳ ಪ್ರೇರಣೆ, ಕಲ್ಪನಾಲೋಕದ ಸಹರಕಾರದಿಂದ ಭಾವನೆಗಳು ಉದ್ದೀಪನಗೊಂಡು ಉತ್ತಮ ಸಾಹಿತ್ಯ ರಚನೆಯಾಗುತ್ತದೆ. ಇಂತಹ ಸಾಹಿತ್ಯಗಳು ಮಾನವೀಯ ಮೌಲ್ಯಗಳತ್ತ ದೃಷ್ಠಿ ನೆಟ್ಟಿರುತ್ತವೆ ಮತ್ತು ಅವುಗಳ ವೃದ್ಧಿಗೆ ಸಹಕಾರಿ.
ಸಾಹಿತ್ಯದ ಹುಟ್ಟು ಯಾವಾಗ ಆಯಿತು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಬಹುಶಃ ಶಿಲಾಯುಗದ ಮಾನವ ತನ್ನ ಗುಹೆಗಳಲ್ಲಿ ಪ್ರಾಣಿ, ಪಕ್ಷಿಗಳ, ತಾನು ಕಂಡ ಅಪರೂಪದ ದೃಶ್ಯಗಳ ಚಿತ್ರ ಬಿಡಿಸುವುದ್ದರಿಂದಲೇ ಆರಂಭವಾಗಿರಬೇಕು. ಹೀಗೆ ತನ್ನ ಭಾವನೆಗಳಿಗೆ ರೂಪ ನೀಡುತ್ತಾ ಬಂದ ವ್ಯವಸ್ಥೆ ಇಂದು ತನ್ನ ರೆಂಬೆ- ಕೊಂಬೆಗಳನ್ನು ಚಾಚಿ ಬೃಹತ್ ಮರವಾಗಿ ಬೆಳೆದಿದೆ. ಸಾಹಿತ್ಯವು ಭಾವನೆಯನ್ನು ಜ್ಞಾನ ಭಂಡಾರದೊಂದಿಗೆ ಮಿಶ್ರಮಾಡಿ, ಕಥೆ, ಕವನ, ಕಾದಂಬರಿ, ಪ್ರಬಂಧ ಇತ್ಯಾದಿ ಖಾದ್ಯಗಳ ರೂಪ ನೀಡಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತದೆ.
ಸಾಹಿತ್ಯವು ಕಥೆ, ಕವನ, ಹನಿಗವನ, ಕಾದಂಬರಿ, ಪ್ರಬಂಧ ಇತ್ಯಾದಿ ಯಾವುದೇ ಪ್ರಕಾರಗಳಲ್ಲಿದ್ದರೂ ಅದು ತನ್ನದೇ ಆದ ರೀತಿಯಲ್ಲಿ ಓದುಗನ ಮೇಲೆ ಪ್ರಭಾವ ಬೀರೆತ್ತದೆ. ಸಾಹಿತ್ಯವು ತನ್ನ ಅಭಿಪ್ರಾವನ್ನು ಯಾವುದೇ ಕಾರಣಗಳಿಗಾ ಜನರ ಮೇಲೆ ಹೇರುವುದಿಲ್ಲ. ಸಾಹಿತ್ಯದಲ್ಲಿ ವ್ಯಕ್ತಿಗೆ ಸ್ವಾತಂತ್ರವಿದೆ. ಆತ ಸಾಹಿತ್ಯಕಾರನ ಭಾವನೆಗಲಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸಬಹುದು. ಸಾಹಿತ್ಯವು ತನ್ನ ಅನಿಸಿಕೆಗಳನ್ನು ನಿರಾತಂಕವಾಗಿ ವ್ಯಕ್ತಪಡಿಸುತ್ತದೆ. ಅಲ್ಲದೆ ಯಾವುದೇ ಅಂಕುಶವನ್ನು ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ಸಾಹಿತ್ಯವು ಸದಾ ಹೊಸತನಕ್ಕೆ ಅವಕಾಶ ಒದಗಿಸುತ್ತದೆ. ನೈಜ ವಿಷಯಗಳಿಗೆ ಮಹತ್ವ ನೀಡುವುದು.
ಸಾಹಿತ್ಯದಿಂದ ಜಾಗೃತಿ
ಸಾಹಿತ್ಯ ಎಂಬುದು ನಾವು ಬದುಕಿನಲ್ಲಿ ಗಳಿಸುವ ಅನುಭವ. ಇದರಿಂದ ವಸ್ತು ಸ್ಥಿತಿಯ ಅರಿವು, ದೇಶಾಭಿಮಾನ ಮೂಡುತ್ತದೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ಬಗ್ಗೆ ಸಾಹಿತ್ಯವು ಜನರ ಗಮನ ಸೆಳೆದು ಜಾಗೃತಿ ಮೂಡಿಸುತ್ತದೆ. ಬೇರೆ ಬೇರೆ ಜಾತಿ, ಧರ್ಮಗಳಲ್ಲಿರುವ ಮೂಢನಂಬಿಕೆ, ಕೆಟ್ಟ ಆಚರಣೆಗಳನ್ನು ಹೋಗಲಾಡಿಸಿ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗಿವೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಮಾಜವನ್ನು ಕಾಡುವ ಪಿಡುಗುಗಳ ಬಗ್ಗೆ ನಮ್ಮ ಗಮನ ಸೆಳೆಯುವಲ್ಲಿ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ರೀತಿಯ ಚೈತನ್ಯ ಸುಪ್ತವಾಗಿ ಅಡಗಿರುತ್ತದೆ. ಅವುಗಳನ್ನು ಬೆಳಕಿಗೆ ತರುವಲ್ಲಿ ಸಾಹಿತ್ಯ ಉಪಕಾರಿ. ಯಾವುದೇ ಒಂದು ಸಾಹಿತ್ಯವನ್ನು ಓದಿದಾಗ ಅದಕ್ಕೆ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಬೆಳೆಯುತ್ತದೆ. ಉದಾ: ಯಾವುದೊ ಒಂದು ಪತ್ರಿಕೆಯನ್ನು ಓದಿದಾಗ ನಾವು ‘ವಾಹ್!’, ‘ಅಬ್ಬಬ್ಬಾ’, ‘ಛೆ’, ‘ಶಹಬ್ಬಾಸ್’ ಎಂಬಿತ್ಯಾದಿ ಪ್ರತಿಕ್ರಿಯೆ ಹೊರಡಿಸುತ್ತೇವೆ. ಮತ್ತೆ ಕೆಲವು ಬಾರಿ ಅವು, ನಾವು ಕೂಡಾ ಏನಾದರು ವಿಷಯಗಳ ಬಗ್ಗೆ ಬರೆಯುವಂತೆ ಪ್ರೇರೇಪಿಸುತ್ತವೆ.
ನಮ್ಮಲ್ಲಿರುವ ಪ್ರೀತಿ, ಪ್ರೇಮ, ಕರುಣೆ, ವಾತ್ಸಲ್ಯ, ಕೋಪ, ಆಕ್ರೋಶ, ಪ್ರತಿಭಟನೆ ಇತ್ಯಾದಿ ಮಾನವೀಯ ಗುಣಗಳ ಅಭಿವ್ಯಕ್ತಪಡಿಸಲು ಸಾಹಿತ್ಯದಿಂದ ಸಾಧ್ಯ. ಬಡವರ, ದೀನ - ದಲಿತರ ಪರವಾಗಿನಿಂತು ಹೋರಾಡುವ ಶಕ್ತಿ ಸಾಹಿತ್ಯದಲ್ಲಿದೆ. ಬ್ರಿಟೀಷರ ವಿರುದ್ಧದ ಸ್ವಾತಂತ್ರ ಹೋರಾಟದಲ್ಲಿಯೂ ಸಾಹಿತ್ಯ ಪ್ರಭಾವ ಶಾಲಿ ಪಾತ್ರ ನಿರ್ವಹಿಸಿತ್ತು.
ಸಾಹಿತ್ಯಾಸಕ್ತಿ ಕುಂಠಿತ
ಮಾನವೀಯ ಸಂಬಂಧಗಳು ಇಂದು ಸಮಾಜದಲ್ಲಿ ನಶಿಸಿ ಹೋಗುತ್ತಿವೆ. ಯುವಜನರಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿ ಕುಂಠಿತವಾಗುತ್ತಿದೆ. ಇದಕ್ಕೆಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿ-ಸಾಹಿತ್ಯಗಳ ಪ್ರಭಾವಗಳೇ ಕಾರಣ. ಈ ಆಧುನಿಕ ಯುಗದ ಒತ್ತಡ ಭರಿತ ಜೀವನದಲ್ಲಿ ಎಲ್ಲರಿಗೂ ಸಮಯಾವಕಾಶದ ಕೊರತೆ ಇದೆ. ಇದರಿಂದ ಸಾಹಿತ್ಯದ ಸವಿಸ್ತಾರವಾದ ಓದು ಸಾಧ್ಯವಾಗುತ್ತಿಲ್ಲ. ಸಮಯದ ಒತ್ತಡದಿಂದಾಗಿ ಕವನ-ಕಥೆ-ಚರ್ಚಾ ಗೋಷ್ಠಿ, ಕಾರ್ಯಾಗಾರ, ವಿಚಾರಸಂಕಿರಣ, ಉಪನ್ಯಾಸ, ಸಾಹಿತ್ಯ ಸಮ್ಮೇಳನ ಇತ್ಯಾದಿ ಸಾಹಿತಿಕ ಕಾರ್ಯಕ್ರಮಗಲ್ಲಿ ಭಾಗವಹಿಸಲು ಇಂದು ಜನರಿಗೆ ಸಾಧ್ಯವಾಗುತ್ತಿಲ್ಲ.
ದೈನಂದಿನ ಚಟುವಟಿಕೆಗಳಂತೆ ಸಾಹಿತ್ಯದ ಅಧ್ಯಯನಕ್ಕೂ ಒಂದಷ್ಟು ಸಮಯ ವ್ಯಯಿಸುವುದು ಅನಿವಾರ್ಯ. ಓದುವಿಕೆ ಕಡಿಮೆಯಾದಾಗ ಬರವಣಿಗೆಯು ಕುಂಠಿತಗೊಳ್ಳುವುದು. ಓದುವ ಹವ್ಯಾಸದಿಂದ ಸಾಹಿತ್ಯವು ಬೆಳೆಯುವುದು, ಜತೆಗೆ ಓದುಗನ ಜ್ಞಾನ, ಚಿಂತನಾ ಮಟ್ಟವು ವೃದ್ಧಿಸುವುದು. ಮಾನವನ ಜೀವನದ ಪ್ರತಿಯೊಂದು ಅವಶ್ಯಕಗಳನ್ನು ತುಂಬಲು ಸಾಹಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಹಾಯಕ. ಸಾಹಿತ್ಯದ ಓದಿನಿಂದ ವ್ಯಕ್ತಿತ್ವದ ಬೆಳವಣಿಗೆಯು ಸಾಧ್ಯ ಎನ್ನುವುದು ವಿಶೇಷ.
ಸಾಹಿತ್ಯವು ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಏಳಿಗೆಯನ್ನು ಬಯಸುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ವ್ಯಕ್ತಿಯ ಪಾತ್ರ ಪ್ರಮುಖ. ವ್ಯಕ್ತಿಯಲ್ಲಿರುವ ಮಾನವೀಯ ಗುಣಗಳನ್ನು ಪೋಷಿಸುವ ಮೂಲಕ ಸಾಹಿತ್ಯವು ಸಮಾಜದ ಅಭ್ಯುದಯಕ್ಕೆ ಕೊಡುಗೆ ನೀಡುತ್ತದೆ. ಸಾಹಿತ್ಯವು ವ್ಯಕ್ತಿ ಮತ್ತು ಸಮಾಜದಲ್ಲಿನ ಕುಂದುಕೊರತೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಪರಿಯಾಯ ಮಾರ್ಗೋಪಾಯಗಳನ್ನು ಸೂಚಿಸುತ್ತದೆ. ಹೀಗೆ ಸಮಾಜದ ಸರ್ವಾಂಗೀಣ ಪ್ರಗತಿಗೆ ಮಹತ್ತರವಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ