ಮಂಗಳವಾರ, ಜೂನ್ 5, 2012

ಅಯ್ಯೋ ಪರೀಕ್ಷೆ ಬಂತೆಂದು ಭಯ ಪಡದಿರಿ

ಈಗ ಪ್ರಸಕ್ತ ಶೈಕ್ಷಣಿಕ ವರ್ಷದ ಕೊನೆಯ ಹಂತಕ್ಕೆ ಬರುತ್ತಿದ್ದೇವೆ
. ಇನ್ನು ಶಾಲೆಗಳಲ್ಲಿ ಪರೀಕ್ಷೆಗಳ ಪರ್ವ. ಆದರೆ ವಿದ್ಯಾರ್ಥಿಗಳು ಅಯ್ಯೋ ಪರೀಕ್ಷೆಎಂದು ಹೆದರುವ ಅಗತ್ಯವಿಲ್ಲ. ಕಲಿತ ಪಾಠವನ್ನು ಮನನ ಮಾಡುವ ಪ್ರಕ್ರಿಯೆಯಷ್ಟೇ ಪರೀಕ್ಷೆ. ಮಕ್ಕಳು ತಾವು ಓದಿದ ವಿಷಯಗಳನ್ನು ಎಷ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಮತ್ತು ಹೇಗೆ ಪ್ರಸ್ತುತ ಪಡಿಸುತ್ತಾರೆ ಎಂಬುದನ್ನು ಪರೀಕ್ಷೆಯ ಮೂಲಕ ತಿಳಿಯಲಾಗುತ್ತದೆ. ‘ಸಮರ ಕಾಲೇ ಶಸಾಭ್ಯಸಎಂಬಂತೆ, ಪರೀಕ್ಷೆ ಹತ್ತಿರ ಬಂದಾಗ ಸಿದ್ಧತೆ ಪ್ರಾಂಭಿಸಿದರೆ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಓದಿದ ವಿಷಯ ತಲೆಗೆ ಹತ್ತದೆ ಗೊಂದಲಕ್ಕೊಳ ಗಾಗುತ್ತಾರೆ. ಹಾಗೇ ಪ್ರತಿದಿನ ಓದಬೇಕು ಎಂದು ಹಗಲಿರುಳು ನಿದ್ದೆ ಕಟ್ಟು ಓದುವುದು ಸರಿಯಲ್ಲ. ದಿನದ ಪ್ರತಿಯೊಂದು ಚಟುವುಟಿಕೆಗಳಿಗೆ ಸಮಯ ಮೀಸಲಿಡುವಂತೆ, ಓದಿಗೂ ಸ್ವಲ್ಪ ಸಮಯ ಮೀಸಲಿಡಿ. ಇದರಿಂದ ಓದು ಕೂಡ ದೈನಂದಿನ ಚಟುವಟಿಕೆಯಾಗಿ ಬಿಡುತ್ತದೆ.
ಸಿದ್ಧತಾ ಕ್ರಮ
ಪರೀಕ್ಷೆ ಸಮೀಪಿಸುತ್ತಿದ್ದಂತೆ ಸಿದ್ಧತೆ ಹೇಗೆ ಮಾಡಬೇಕು ಎಂಬದರ ಬಗ್ಗೆ ಯೋಜನೆ ರೂಪಿಸಬೇಕು
. ಶಾಲಾ - ಕಾಲೇಜುಗಳಲ್ಲಿ ಪಾಠ - ಪ್ರವಚನಗಳಿಗಾಗಿ ವೇಳಾಪಟ್ಟಿ ತಯಾರಿಸುವಂತೆ ಮಕ್ಕಳು ದೈನಂದಿನ ಚಟುವಟಿಕೆಗಳಿಗೆ ಒಂದು ವ್ಯವಸ್ಥಿತ ವೇಳಾಪಟ್ಟಿ ಸಿದ್ಧಪಡಿಸುವುದು. ಅಲ್ಲದೆ ಅದನ್ನು ಚಾಚೂತಪ್ಪದೆ ಅಳವಡಿಸಿಕೊಳ್ಳುಬೇಕು. ತಾವು ಓದಿದ ಪಾಠಗಳಿಂದ ಮನೆಯರಲ್ಲಿ ಅಥವಾ ಸ್ನೇಹಿತರಲ್ಲಿ ಪ್ರಶ್ನೆ ಕೇಳಲು ಹೇಳಿ, ಉತ್ತರಿಸಲು ಪ್ರಯತ್ನಿಸುವುದು. ಪಾಠದ ವಿಷಯಗಳ ಬಗ್ಗೆ ಕ್ವಿಜ್ ನಡೆಸುವುದು. ಮೆನೆಯಲ್ಲಿಯೇ ಕಿರುಪರೀಕ್ಷೆಗಳನ್ನು ಬರೆಯುವುದು. ಪ್ರತಿದಿನ ಓದುವಾಗ ಪೆನ್ಸಿಲೊಂದನ್ನು ಕೈಯಲ್ಲಿ ಹಿಡಿದುಕೊಂಡು ಪ್ರಮುಖವಾದ ವಿಷಯಗಳನ್ನು ಗುರುತಿಸಿದರೆ ಪರೀಕ್ಷೆ ಸಂದರ್ಭ ನೆನಪಿನಲ್ಲಿ ಉಳಿಯಲು ಸಹಕಾರಿಯಾಗುತ್ತದೆ. ಪರೀಕ್ಷೆಗೆ ಸಿದ್ಧತೆ ಮಾಡುವಾಗ ಮಕ್ಕಳು ಪ್ರಶ್ನೆ ಪತ್ರಿಕೆಯ ಮಾದರಿಗಳನ್ನು ಗಮನಿಸುವುದು ಅಗತ್ಯ. ಹಿಂದಿನ ಮೂರು - ನಾಲ್ಕು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೋಡುವುದು, ಅವುಗಳಿಗೆ ಉತ್ತರಿಸಲು ಪ್ರಯತ್ನಿಸುವುದು. ಇದರಿಂದ ಹೆಚ್ಚು ಪ್ರಾಮುಖ್ಯವಾದ ಪ್ರಶ್ನೆಗಳು ಯಾವುದೆಂದು ತಿಳಿಯುತ್ತದೆ. ಇದು ಮಕ್ಕಳ ಓದುವ ಹೊರೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಗಮನಿಸುವುದರಿಂದ ನಿಗದಿತ ಸಮಯದಲ್ಲಿ ಎಷ್ಟು ಮಾರ್ಕಿನ, ಎಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ತಿಳಿಯುತ್ತದೆ. ಇದು ಪರೀಕ್ಷಾ ಕೊಠಡಿಯಲ್ಲಿ ಮಕ್ಕಳಿಗೆ ಸಮಯ ವ್ಯರ್ಥವಾಗದಂತೆ ಬಳಸಿಕೊಂಡು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರಿ.
ಕೆಲವು ಮಕ್ಕಳಿಗೆ ಏಕಾಂಗಿಯಾಗಿ ಕುಳಿತು
, ಇನ್ನೂ ಕೆಲವರಿಗೆ ಗುಂಪಾಗಿ ಕುಳಿತು ಚರ್ಚಿಸುತ್ತಾ ಓದಿದರೆ ಬೇಗ ತಲೆಗೆ ಹತ್ತುತೆ. ಹಾಗೆ ಕೆಲವರಿಗೆ ಗಟ್ಟಿಯಾಗಿ ಮತ್ತೆ ಕೆಲವರಿಗೆ ಮನಸ್ಸಿನಲ್ಲಿ ಓದಿದರೆ ಹೆಚ್ಚು ನೆನಪಿನಲ್ಲಿರುತ್ತದೆ. ನೇರವಾಗಿ ಓದುತ್ತಾ ಹೋಗುತ್ತಾರೆ. ಇನ್ನು ಕೆಲವರು ಓದಿದ್ದನ್ನು ಬರೆಯುತ್ತಾ ಪುನರ್ ನೆನಪಿಸುತ್ತಾರೆ. ಇವೆಲ್ಲ ಮಕ್ಕಳ ಅಭಿರುಚಿಗೆ ಬಿಟ್ಟದ್ದು. ಕೆಲವರು ಬೆಳಗ್ಗೆ ಬೇಗ ಎದ್ದು, ಮತ್ತೆ ಕೆಲವರು ತಡರಾತ್ರಿ ವರೆಗೆ ಕುಳಿತು ಓದುತ್ತಾರೆ. ಇವು ಮಕ್ಕಳ ಆಸಕ್ತಿ ಮತ್ತು ಅನುಕೂಲಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ಪ್ರಶಾಂತ ವಾತಾವರಣ
ಮಕ್ಕಳು ಓದಲು ಪ್ರಶಾಂತ ವಾತಾವರಣವನ್ನು ಆಯ್ಕೆ ಮಾಡುವುದು ಅಗತ್ಯ
. ಗದ್ದಲ - ಗಲಾಟೆಗಳಿಂದ ದೂರವಿದ್ದು, ಉತ್ತಮ ಗಾಳಿ, ಬೆಳಕು ಇರುವ ಕೋಣೆ ಅಥವಾ ಮನೆಯ ಪಕ್ಕದ ಹಸಿರು ತೋಟ ಮಕ್ಕಳಿಗೆ ಓದಲು ಪ್ರಸಕ್ತ ಸ್ಥಳ. ಬಹಳ ಹೊತ್ತು ಒಂದೆಡೆ ಕುಳಿತು ಓದುವುದು ಕಷ್ಟ. ಹಾಗಾಗಿ ಸ್ವಲ್ಪ ಸಮಯ ನಾಲ್ಕು ಹೆಜ್ಜೆ ಅತ್ತಿತ್ತ ನಡೆದಾಡುತ್ತಾ ಓದುವುದರಿಂದ ದೇಹಕ್ಕೆ ಉಲ್ಲಾಸ ಉಂಟಾಗುತ್ತದೆ. ಓದಲು ನೇಟ್ಟಗೆ ಕುರಬೇಕು. ಓರೆ - ಕೋರೆಯಾಗಿ, ಆರಾಮ ಕುರ್ಚಿ, ಹಾಸಿಗೆ, ಮಂಚ ಇತ್ಯಾದಿಗಳಲ್ಲಿ ಕುಳಿತು ಅಥವಾ ಮಲಗಿ ಓದುವುದರಿಂದ ದೇಹಕ್ಕೆ ಜಡ ಆವರಿಸುತ್ತದೆಯೇ ಹೊರತು ಓದಿದ್ದು ತಲೆಗೆ ಹತ್ತುವುದು ಕಡಿಮೆ. ಓದುವ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು. ಹೊಟ್ಟೆ ಚುರುಗುಟ್ಟುತ್ತಿರುವಾಗ, ನಿದ್ದೆ ತೂಕಡಿಸುತ್ತಿರುವಾಗ ಓದಲು ಕುಳಿತು ಪ್ರಯೋಜನವಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ಸಾಕಷ್ಟು ನಿದ್ದೆ ಮಾಡುವುದರಿಂದ ಮಕ್ಕಳಿಗೆ ಓದಿದ ವಿಷಯ ನೆನಪಿನಲ್ಲಿ ಉಳಿಯುತ್ತದೆ. ಮನೆಯಲ್ಲಿ ಅಮ್ಮ ವಿಶೇಷ ತಿಂಡಿ ಮಾಡಿದ್ದಾರೆ, ಅದು ತುಂಬಾ ರುಚಿಯಾಗಿದೆ ಅಂತ ಪರೀಕ್ಷೆ ಹತ್ತಿರ ಬರುವಾಗ ಮಿತಿಗಿಂತ ಹೆಚ್ಚು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ಪರೀಕ್ಷಾದಿನದ ತಯಾರಿ
ಪರೀಕ್ಷೆಯ ಮೊದಲಿನ ದಿನ ಮಕ್ಕಳು ಚೆನ್ನಾಗಿ ನಿದ್ದೆ ಮಾಡಿ, ಬೆಳಗ್ಗೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸುವುದು. ಅನಂತರ ಪರೀಕ್ಷೆ ಪ್ರಾರಂಭವಾಗುದಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಹಾಲ್ಗೆ ತಲುಪುವಂತೆ ಹೋಗುವುದು. ವೇಗವಾಗಿ ಬರೆಯುವ ಮೂರು - ನಾಲ್ಕು ಪೆನ್ನು, ಪೆನ್ಸಿಲ್, ಸ್ಕೇಲ್, ಹಾಲ್ಟಿಕೇಟ್, ಶಾಲಾ ಗುರುತು ಚೀಟಿ ಇತ್ಯಾದಿಗಳನ್ನು ಪರೀಕ್ಷೆಗೆ ತೆರಳುವಾಗ ಕೊಂಡೊಯ್ಯಲು ಮರೆಯಬಾರದು. ಇವುಗಳನ್ನು ಮುಂಚಿನ ದಿನವೇ ಚೀಲವೊಂದನ್ನು ಸಿದ್ಧಪಡಿಸಿ ಅದರಲ್ಲಿ ಹಾಕಿರಿಸಿದರೆ ಮತ್ತೆ ಒತ್ತಡ ಎದುರಿಸುವ ಪ್ರಮೇಯವಿಲ್ಲ. ಯಾವುದೇ ಕಾರಣಕ್ಕೂ ಪರೀಕ್ಷೆಯ ದಿನ ಬೆಳಗ್ಗೆ ಓದಬಹುದು ಎಂದು ಯಾವ ವಿಷಯವನ್ನು ಬಾಕಿ ಇರಿಸಬೇಡಿ. ಪರೀಕ್ಷಾ ಹಾಲ್ಗೆ ಯಾವುದೇ ಗೊಂದಲ್ಕೊಳಗಾಗದೆ, ಶಾಂತ ಚಿತ್ತದಿಂದ ತೆರಳಿ. ಹೋಗುವ ಮೊದಲು ಜೇಬನ್ನು ಸರಿಯಾಗಿ ಪರೀಕ್ಷಿಸಿ, ಓದುವ ಸಂದರ್ಭ ಇರಿಸಿದ ಚೀಟಿಗಳಿದೆಯೆ ಎಂದು. ಇದ್ದರೆ ಅವುಗಳನ್ನು ಹಾಲ್ನ ಹೋರಗೆ ಬಿಟ್ಟು ಹೋಗಿ. ಪ್ರಶ್ನೆ ಪತ್ರಿಕೆ ಕೈಗಿ ಸಿಕ್ಕಿದ ಕೂಡಲೇ ಪೂರ್ಣವಾಗಿ ಒಮ್ಮೆ ಓದಿ. ಅನಂತರ ಸರಿಯಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಪೂರ್ಣಗೊಳಿಸಿ. ಇದರಿಂದ ಪರೀಕ್ಷೆಯ ಕೊನೆಯಲ್ಲಿ ಉಂಟಾಗುವ ಸಮಯದ ಅಭಾವವನ್ನು ತಪ್ಪಿಸಬಹುದು.
ಮಕ್ಕಳು ವ್ಯವಸ್ಥಿತ ಯೋಜನೆಗಳನ್ನು ರೂಪಿಸಿಕೊಂಡು ಅವುಗಳ ಪ್ರಕಾರವಾಗಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರೆ ಯಶಸ್ಸು ಕಟ್ಟಿಟಬುತ್ತಿ
. ಮಕ್ಕಳು ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಯೋಜನೆಗಳನ್ನು ಹೇಗೆ ತಯಾರಿಸಿಕೊಳ್ಳುವುದು, ಅನುಷ್ಟಾನ ಗೊಳಿಸುವುದು ಎಂಬುದರ ಬಗ್ಗೆ ಪೋಷಕರು, ಶಿಕ್ಷಕರು ಮಾಹಿತಿ ನೀಡಬೇಕು. ಈ ರೀತಿಯ ಯೋಜನೆಗಳನ್ನು ಪರೀಕ್ಷೆಗೆ ಒಂದೆರಡು ದಿನಗಳಿರುವಾಗ ರೂಪಿಸುವುದಲ್ಲ. ಅದು ಶೈಕ್ಷಣಿಕ ವರ್ಷದ ಮೊದಲಿಗೆ ಸಿದ್ಧಪಡಿಸಿಕೊಳ್ಳಬೇಕು. ಇನ್ನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಆದ್ದರಿಂದ ಮಕ್ಕಳು, ಪೋಷಕರು ಈ ಬಗ್ಗೆ ಗಮನ ಹರಿಸುವುದು ಉತ್ತಮ. ಹೀಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡುವುದರಿಂದ ಪರೀಕ್ಷೆ ಹತ್ತಿರ ಬಂದಾಗ ಮಕ್ಕಳಲ್ಲಿ ಉಂಟಾಗುವ ಆತಂಕ, ಗೊಂದಲಗಳಿಂದ ದೂರವಿರಲು ಸಾಧ್ಯ. ಇದು ಒತ್ತಡ ಕಡಿಮೆಗೊಳಿಸುತ್ತದೆ ಅಲ್ಲದೆ ಉತ್ತಮ ಅಂಕಗಳಿಸಲು ಕೂಡ ಸಹಕಾರಿ.
ಪೋಷಕರ ಪ್ರೋತ್ಸಾಹ ಅಗತ್ಯ
ಮಕ್ಕಳಿಗೆ ಓದಿಗಿಂತ ಆಟೋಟ
, ಸಿನೆಮಾ, ಟಿವಿ ನೋಡುವುದು, ಸ್ನೇಹಿತರೊಂದಿಗೆ ತಿರುಗಾಡುವುದು ಇತ್ಯಾದಿ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಹೀಗಿರುವಾಗ ಪೋಷಕರು ಮೊದಲಿಗೆ ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿ ಹುಟ್ಟಿಸುವುದು ಅಗತ್ಯ. ಅದಕ್ಕಾಗಿ ಅವರನ್ನು ಬೈಯುವುದು, ಹೆದರಿಸುವುದು ಸರಿಯಲ್ಲ. ಬದಲಾಗಿ ಅವರಿಗೆ ಓದಿನಿಂದ ಸಿಗುವ ಜ್ಞಾನ, ಪ್ರಯೋಜನಗಳ ಬಗ್ಗೆ ತಿಳಿಯಪಡಿಸುವುದು. ಪರೀಕ್ಷೆ ಸಮೀಪಿಸಿದಾಗ ಉಂಟಾಗುವ ಒತ್ತಡದಿಂದ ಮುಕ್ತಿ ಪಡೆಯಲು ದೈನಂದಿನ ಅಭ್ಯಾಸ ಹೇಗೆ ಸಹಕಾರಿ ಎಂದು ತಿಳಿ ಹೇಳುವುದು ಅಗತ್ಯ. ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳಿಗೆ ಸಣ್ಣ - ಪುಟ್ಟ ಆಮಿಷಗಳನ್ನು ಒಡ್ಡಿಯಾದರೂ ಅವರು ಓದುವಂತೆ ಮಾಡಬೇಕಾಗುತ್ತದೆ (ಉದಾ: ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಸೈಕಲ್ ಕೊಡಿಸುತ್ತೇನೆ ಇತ್ಯಾದಿ). ಎಲ್ಲಕಿಂತ ಮುಖ್ಯವಾಗಿ ಮನೆಗಳಲಿ ಓದುವಂತಹ ವಾತಾವರಣ ಸೃಷ್ಟಿಸಬೇಕು. ಮನೆಯಲ್ಲಿರುವ ಹಿರಿಯರು, ಮಕ್ಕಳ ಎದುರಿಗೆ ಟಿವಿ ನೋಡುತ್ತಾ, ಹರಟೆ ಹೊಡೆಯುತ್ತಾ ಕಾಲಕಳೆಯುವ ಬದಲು; ಯಾವುದಾದರು ಪುಸ್ತಕ ಅಥವಾ ಪತ್ರಿಕೆಯನ್ನು ಓದುತ್ತಾ, ಅವರಿಗೂ ಓದಲು ಪ್ರೇರೇಪಿಸುವುದು ಒಳ್ಳೆಯದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ