ಕೈ ತುಂಬಾ ಸಂಬಳ ಬರುವ ಸಾಫ್ಟ್ವೇರ್ ಎಂಜಿನಿಯರಿಂಗ್ ಉದ್ಯೋಗ ಪಡೆದ ವ್ಯಕ್ತಿ, ಅದನ್ನು ತೊರೆದು ಕೃಷಿ ಕಾರ್ಯದಲ್ಲಿ ತೊಡಗಿ, ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವುದು ಮಹತ್ತರ ಸಾಧನೆ.

ಕೊಂಡಾಣ ಎನ್ನುವುದು ಕರ್ನಾಟಕದ ಮಂಗಳೂರು ಸಮೀಪದ ಒಂದು ಪುಟ್ಟ ಊರು. ಕೆಲವು ದಿನಗಳ ಹಿಂದೆ ಇಂಥ ಊರಿದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಇಂದಿದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿನ ಪ್ರಗತಿಪರ ಕೃಷಿಕ ಚಂದ್ರಶೇಖರ ಗಟ್ಟಿ ಅವರು.

ಕೃಷಿಕರಾಗಿರುವ ನಾರಾಯಣ ಗಟ್ಟಿ ಮತ್ತು ಚಂದ್ರಾವತಿ ದಂಪತಿಯ ಮಗನಾದ ಚಂದ್ರಶೇಖರ ಗಟ್ಟಿ ಸಾಫ್ಟ್ವೇರ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪದವೀಧರರು. ವಿದ್ಯಾಭ್ಯಾಸ ಮುಗಿಸಿದ ತತ್ಕ್ಷಣ ಕೇರಳ ಮೂಲದ ಕಂಪೆನಿಯೊಂದರ ಮಂಗಳೂರು ವಿಭಾಗದಲ್ಲಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. ಕೃಷಿಯ ಬಗೆಗಿನ ಒಲವಿನಿಂದಾಗಿ ವಂಶಪಾರಂಪರ್ಯವಾಗಿ ಬಂದ ಕೃಷಿ ಚಟುವಟಿಕೆಗಳನ್ನು ಪ್ರವೃತ್ತಿಯಾಗಿ ಮುಂದುವರಿಸಿದರು.
ಕೃಷಿಯೇ ಪ್ರಮುಖ ವೃತ್ತಿಯಾಯಿತು
ಕಳೆದ 14 ವರ್ಷಗಳ ಹಿಂದೆ ಗಟ್ಟಿ ಅವರು ಕೊಂಡಾಣದಲ್ಲಿನ ತಮ್ಮ ಮೂರು ಎಕ್ರೆ ಗುಡ್ಡೆಯಲ್ಲಿ ತೆಂಗು ಬೆಳೆಯುವ ಬಗ್ಗೆ ಚಿಂತನೆ ನಡೆಸಿದರು. ಅನಂತರ ಈ ಕುರಿತು ಜಿಲ್ಲೆಯಲ್ಲಿ ಸೇರಿದಂತೆ ಹತ್ತಿರದ ಕಾಸರಗೋಡಿನಲ್ಲಿಯೂ, ತೆಂಗು ಬೆಳೆವಲ್ಲಿಗೆ ತೆರಳಿ ಅಧ್ಯಯನ. ಇದೇ ವೇಳೆ ಔಷಧೀಯ ಗುಣಗಳಿರುವ ಕೆಂದಾಳೆ ತೆಂಗಿನ ಕೃಷಿಯ ಮಹತ್ವವನ್ನು ಅರಿತರು. ಮೊದಲಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಕೆಂದಾಳೆ ತೆಂಗಿನ ಕೃಷಿಯನ್ನು ಆರಂಭಿಸಲಾಯಿತು. ತದನಂತರ ಅದರಲ್ಲಿ ಹಂತ ಹಂತವಾಗಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ಕೃಷಿಯನ್ನು ಆಧುನೀಕರಣಗೊಳಿಸಿದರು. ತೆಂಗಿನ ಕೃಷಿಗೆ ಸಂಬಂಧಿಸಿದ ಕಮ್ಮಟ, ಕಾರ್ಯಾಗಾರಗಳಲ್ಲಿ ಪಾಲ್ಗೊಂಡರಲ್ಲದೆ, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಅಭ್ಯಸಿಸಿದರು. ಅವುಗಳನ್ನು ತಮ್ಮ ಕೃಷಿ ಕಾರ್ಯದಲ್ಲಿ ಪ್ರಯೋಗಿಸಿ ಯಶಸ್ಸಿಯಾಗುತ್ತಿದ್ದಂತೆ, ಕೃಷಿಯನ್ನೇ ಪ್ರಮುಖ ವೃತ್ತಿಯನ್ನಾಗಿಸಿದರು.
ಸಾಧನೆ
ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಅವರು ಕೆಲವೇ ವರ್ಷಗಳಲ್ಲಿ ಹಲವಾರು ಸಾಧನೆ ಮೆರೆದರು. ಕೆಂದಾಳೆ ತೆಂಗಿನ ಕೃಷಿಗೆ ಪ್ರಾಮುಖ್ಯ ನೀಡಿದ ಅವರಿಗೆ ಸಾವಯವ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ದೊರೆಯಿತು. ಇದರಿಂದ ಪ್ರೇರಿತರಾಗಿ ಕೆಂದಾಳೆಯಲ್ಲಿ ‘ಡಿ x ಟಿ ಹೈಬ್ರಿಡ್’, ‘ಚೌಗಟ್ ಆರೆಂಜ್ ಡಾರ್ಫ್’, ‘ಮಲೇಷ್ಯನ್ ಎಲ್ಲೋ ಡಾರ್ಫ್’, ‘ವೆಸ್ಟ್ ಕಾಸ್ಟ್ ಟೌತ್’ ಮುಂತಾದ ತಳಿಗಳನ್ನು ಪರಿಚಯಿಸುವಲ್ಲಿ ಯಶಸ್ಸಿ. ಹಲವಾರು ಕೃಷಿ ವಿಜ್ಞಾನಿಗಳ ಕೂಡ ಇವರು ತಯಾರಿಸಿದ ತಳಿಗಳ ಮಾದರಿ ಪರೀಕ್ಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು.
ಗೌರವ

ರಾಷ್ಟ್ರೀಯ ಮನ್ನಣೆ
ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ಅವರ ಹೆಬ್ಬಯಕೆ. ಅದುವೇ ಇಂದು ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದೆ. ಚಂದ್ರಶೇಖರ ಗಟ್ಟಿ ಅವರು ತೆಂಗು ಕೃಷಿಯಲ್ಲಿ ‘ಕುಬ್ಜ ಮತ್ತು ಹೈಬ್ರಿಡ್’ ತಳಿಯನ್ನು ಅಭಿವೃದ್ಧಿ ಪಡಿಸಿದ ಸಾಧನೆಯನ್ನು ಕೇಂದ್ರದ ತೆಂಗು ಅಭಿವೃದ್ಧಿ ಮಂಡಳಿಯು ಗಮನಿಸಿದೆ. 2010ನೆಯ ಸಾಲಿನ ರಾಷ್ಟ್ರಮಟ್ಟದಲ್ಲಿ ಗುರುತಿಸಿದ ಐವರು ಉದಯೋನ್ಮುಖ ತೆಂಗು ಕೃಷಿಕರಲ್ಲಿ ಗಟ್ಟಿ ಅವರು ಒಬ್ಬರು. ಸೆಪ್ಟಂಬರ್ 2ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಲ್ಲಿನ ಮುಖ್ಯಮಂತ್ರಿ ತರುಣ್ ಗೊಶೋಯ್ ಪ್ರಶಸ್ತಿ ಪ್ರದಾನಿಸಿದರು. ಉಪಬೆಳೆಗಳಿಗೂ ಮಹತ್ವ ಕೆಂದಾಳೆ ಬೆಳೆಯುವಲ್ಲಿಗೆ ತಮ್ಮ ಕೃಷಿಯನ್ನು ಸೀಮಿತಗೊಳಿಸದೆ, ಹಲವಾರು ಉಪಬೆಳೆಗಳಿಗೂ ವಿಸ್ತರಿಸಿದ್ದಾರೆ. ಮುಖ್ಯವಾಗಿ ಜಾಯಿಕಾಯಿ, ಅಡಿಕೆ, ಬಾಳೆ, ಔಷಧೀಯ ಸಸ್ಯ, ಜೇನು ವ್ಯವಸಾಯವನ್ನು ಹೊಸ ರೀತಿಯಲ್ಲಿ ಅಳವಡಿಸಿಕೊಂಡು ಯಶಸ್ಸಿಯಾದರು.
ಎರೆಹುಳ ಗೊಬ್ಬರ ತಯಾರಿ
ತಾನು ಬೆಳಯುವ ಎಲ್ಲ ಗಿಡ ಮರಗಳಿಗೂ, ತೋಟದಲ್ಲಿ ಸಿಗುವ ಕಸ, ನಿರುಪಯುಕ್ತ ವಸ್ತುಗಳನ್ನು ಬಳಸಿ ತಯಾರಿಸಿದ ಎರೆಹುಳ ಗೊಬ್ಬರವನ್ನೇ ಬಳಸುತ್ತಾರೆ. ಎರೆಹುಳಗೊಬ್ಬರ ತಯಾರಿಗೆ 10 ಪ್ರತ್ಯೇಕ ಘಟಕಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ ಅದರಲ್ಲೂ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುವರು. ಜೈವಿಕ ಗೊಬ್ಬರವನ್ನು ಎರೆಹುಳು ಗೊಬ್ಬರಕ್ಕೆ ಸೇರಿಸಿ ಗೊಬ್ಬರದ ಪೌಷ್ಟಿಕಾಂಶವನ್ನು ಹೆಚ್ಚಿಸಿ ಬಳಸುವುದು ಇವರು ಕಂಡುಕೊಂಡ ಉಪಾಯ. ತಮ್ಮಲ್ಲಿಗೆ ಬಂದ ಆಸಕ್ತ ಕೃಷಿಕರಿಗೆ ಮಾಹಿತಿ ನೀಡುವವರಲ್ಲದೆ, ತೆಂಗಿನ ಸಸಿಗಳ ನರ್ಸರಿ ಕಾರ್ಯ ಕೂಡ ನಡೆಸುತ್ತಾರೆ. ಕೃಷಿಯಲ್ಲಿ ಅವರು ಸಾಧಿಸಿದ ಯಶಸ್ಸಿನಿಂದ ಇದೀಗ ಕೃಷಿಯಾಧಾರಿತ ಉದ್ದಿಮೆಗಳನ್ನು ರೂಪಿಸುವ ಯೋಜನೆಯತ್ತ ಮನನ ಮಾಡುತ್ತಿದ್ದಾರೆ.ಕೂಲಿ ಕಾರ್ಮಿಕರ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆ ಇತ್ಯಾದಿ ಸಮಸ್ಯೆಗಳಿಂದ ಕಂಗೆಟ್ಟಿರುವ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಉದ್ದೇಶ ಗಟ್ಟಿ ಅವರದ್ದು. ಹೀಗೆ ಮುಂದೆಯೂ ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಕಟ ಬಯಕೆ ಅವರಿಗೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ