ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಇಂದು ಅಸ್ಥಿರತೆ ತಾಂಡವಾಡುತ್ತಿದೆ.facebook ಉತ್ಪನ್ನಗಳ ಬೆಲೆಯಲ್ಲಿ ವಿಪರೀತ ಏರುಪೇರುಗಳುಂಟಾಗುತ್ತಿವೆ. ಇದು ಕೃಷಿಕರ ಬದುಕನ್ನು ಕಾಡುತ್ತಿದೆ. ಸ್ವಾತಂತ್ರ್ಯದ ಅನಂತರ ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಿ ಕೃಷಿ ಅಭಿವೃದ್ಧಿಗೆ ಮಹತ್ತರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಹಸಿರು ಕ್ರಾಂತಿಯ ಮೂಲಕ ಕೃಷಿ ಚಟುವಟಿಕೆಗಳಿಗೆ ಬಹಳಷ್ಟು ಉತ್ತೇಜನ ನೀಡಲಾಯಿತು. ಆದರೂ ಕೃಷಿ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಇಂದಿನ ವರೆಗೂ ಸಾಧ್ಯವಾಗಿಲ್ಲ. ಇದು ಕೃಷಿಕರ ದುರಾದೃಷ್ಟವೇ ಸರಿ.
ಅಸ್ಥಿರತೆಯ ನಿದರ್ಶನ
ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಯಲ್ಲಿನ ಬದಲಾವಣೆಗಳನ್ನು ಗಮನಿಸಿದೆ ಸಾಕು ಕೃಷಿಯನ್ನು ಮಾರುಕಟ್ಟೆ ಎಂಬ ಭೂತ ಕಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಕೆಲವು ವರ್ಷಗಳ ಹಿಂದೆ ಅಡಿಕೆಯ ಮಾರುಕಟ್ಟೆ ಬೆಲೆ ವಿಪರೀತ ಏರಿ ಕಿಲೋ ಒಂದಕ್ಕೆ ರೂ. 160ರಿಂದ 180ರ ವರೆಗೂ ತಲುಪಿತ್ತು. ಇದರಿಂದ ಉತ್ತೇಜಿತರಾದ ಕೃಷಿಕರು ಭಾರೀ ಪ್ರಮಾಣದಲ್ಲಿ ಬಂಡವಾಳವನ್ನು ಅಡಿಕೆ ಕೃಷಿಯಲ್ಲಿ ಹೂಡಿ ಇದ್ದ ಗುಡ್ಡಗಳನ್ನು ಅಡಿಕೆ ತೋಟವಾಗಿ ಪರಿವರ್ತಿಸಿದರು. ಇದು ಅಡಿಕೆ ತೋಟದ ಬೆಲೆ ಭಾರೀ ಹೆಚ್ಚಳಕ್ಕೆ ಕಾರಣವಾಯಿತು.
ಒಂದೆರಡು ವರ್ಷದಲ್ಲಿ ಅಡಿಕೆಯ ಮಾರುಕಟ್ಟೆ ಬೆಲೆ ದಿಢೀರ್ ಕುಸಿತ ಕಂಡು ಕಿಲೋ ಒಂದಕ್ಕೆ ರೂ. 40 ವರೆಗೆ ಇಳಿಯಿತು. ಇದರಿಂದ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ ಕೃಷಿಕರು ಕಂಗಾಲಾದರು. ತದನಂತರ ಕೆಲವು ವರ್ಷಗಳೇ ಕಳೆದರೂ ಅಡಿಕೆ ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಸಾಸಲು ಸಾಧ್ಯವಾಗಿಲ್ಲ. ಬೆಳಗ್ಗೆ ಒಂದು ಬೆಲೆಯಿದ್ದರೆ. ಸಂಜೆಯ ವೇಳೆ ಬೆಲೆಯಲ್ಲಿ ಬಳಷ್ಟು ಬದಲಾವಣೆಗಳು ನಡೆಯತೊಡಗಿದವು. ಇದು ಕೇವಲ ಅಡಿಕೆಯೊಂದರ ಸ್ಥಿತಿಯಲ್ಲ. ಕರಿಮೆಣಸು, ತೆಂಗಿನಕಾಯಿ, ಬಾಳೆಕಾಯಿ ಇತ್ಯಾದಿಗಳ ಪರಿಸ್ಥಿತಿಯೂ ಹೀಗೆ. ಅಡಿಕೆಯ ಬೆಲೆಯಲ್ಲಿ ಅಸ್ಥಿರತೆ ಇರುವಾಗಲೇ ಇನ್ನೊಂದೆಡೆ ವೆನಿಲ್ಲಾದ ಬೆಲೆ ಕೆಲವು ಸಾವಿರಗಳಷ್ಟು ಏರಿಕೆ ಕಂಡಿತು. ಕೃಷಿಕರು ಅಡಿಕೆಗಿಂತ ವೆನಿಲ್ಲಾ ಉತ್ತಮ ಲಾಭದಾಯಕ ಕೃಷಿ ಎಂದು ಅದನ್ನು ಬೆಳೆಯತೊಡಗಿದರು. ಸ್ವಲ್ಪವೇ ಸಮಯದಿಲ್ಲಿ ಕೃಷಿಕರಿಗೆ ವೆನಿಲ್ಲಾವು ಕೈಕೊಟ್ಟಿತು. ಇದು ಕೃಷಿಕರ ಆರ್ಥಿಕ ಬದುಕಿಗೆ ಇನ್ನೊಂದು ಹೊಡೆತ ನೀಡಿತು. ಹೀಗೆ ಕೃಷಿ ಮಾರುಕಟ್ಟೆಯ ದುಸ್ಥಿತಿಯಿಂದ ತೊಳಲಾಡುತ್ತಿದ್ದ ಕೃಷಿಕರಿಗೆ ಇತ್ತೀಚೆಗಿನ ಒಂದೆರಡು ವರ್ಷಗಳಲ್ಲಿ ರಬ್ಬರ್ ಬೆಳೆಯು ಆಶಾಕಿರಣವಾಗಿ ಮೂಡಿಬಂತು. ರಬ್ಬರ್ಗೆ ಕಿಲೋ ಒಂದಕ್ಕೆ ಸುಮಾರು ರೂ. 150ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗ ತೊಡಗಿತು. ಇದು ಕೃಷಿಕರು ರಬ್ಬರ್ ಬೆಳೆಯನ್ನು ಹೆಚ್ಚಾಗಿ ಬೆಳೆಸುವಂತೆ ಮಾಡಿತು. ಆದರೆ ಂದು ದಿನದಿಂದ ದಿನಕ್ಕೆ ರಬ್ಬರ್ನ ಮಾರುಕಟ್ಟೆ ಬೆಲೆಯು ಕುಸಿಯುತ್ತಿರುವುದು ಕೃಷಿಕರಲ್ಲಿ ಭೀತಿ ಹುಟ್ಟಿಸಿದೆ.
ಯಾವುದೇ ಒಂದು ಕೃಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಇದೆ ಎಂದಾಗ ಆ ಉತ್ಪನ್ನಗಳನ್ನು ಬೆಳೆಯಲು ಕೃಷಿಕರು ಬಹಳಷ್ಟು ಬಂಡವಾಳ ಹೂಡುತ್ತಾರೆ. ಕೃಷಿಕರು ಆ ಉತ್ಪನ್ನವನ್ನು ಬೆಳೆದು ಮಾರಾಟಕ್ಕೆ ಕೊಂಡು ಹೋಗುವಾಗ ಉತ್ಪನ್ನದ ಬೆಲೆ ಗಣನೀಯ ಕುಸಿತ ಕಂಡಿರುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುವುದು ಸಹಜ. ಎಲ್ಲ ಕೃಷಿ ಉತ್ಪನ್ನಗಳು ಈ ರೀತಿಯಾಗಿ ಮಾರುಕಟ್ಟೆಯ ಅಸ್ಥಿರತೆ ಎದುರಿಸುತ್ತಿರುವುದು ಶೋಚನೀಯ ವಿಚಾರ.
ಅಸ್ಥಿರತೆಯ ಪರಿಣಾಮ
ಕೃಷಿ ಉತ್ಪನ್ನಗಳ ಮಾರುಕಟ್ಟೆ ಅಸ್ಥಿರತೆಯಿಂದಾಗಿ ಇಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಜನರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಕೃಷಿಯು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ಅನೇಕ ಕಡೆ ಕೃಷಿ ಭೂಮಿ ಪಾಳು ಬಿದ್ದಿವೆ. ಹಲವಾರು ಕಡೆ ಕೃಷಿ ಭೂಮಿಯಲ್ಲಿ ಕಟ್ಟಡಗಳನ್ನು ಕಟ್ಟಿ ಇತರ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ರೀತಿಯಾಗಿ ಕೃಷಿ ವ್ಯವಸ್ಥೆ ಸೊರಗುತ್ತಿರುವುದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಸಾಸುವಲ್ಲಿ ಶ್ರಮಪಡಬೇಕಾದುದು ಅನಿವಾರ್ಯವಾಗಿದೆ. ಒಂದು ದೇಶದ ಆರ್ಥಿಕ ಪರಿಸ್ಥಿತಿ ವ್ಯವಸ್ಥಿತವಾಗಿರಲು ಅಲ್ಲಿನ ಕೈಗಾರಿಕೆ, ಕೃಷಿ, ನೀರಾವರಿ, ವಾಣಿಜ್ಯ ಕ್ಷೇತ್ರಗಳು ಸ್ಥಿರವಾಗಿ ಕಾರ್ಯ ನಿರ್ವಹಿಸಬೇಕು. ಅವುಗಳಲ್ಲಿ ಯಾವುದೇ ಒಂದು ಕ್ಷೇತ್ರ ಸೊರಗಿದರೂ ದೇಶದ ಆರ್ಥಿಕ ಸ್ಥಿತಿ ಅವ್ಯವಸ್ಥಿತವಾಗಬಲ್ಲುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ