ದೀಪದಿಂದ ದೀಪವ ಹಚ್ಚಬೇಕು ಮಾನವ
‘‘
.....ದೀಪದಿಂದ ದೀಪವ ಹಚ್ಚಬೇಕು ಮಾನವ.....’’ ಎಂಬ ಕವಿ ವಾಣಿಯಂತೆ ಇಲ್ಲಿ ದೀಪಗಳನ್ನು ಬೆಳಗುವುದಕ್ಕೆ ಮಹತ್ವ. ಯಾವಾಗಲೂ ಸಂತೋಷದಿಂದ ಬಾಳಬೇಕು. ಈ ಸಂತೋಷವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಪ್ರೀತಿ - ಸೌಹರ್ದದಿಂದಿರಬೇಕು ಎಂಬ ಭಾವನೆ ಪ್ರಚುರಪಡಿಸುವುದಕ್ಕಾಗಿಯೇ ದೀಪದಿಂದ ದೀಪಗಳನ್ನು ಹಚ್ಚಲಾಗುತ್ತದೆ. ಮಾನವ ಕತ್ತಲಿನಿಂದ ಬೆಳಕಿನೆಡಗೆ ಸಾಗಬೇಕು ಎಂಬುದು ದೀಪಾವಳಿಯ ಉದ್ದೇಶ. ಅದಕ್ಕಾಗಿಯೇ ದೀಪಾವಳಿ ಸಂದರ್ಭ ಜ್ಯೋತಿ ಬೆಳಗಿ ಕತ್ತಲನು ಮರೆ ಮಾಡಿದಂತೆ, ನಮ್ಮ ಮನಸ್ಸಿನೊಳಗಿ ಕಲ್ಮಶ, ಅಂಧಕಾರಗಳನ್ನು ದೂರಮಾಡು ಎಂದು ಪ್ರಾರ್ಥಿಸುತ್ತೇವೆ. ಇದರಿಂದಲೇ ಕವಿ ಕೂಡ ‘‘ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲ್ಲಿ ಕೈ ಹಿಡಿದು ನಡೆಸೆನ್ನನು’’ ಎಂದಿದ್ದರೆ. ಮನೆಯ ಒಳ - ಹೊರಗೂ ದೀಪಗಳನ್ನು ಹಚ್ಚಿಟ್ಟು ಮನ ಮತ್ತು ಮನೆಯ ಕತ್ತಲನ್ನು ಹೋಗಲಾಡಿಸು ಎಂದು ಜನ ಆಶಿಸುತ್ತಾರೆ. ಸಮಾಜದ ಎಲ್ಲ ವಗರದವರೂ ಜಾತಿ - ಮತ, ಸಮುದಾಯ ಇತ್ಯಾದಿ ಬೇಧ - ಭಾವ ಇಲ್ಲದೆ ಆಚರಿಸುವ ಹಬ್ಬ ದೀಪಾವಳಿ. ಇದು ಭ್ರಾತೃತ್ವ, ಸೌಹಾರ್ದದ ಪ್ರತೀಕ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಹಾಗೇನೆ ದೀಪಾವಳಿಯು ಮನದಲ್ಲಿರುವ ಅಜ್ಞಾನ ಎಂಬ ಕತ್ತಲನ್ನು ಹೋಗಲಾಡಿಸುವಂತಹ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುತ್ತದೆ. ದೀಪ ತನ್ನ ಬೆಳಕಿನಂತೆ ನಮ್ಮ ಕೀರ್ತಿ, ವ್ಯಕ್ತಿತ್ವ ಸದಾ ಪ್ರಕಾಶಿಸುತ್ತಿರಲಿ ಎಂದು ಹಾರೈಸುತ್ತದೆ. ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ. ಅಂದರೆ ಜ್ಞಾನವು ದೀಪದಂತೆ ಪ್ರಕಾಶಿಸಲಿ ಎಂಬುದು ದೀಪಾವಳಿಯ ಆಶಯ .
ದೀಪಾವಳಿ ಆಚರಣೆಯ ಹಿನ್ನೆಲೆ
ದೀಪಾವಳಿ ಆಚರಣೆಯ ಹಿಂದೆ ಹಲವಾರು ಕಥೆಗಳನ್ನು ಪುರಾಣಗಳಲ್ಲಿ
, ಇತಿಹಾಸದಲ್ಲಿ ಕಾಣಬಹುದು. ದೀಪಾವಳಿಯ ಮೊದಲ ದಿನ ಶ್ರೀಕೃಷ್ಣನು ನರಕಾಸುರನನ್ನು ವಧಿಸಿದ ದಿನ. ಹಾಗಾಗಿ ನರಕಚತುರ್ದಶಿ ಎಂದು ಆಚರಿಸುತ್ತೇವೆ. ಆ ದಿನವನ್ನು ಮಕ್ಕಳ ಹಬ್ಬ ಎಂದೂ ಆಚರಿಸಲಾಗುತ್ತದೆ. ಅಂದು ಚಿಕ್ಕ ಮಕ್ಕಳಿಂದ ವೃದ್ಧರ ವರೆಗೆ ಎಲ್ಲರೂ ತೈಲಾಭ್ಯಂಜನ ಮಾಡುತ್ತಾರೆ. ಶ್ರೀರಾಮನು ರಾವಣನನ್ನು ಕೊಂದು ಸೀತೆ, ಲಕ್ಷಣ ಹಾಗೂ ವಾನರ ಸೈನ್ಯದೊಡನೆ ಅಯೋಧ್ಯೆಗೆ ಮರಳಿದ ದಿನ. ಅಂದು ಅಯೋಧ್ಯಾ ವಾಸಿಗಳು ಊರು ತುಂಬಾ ಹಣತೆ ಹಚ್ಚಿ ರಾಮನನ್ನು ಸ್ವಾಗತಿಸಿದರಂತೆ. ತದನಂತರ ಆ ದಿನ ದೀಪಾವಳಿ ಎಂದೆನಿಸಿತು ಎಂಬ ಪ್ರತೀತಿಯಿದೆ. ಮಹಾಬಲಿ ವಾಮನನ ಎದುರು ವರ ಕೇಳು ಎಂದು ಹೇಳಿ ಸೋತು ತನ್ನ ರಾಜ್ಯವನ್ನೆಲ್ಲಾ ಧಾರೆಯೆರೆದು ಅದು ಸಾಲದಾದಗ ತನ್ನನ್ನೇ ತಾನು ಸಮರ್ಪಿಸಿದ ನೆನಪಿಗಾಗಿ ದೀಪಾವಳಿಯಲ್ಲಿ ಬಲೀಂದ್ರ ಪೂಜೆ ನಡೆಸುತ್ತಾರೆ. ವೈದ್ಯರು ಧನ್ವಂತರಿ ಜಯಂತಿ ಎಂದು ದೀಪಾವಳಿ ಆಚರಿಸುತ್ತಾರೆ. ಬಾಹುಬಲಿ ದಿಗ್ವಿಜಯಿಯಾಗಿ ಪಡೆದ ರಾಜ್ಯ, ಸಂಪತ್ತುಗಳೆಲ್ಲವನ್ನು ಭರತನಿಗೆ ಧಾರೆ ಎರೆದು ಮಹಾವೀರನಾದ ದಿನ ಎಂದು ಜೈನರು ಕೂಡ ದೀಪಾವಳಿಯನ್ನು ಆಚರಿಸುವರು. ಅಲ್ಲದೆ ಕಾರ್ತಿಕ ಮಾಸದ ಚತುರ್ದಶಿಯು ಜೈನರ ಕೊನೆಯ ತೀರ್ಥಂಕರರು ಮೋಕ್ಷ ಹೊಂದಿದ ದಿನವೆಂದು ಆಚರಿಸಲ್ಪಡುತ್ತದೆ. ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿಗೆ ಬಹಳ ಪ್ರಾಮುಖ್ಯವಿದೆ. ವಿಕ್ರಮಾದಿತ್ಯ ದೀಪಾವಳಿಯಂದು ಸಿಂಹಾಸನವನ್ನೇರಿದ. ಅಂದಿನಿಂದ ವಿಕ್ರಮ ಶಕೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಭಾರತದ ಬೇರೆ - ಬೇರೆ ಭಾಗದ ಜನರು ವಿವಿಧ ರೀತಿಯ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ. ಆದರೆ ಇವುಗಳ ಉದ್ದೇಶ ಮಾತ್ರ ಅಂಧಕಾರವನ್ನು ನಿವಾರಿಸು, ಸುಜ್ಞಾನದೆಡೆಗೆ ಮುನ್ನಡೆಸು ಎಂದು ಬೇಡುವುದಾಗಿದೆ. ದೀಪಾವಳಿಯ ವೈಶಿಷ್ಟ ರಾತ್ರಿಯಾಗುತ್ತಿದ್ದಂತೆ ಹೊಲ, ತೋಟ, ಅಂಗಳ, ಪಟ್ಟಣ, ಬೀದಿ, ಹೀಗೆ ವಿವಿಧೆಡೆಗಳಲ್ಲಿ ಬೆಳಗುವ ಪುಟ್ಟಪುಟ್ಟ ದೀಪಗಳು, ಆ ದೀಪಗಳ ಬೆಳಕಿಗೆ ಮನೆಮಂದಿಯೆಲ್ಲಾ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವುದು. ಯಾವುದೇ ಕಷ್ಟ - ನೋವು, ದುಃಖ - ದುಮ್ಮಾನಗಳಿದ್ದರೂ ಕೆಲವು ಕ್ಷಣಗಳವರೆಗಾದರೂ ಮರೆತು ನಲಿದಾಡುವಂತೆ ಮಾಡುವುದು ದೀಪಾವಳಿಯ ವೈಶಿಷ್ಟ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ