ಭಾನುವಾರ, ಜೂನ್ 10, 2012

ಮರೆಯಾಗುತ್ತಿರುವ ಬೆತ್ತದ ಬುಟ್ಟಿಗಳು


ಆಧುನಿಕರಣದಿಂದಾಗಿ ಪ್ರಮುಖ ಗುಡಿಕೈಗಾರಿಕೆಗಳಲ್ಲಿ ಒಂದಾದ ಬೆತ್ತದ ಬುಟ್ಟಿ ತಯಾರಿಕೆ ಇಂದು ನಶಿಸಿಹೋಗುತ್ತಿದೆ.facebook ಬುಟ್ಟಿ ತಯಾರಕರ ಸಂಖ್ಯೆಯು ಗಣನೀಯವಾಗಿ ಇಳಿದಿದ್ದು, ಮುಂದೆ ಇಂತಹ ಬುಟ್ಟಿಗಳನ್ನು ವಸ್ತು ಸಂಗ್ರಹಾಲಯಗಳಲ್ಲಿಯೇ ನೋಡಬೇಕಾದ ಸ್ಥಿತಿ ಉಂಟಾದರೂ ಆಶ್ಚರ್ಯವಿಲ್ಲ. ಬೆತ್ತದ ಬುಟ್ಟಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿದ ಜನರು ಕಾಡಿನಲ್ಲಿ ದೊರೆಯುವ ಬೆತ್ತ, ಬಿದಿರುಗಳನ್ನು ಬಿಳಸಿ ತಯಾರಿಸುತ್ತಾರೆ.
 ರೈತರು ಕೃಷಿ ಚಟುವಟಿಕೆಗಳಲ್ಲಿ ಇಂತಹ ಬುಟ್ಟಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆಧುನಿಕರಣದಿಂದಾಗಿ ಇಂದು ಬೆತ್ತದ ಬುಟ್ಟಿಗಳ ಸ್ಥಾನವನ್ನು ಪ್ಲಾಸ್ಟಿಕ್, ರಬ್ಬರ್ ಬುಟ್ಟಿಗಳು ಆಕ್ರಮಿಸಿಕೊಂಡಿದೆ. ಇದರಿಂದ ಬೆತ್ತದ ಬುಟ್ಟಿಗಳ ಬೇಡಿಕೆ ಕುಗ್ಗಿದ್ದು, ಅವುಗಳನ್ನು ತಯಾರಿಸುವ ವರ್ಗದ ಜನರು ಪರ್ಯಾಯ ಉದ್ಯೋಗ ನೋಡಿಕೊಳ್ಳುವಂತಾಗಿದೆ. ಕಾಡುಗಳ ನಾಶ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಬೆತ್ತದ ಬುಟ್ಟಿ ತಯಾರಿಕೆಗೆ ಅಗತ್ಯವಾದ ಕಚ್ಛಾ ಸಾಮಾಗ್ರಿಗಳು ದೊರೆಯುತ್ತಿಲ್ಲ. ಇದು ಬೆತ್ತದ ಬುಟ್ಟಿಗಳ ಬೆಲೆ ದುಬಾರಿಯಾಗಲು ಕಾರಣ. ಇವುಗಳ ಬೆಲೆ ದುಬಾರಿಯಾದುದರಿಂದ ಜನ ಕಡಿಮೆ ಬೆಲೆಗೆ ದೊರೆಯುವ ಪ್ಲಾಸ್ಟಿಕ್, ರಬ್ಬರ್ ಬುಟ್ಟಿಗಳತ್ತ ಗಮನಹರಿಸಿದ್ದಾರೆ. ಮುಖ್ಯವಾಗಿ ಇಂದಿನ ವಿದ್ಯಾವಂತ ಜನಾಂಗ ಬುಟ್ಟಿ ಹೆಣೆಯುವಂತಹ ಕಷ್ಟದ ಕೆಲಸಗಳಿಗೆ ಮುಂದಾಗದಿರುವುದರಿಂದ ಇಂತಹ ಗುಡಿಕೈಗಾರಿಕೆಗಳು ಮೂಲೆ ಗುಂಪಾಗುತ್ತಿವೆ.
ಕೃಷಿ ಚಟುವಟಿಕೆಗಳಲ್ಲಿ ವಿವಿಧ ಕೆಲಸಗಾಳಿಗೆ ಬೇರೆಬೇರೆ ರೀತಿಯ ಬೆತ್ತದ ಬುಟ್ಟಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಗೊಬ್ಬರ ತೆಗೆಯಲು, ಮಣ್ಣು ತೆಗೆಯಲು, ಅಡಿಕೆ ಹಾಕಲು, ಭತ್ತ ಹಾಕಲು, ಕೋಳಿ ಮರಿಗಳ ರಕ್ಷಣೆಗಾಗಿ ವಿವಿಧ ಆಕಾರದ ಬುಟ್ಟಿಗಳನ್ನು ತಯಾರಿಸಿ ಬಳಸಲಾಗುತ್ತದೆ. ಈ ಬುಟ್ಟಿಗಳು ಅವುಗಳ ಗಾತ್ರಕ್ಕೆ ತಕ್ಕಂತೆ ಬೇರೆ ಬೇರೆ ಬೆಲೆಗಳನ್ನು ಹೊಂದಿವೆ. ಸಾಮಾನ್ಯ ಗಾತ್ರದ ಬುಟ್ಟಿಗಳು ಸುಮಾರು 30ರೂ.ಗಳಿಂದ 50ರೂ. ಬೆಲೆ ಹೊಂದಿವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ದಿನಕ್ಕೆ 2ರಿಂದ 3 ಬುಟ್ಟಿಗಳನ್ನು ತಯಾರಿಸಬಲ್ಲರು. ಕಾಡು - ಮೇಡುಗಳನ್ನು ಅಲೆದು ಬುಟ್ಟಿ ತಯಾರಿಗೆ ಬೇಕಾದ ಬಿದಿರು, ಇತರ ಕಾಡು ಬಳ್ಳಿಗಳನ್ನು ಸಂಗ್ರಹಿಸಿ ಬುಟ್ಟಿ ತಯಾರಿಸಿದ ವ್ಯಕ್ತಿಗೆ ದಿನಕ್ಕೆ 90 ರೂ.ಗಳಿಂದ 150ರೂ. ಲಭಿಸುತ್ತದೆ. ಈ ಹಣದಿಂದ ಕುಟುಂಬವೊಂದನ್ನು ಮುನ್ನಡೆಸಲು ಅಸಾಧ್ಯವಾಗಿರುವುದರಿಂದ ಬುಟ್ಟಿ ತಯಾರಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬುಟ್ಟಿಗಳ ಮಾರಾಟಕ್ಕೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಮಧ್ಯ ವರ್ತಿಗಳಾದ ವ್ಯಾಪಾರಿಗಳು ಲಾಭ ಪಡೆಯುತ್ತಾರೆ. ಬುಟ್ಟಿ ತಯಾರಿಸುವ ವರ್ಗದ ಜನರು ಅನಕ್ಷರಸ್ಥರಾಗಿರುವುದೇ ಇದಕ್ಕೆ ಕಾರಣ.
 ನಶಿಸಿ ಹೋಗುತ್ತಿರುವ ಇಂತಹ ಗುಡಿಕೈಗಾರಿಕೆಗಳ ಬಗ್ಗೆ ಸರಕಾರ ಗವನಹರಿಸಿ ಅಗತ್ಯ ಪ್ರೋತ್ಸಾಹ ನೀಡಬೇಕಾಗಿದೆ. ಇದರಿಂದ ಒಂದು ವರ್ಗದ ಜನರ ಕುಲಕಸುಬು ಉಳಿಯುತ್ತದೆ. ಅಲ್ಲದೆ ಜೌದ್ಯೋಗಿಕ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಬುಟ್ಟಿ ಹೆಣೆಯುವ, ಚಾಪೆ ತಯಾರಿ ಇತ್ಯಾದಿ ಗುಡಿಕೈಗಾರಿಕೆಗಳ ಬಗ್ಗೆ ಹಳ್ಳಿ - ಹಳ್ಳಿಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಬೇಕು. ಇದರಿಂದ ಒಂದು ವರ್ಗದ ಜನರು ಮಾತ್ರವಲ್ಲದೆ ಆಸಕ್ತರೆಲ್ಲರು ಇಂತಹ ವೃತ್ತಿಯನ್ನು ಕೈಗೊಳ್ಳು ಸಾಧ್ಯ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವರ್ತವಾಗಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ