ಭಾನುವಾರ, ಜೂನ್ 10, 2012

ಬದಲಾವಣೆಗೆ ಯಕ್ಷಗಾನವೂ ಹೊರತಾಗಿಲ್ಲ


ಇದು ಬದಲಾವಣೆಯ ಕಾಲ. ಎಲ್ಲಾ ಕ್ಷೇತ್ರದಲ್ಲೂ ವಿವಿಧ ರೀತಿಯ ಬದಲಾವಣೆಗಳು ಸಾಕಷ್ಟು ನಡೆದಿವೆ. ಇದಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯೂ ಹೊರತಾಗಿಲ್ಲ. ದೇಶದ ರಾಜಕೀಯದಲ್ಲಿ ರಾಜರ ಆಡಳಿತದ ಬದಲು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ಥಿತ್ವಕ್ಕೆ ಬಂತು. ಅದರಲ್ಲೂ ಸಮ್ಮಿಶ್ರ ಸರಕಾರಗಳು ಅಕಾರ ನಡೆಸುವಂತಹ ವ್ಯವಸ್ಥೆ ಇಂದು ಬಂದಿರುವಂತೆ, ಜಾಗತಿಕ ಕ್ರಿಕೆಟ್ನಲ್ಲಿ ಟೆಸ್ಟ್ ಪಂದ್ಯಗಳ ಅನಂತರ 50-50 ಓವರ್ಗಳ ಪಂದ್ಯ ಇದೀಗ 20-20 ಓವರ್ಗಳ ಪಂದ್ಯಗಳೂ ಜನರನ್ನು ಆಕರ್ಷಿಸಿವೆ. ಇಂತಹ ಬದಲಾವಣೆಗಳು ಯಕ್ಷಗಾನ ಕ್ಷೇತ್ರದಲ್ಲೂ ಸಾಕಷ್ಟು ನಡೆದಿದೆ.
ಯಕ್ಷಗಾನ ಅಂದು -ಇಂದುfacebook.com
ಅದೊಂದು ಕಾಲವಿತ್ತು ‘ದೊಂದಿ’ಯನ್ನು ರಂಗಸ್ಥಳಗಳ ಮೂಲೆಗೆಳಿಗೆ ಕಟ್ಟಿ ರಾತ್ರಿಯಿಡೀ ಯಕ್ಷಗಾನ ಬಯಲಾಟವಾಡುತ್ತಿದ್ದದ್ದು, ಅಂದು ಹಳ್ಳಿಗರು ಯಕ್ಷಗಾನ ನೋಡಲು ಕಿಕ್ಕಿರಿದು ಸೇರಿ ಆನಂದಿಸುತ್ತಿದ್ದರು. ಹೆಂಗಸರು, ಮಕ್ಕಳೆನ್ನದೆ ಯುವಕರು, ಮುದುಕರು ಹೀಗೆ ಎಲ್ಲ ವಯಸ್ಸಿನವರು ಭಾಗವಹಿಸುತ್ತಿದ್ದರು. ಪಂಜಿನ ಬೆಳಕಿಗೆ ರಾಜ ವೇಷ, ರಕ್ಕಸ ವೇಷಗಳು ರಂಗಸ್ಥಳದಲ್ಲಿ ವಿಜೃಂಭಿಸುತ್ತಿದ್ದವು. ಧ್ವನಿ ವರ್ಧಕವಿಲ್ಲದೆ ಸೇರಿದ ಸಾವಿರಾರು ಜನರಿಗೂ ಕೇಳುವಂತೆ ಕಲಾವಿದರು ಸಂಭಾಷಣೆ ನಡೆಸುತ್ತಿದ್ದರು. ಹಿಂದೆ ಪೌರಾಣಿಕ ಕಥೆಗಳನ್ನು ಆಧರಿಸಿದ ಯಕ್ಷಗಾನ ಪ್ರಸಂಗಗಳನ್ನು ಮಾತ್ರವಷ್ಟೇ ಆಡುತ್ತಿದ್ದರು. ಇತ್ತೀಚೆಗೆ ಅದು ಬದಲಾಗಿದೆ. ಈಗ ಯಕ್ಷಗಾನದಲ್ಲೂ ಹಲವಾರು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಯಕ್ಷಗಾನ ಪ್ರಸಂಗಗಳನ್ನು ಇಂದು ಸಾಮಾಜಿಕ, ಸಿನೆಮಾ ಕಥೆಗಳನ್ನು ಆಧರಿಸಿ ರಚಿಸಿ ಪ್ರದರ್ಶಿಸಲಾಗತ್ತಿದೆ. ಮೊದಲು ಕನ್ನಡ ಭಾಷೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಕ್ಷಗಾನ ಪ್ರದರ್ಶಿಸಲಾಗುತ್ತಿತ್ತು. ಕಾಲಸರಿದಂತೆ ತುಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ, ಭಾರತದ ವಿವಿಧ ರಾಜ್ಯಗಲ್ಲಿ ಹಾಗೂ ವಿದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳು ನಡೆಯತೊಡಗಿದವು.
ಯಕ್ಷಗಾನದಲ್ಲಿನ ಬದಲಾವಣೆಯೆಂದರೆ ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಪ್ರದರ್ಶನಗಳು ಕಡಿಮೆ ಯಾಗಿ ಇಂದು ಅನುಕೂಲಕ್ಕೆ ತಕ್ಕಂತೆ ಕಥಾ ಪ್ರಸಂಗ ಗಳನ್ನು ರಚಿಸಿಕೊಂಡು 1, 2 ಅಥವಾ 3ಗಂಟೆಯ ಯಕ್ಷಗಾನ ಪ್ರದರ್ಶನಗಳಾಗಲಾರಂಭಿಸಿದವು. ಹಿಂದೆ ಮಳೆಗಾಲ ಮುಗಿದಂತೆ ಎಲ್ಲಾ ಮೇಳಗಳು ತಿರುಗಾಟ ಪ್ರಾರಂಭಿಸಿ, ಊರು ಊರುಗಳಲ್ಲಿ ಯಕ್ಷಗಾನ ಪ್ರದರ್ಶಿಸುವುದು ಸಂಪ್ರದಾಯವಾಗಿತ್ತು. ಆದರೆ ಇಂದು ವರ್ಷವಿಡೀ ಯಕ್ಷಗಾನ ಪ್ರದರ್ಶನಗಳು ವಿವಿಧೆಡೆಗಲ್ಲಿ ನಡೆಯುತ್ತಿವೆ. ಮಳೆಗಾಲದಲ್ಲೂ ವಿಶೇಷವಾಗಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಹಲವು ವರ್ಷಗಳ ಮೊದಲು ಕೇವಲ ಬಯಲು ರಂಗ ಮಂದಿರ ಳಲ್ಲಿ ಮಾತ್ರ ಯಕ್ಷಗಾನ ಪ್ರದರ್ಶಿನಗಳು ನಡೆಯುತ್ತಿದ್ದವು. ಆಧುನಿಕತೆ ಆವರಿಸಿದಂತೆ ಸಭಾ ಭವನ, ಕಲ್ಯಾಣ ಮಂಟಪಗಳಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆಯತೊಡಗಿದವು. ಪಂಜಿನ ಬೆಳಕಿನ ಬದಲು ವಿದ್ಯುತ್ ದೀಪಾಲಂಕೃತವಾದ ವೇದಿಕೆಯಲ್ಲಿ ಧ್ವನಿ ವರ್ಧಕಗಳ ಸಹಕಾರದಲ್ಲಿ ಇಂದು ಯಕ್ಷಗಾನ ಪ್ರದರ್ಶಿಸಲ್ಪಡುತ್ತಿದೆ.
ಸರಕಾರದ ಪ್ರೋತ್ಸಾಹ ಅಗತ್ಯ
   ಯಕ್ಷಗಾನದಂತಹ ಪುರಾತನ ಕಲೆಯ ಉಳಿವಿಗೆ ಸರಕಾರದ ಪ್ರೋತ್ಸಾಹ ಅತ್ಯಗತ್ಯ. ಇಂದಿನ ಯುವ ಜನಾಂಗ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಶಾಲಾ-ಕಾಲೇಜು ಮಟ್ಟದಲ್ಲಿಯೇ ಯಕ್ಷಗಾನವನ್ನು ಒಂದು ಪಠ್ಯ ವಿಷಯವಾಗಿ ಮಕ್ಕಳು ಅಭ್ಯಸಿಸಲು ಅವಕಾಶ ಕಲ್ಪಿಸಬೇಕು. ಈ ಕಾರ್ಯ ಕಾಸರಗೋಡು ಜಿಲ್ಲೆಯಲ್ಲೂ ಜಾರಿಗೆ ಬರುವಂತೆ ಕೇರಳ ಸರಕಾರವನ್ನು ಒತ್ತಾಯಿಸಬೇಕು. ಉಡುಪಿಯ ಶಾಸಕ ರಘುಪತಿ ಭಟ್ ಅವರು ಈಗಾಗಲೇ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಯಕ್ಷಗಾನ ತರಬೇತಿಗಳನ್ನು ನಡೆಸಲು ಸೂಚಿಸಿ, ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಕಾರ್ಯ ಅವಿಭಜಿತ ದ.ಕ.ಜಿಲ್ಲೆಯ ಎಲ್ಲೆಡೆಯಲ್ಲಿ ನಡೆಯಬೇಕಿದೆ.
 ಏನೇ ಆಗಲಿ ಪ್ರಸಿದ್ಧ ಕಲೆಗಳಲ್ಲಿ ಯಕ್ಷಗಾನ ಒಂದು. ಇನ್ನಾದರೂ ಯಕ್ಷಗಾನ ಕಲೆ ನಾಡಿನಾದ್ಯಂತ ಪಸರಿಸಲಿ. ಯಕ್ಷಗಾನ ನಿಂತ ನೀರಾಗುವುದು ಬೇಡ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಯಕ್ಷಗಾನದಲ್ಲೂ ಒಪ್ಪಿಕೊಳ್ಳೋಣ. ಆದರೆ ಬದ ಲಾವಣೆಯಿಂದ ಯಕ್ಷಗಾನದ ಸಂಪ್ರದಾಯ ನಶಿಸಬಾರದು. ಬದಲಾವಣೆ ಕಲೆಯ ಅಭಿವೃದ್ಧಿಗೆ ಸಹಾಯಕವಾಗಲಿ.
ಅಭಿರುಚಿ ಕುಂದಲು ಕಾರಣ
ಜನರ ಕೆಲಸದೊತ್ತಡ, ಹಿಂದಿನ ಬಯಲಾಟದಷ್ಟು ಮನಮೋಹಕವಾಗಿ ಇಂದು ಯಕ್ಷಗಾನ ಪ್ರದರ್ಶಿಸಲ್ಪಡದಿರುವುದು ಯಕ್ಷಗಾನದಲ್ಲಿನ ಜನರ ಅಭಿರುಚಿ ಕುಂದಲು ಕಾರಣವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಚಲನಚಿತ್ರಗಳು ಜನರನ್ನು ಮೋಡಿಮಾಡಿರುವುದರಿಂದ ಯಕ್ಷಗಾನದ ಮೇಲಿನ ಜನರ ಆಸಕ್ತಿ ಕುಂಠಿತವಾಗಿದೆ. ಕ್ರಿಕೆಟ್ನಂತಹ ಕ್ರೀಡೆಗಳು ಜನರನ್ನು ಆಕರ್ಷಿಸುತ್ತಿರುವುದು ಕೂಡ ಯಕ್ಷಗಾನದ ವೀಕ್ಷಕರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ