‘‘ವಿದ್ಯಾ ವಿಹೇನ ಪಶು’’ ಎಂಬ ಆರ್ಯೋಕ್ತಿಯಿದೆ. ಅಂದರೆ ವಿದ್ಯೆ ಇಲ್ಲದವನು ಪಶುವಿಗೆ ಸಮಾನ ಎಂದರ್ಥ. ಮನುಷ್ಯನಲ್ಲಿ ಮಾನವೀಯವನ್ನು ತುಂಬುವ ಕ್ರಿಯೆ ಶಿಕ್ಷಣದಿಂದ ನಡೆಯುತ್ತದೆ. ‘ಮಾನವನನ್ನು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಅಮೃತತ್ವದೆಡೆಗೆ ಸಾಗಿಸುವುದೆ ಶಿಕ್ಷಣ ಎಂದು ಉಪನಿಷತ್ನಲ್ಲಿ ಹೇಳಲಾಗಿದೆ. ಶಿಕ್ಷಣವೆಂದರೆ ತರಬೇತಿ ಎಂಬ ಪರಿಕಲ್ಪನೆ ಜನರಲ್ಲಿದೆ. ಆದರೆ ತರಬೇತಿಯೇ ಶಿಕ್ಷಣವಲ್ಲ. ತರಬೇತಿಯು ನಾವು ಪಡೆಯುವ ಶಿಕ್ಷಣದಲ್ಲಿ ಒಂದು ಸಣ್ಣ ಅಂಶವಷ್ಟೆ . ಮನುಷ್ಯರಲ್ಲಿ ಮಾತ್ರ ಶಿಕ್ಷಣವೆಂಬ ವ್ಯವಸ್ಥೆ ಕಂಡುಬರುತ್ತದೆ.facebook
ಇದು ಮಾನವ ಇತರ ಪ್ರಾಣಿಗಳಿಗಿಂತ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ನಮಗೆ ಸಿಗುವ ಶಿಕ್ಷಣ ವಿಶಾಲವಾದ ಅರ್ಥವನ್ನು ಹೊಂದಿದೆ. ಸೊಕ್ರೆಟಿಸ್ ದೋಷವನ್ನು ನಿವಾರಿಸಿ ಸತ್ಯದ ಅನ್ವೇಷಣೆ ಮಾಡುವುದೆ ಶಿಕ್ಷಣ’’ ಎಂದಿದ್ದಾರೆ. ಶಿಕ್ಷಣದ ವಸ್ತು, ಮಾರ್ಗ ಮತ್ತು ಮಾಧ್ಯಮಗಳು ಕಾಲ, ದೇಶ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿವೆ. ಆದ್ದರಿಂದ ಶಿಕ್ಷಣದ ವ್ಯಾಪ್ತಿಯನ್ನು ಕೆಲವೇ ಮಾತುಗಳಲ್ಲಿ ಹೇಳುವುದು ಕಷ್ಟ ಸಾಧ್ಯ. ಮಾನವನ ಇತಿಹಾಸದಲ್ಲೂ ಶಿಕ್ಷಣ ವಹಿಸಿದ ಪಾತ್ರ ಅತ್ಯಮೂಲ್ಯವಾದದ್ದು, ಒಂದರ್ಥದಲ್ಲಿ ಮಾನವನ ಚರಿತ್ರೆ ಎಂದರೆ ಅವನು ಅನಾದಿ ಕಾಲದಿಂದ ಇಂದಿನ ವರೆಗೆ ಪಡೆದ ಶಿಕ್ಷಣದ ಇತಿಹಾಸವೇ ಆಗಿದೆ. ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಶಿಕ್ಷಣವು ಒಂದು. ಶಿಕ್ಷಣವು ಜನರಲ್ಲಿನ ಪಶುತ್ವವನ್ನು ಹೋಗಲಾಡಿಸಿ ಮಾನವೀಯತೆಯನ್ನು ಬೆಳೆಸುತ್ತದೆ. ರಾಜ್ಯಶಾಸದ ಪಿತಾಮಹ ಅರಿಸ್ಟಾಟಲ್ ‘‘ಶಿಕ್ಷಣ ಆರೋಗ್ಯಕರ ಶರೀರದಲ್ಲಿ ಆರೋಗ್ಯಕರ ಮನಸ್ಸನ್ನು ಸೃಷ್ಟಿಸುತ್ತದೆ’’ ಎಂದಿದ್ದಾರೆ. ವಿದ್ಯೆ ಅಭ್ಯಸಿಸುವವನು ಅಥವಾ ವಿದ್ಯಾರ್ಜನೆ ಉದ್ದೇಶ ಹೊಂದಿರುವವನು ವಿದ್ಯಾರ್ಥಿ ಎಂದೆನಿಸುತ್ತಾನೆ. ಶಿಕ್ಷಣ ಅಥವಾ ವಿದ್ಯಾರ್ಜನೆಯು ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ. ಆದುದರಿಂದ ವಿದ್ಯಾರ್ಥಿಗೆ ವಯೋಮಾನದ ಮಿತಿಯಿಲ್ಲ ಕಲಿಯುವ ಮನಸ್ಸಿರುವ ಎಲ್ಲರೂ ಅಂದರೆ ಹಣ್ಣು ಗಡ್ಡದ ಮೈದಕನೇ ಇರಲಿ,ಕಾಲೇಜಿನ ಹಿರಿಯ ಪ್ರಾಧ್ಯಾಪಕನೇ ಇರಲಿ ಅವರೆಲ್ಲರೂ ನಿಜವಾಗಿ ವಿದ್ಯಾರ್ಥಿಗಳೆ. ವಿದ್ಯಾರ್ಜನೆಯು ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ವಿದ್ಯೆ ಎಂಬುದು ಕೇವಲ ಹೊಟ್ಟೆಪಾಡಿಗೆ ದಾರಿ ಮಾಡುವ ವಿದ್ಯೆಯಾಗಿರದೆ, ಅದು ಮಾನವನನ್ನು ಮಾಧವನನ್ನಾಗಿಸುವ ವಿದ್ಯೆಯಾಗಿರಸಬೇಕು. ಅಂದರೆ ವ್ಯಕ್ತಿತ್ವದ ಸರ್ವಾಂಗೀಣ ಅಭಿವೃದ್ಧಿ ಕಾರಣವಾಗಿ ಯೋಗ್ಯ ವ್ಯಕ್ತಿಗಳಾಗಲು ಪೂರಕವಾಗಿರಬೇಕು.
ವ್ಯಕ್ತಿಯ ಪ್ರತಿಭೆ ಅರಳಲು, ಕೌಶಲ್ಯ ವೃದ್ಧಿಸಲು, ಆತ್ಮವಿಶ್ವಾಸ ಕುದುರಲು ಶಿಕ್ಷಣದಿಂದ ಸಾಧ್ಯವಾಗುತ್ತದೆ. ಶಿಕ್ಷಣದಿಂದ ಜನರಲ್ಲಿ ಮಹತ್ತರವಾದುದನ್ನು ಸಾಸಬೇಕೆಂಬ ಕೆಚ್ಚು ಉಕ್ಕುತ್ತದೆ. ತನ್ನ ಕಾಲ ಮೇಲೆ ತಾನು ನಿಂತು (ಸ್ವಾವಲಂಬಿಯಾಗಿ) ಬಾಳಬೇಕೆಂಬ ತುಡಿತ ಮಿಡಿಯುತ್ತದೆ. ಹೀಗೆ ವ್ಯಕ್ತಿಯು ಸರ್ವಾಂಗೀಣ ಪ್ರಗತಿ ಸಾಸಿ, ನೈತಿಕ ವಿಕಾಸಕ್ಕೆಡೆಮಾಡಿ ಆತ ನಲಿವು, ಗೆಲುವುಗಳಿಂದ ಚೆನ್ನಾಗಿ ಬದುಕಲು ಶಿಕ್ಷಣ ಪೂರಕವಾಗಿದೆ. ಶಿಲ್ಪಿಯೊಬ್ಬ ಶಿಲ್ಪ ತಯಾರಿಸಲು ಕಲ್ಲಿನ ಬೇಡವಾದ ಭಾಗವನ್ನು ಕೆತ್ತಿ ತೆಗೆಯುವಂತೆ ಜನರ ಮನಸ್ಸಿಗೆ ಕವಿದಿರುವ ಅಜ್ಞಾನ, ಅಹಂಕಾರ, ದುಶ್ಚಟ, ಕೆಟ್ಟ ಹವ್ಯಾಸಗಳ ಕವಚವನ್ನು ಶಿಕ್ಷಣ ಕಿತ್ತೊಗೆದು ಪ್ರತಿಭಾವಂತರನ್ನಾಗಿಸುತ್ತದೆ. ಸಾಮಾಜಿಕವಾಗಿ ಗೌರವ ಪಡೆಯಲು ಮತ್ತು ಜೀವನದ ಉತ್ಕೃಷ್ಟ ಮಟ್ಟವನ್ನು ಏರಲು ಶಿಕ್ಷಣ ಸಹಕಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಪರಿಪೂರ್ಣವಾಗಿ ರೂಪಿಸುವುದೇ ಶಿಕ್ಷಣ. ಶಿಕ್ಷಣದಿಂದ ಉಂಟಾಗುವ ಜ್ಞಾನಾರ್ಜನೆಯು ಪ್ರತಿಯೊಬ್ಬ ಮಾನವನ ಆಸ್ತಿ. ಈ ಆಸ್ತಿಯನ್ನು ಜೀವನದುದ್ದಕ್ಕೂ ಹೊತ್ತೊಯ್ಯಬಹುದು. ಈ ಅಮೂಲ್ಯ ಸಂಪತ್ತಿಗೆ ಕಳ್ಳಕಾಕರ ಭಯವಿಲ್ಲ, ಹಂಚಿದರೂ ಮುಗಿಯುವುದಿಲ್ಲ, ಬದಲಾಗಿ ಹೆಚ್ಚಾಗತ್ತದೆ. ಇದಕ್ಕೆ ತೆರಿಗೆ ಕಟ್ಟಬೇಕಾಗಿಯೂ ಇಲ್ಲ. ಇಂತಹ ವಿದ್ಯೆಯೆಂಬ ಧನ ಸಂಪಾದನೆ ಮಾನವನ ಬದುಕಿಗೆ ತೀರಾ ಅಗತ್ಯ. ಅಂತಹ ವಿದ್ಯಾವಂತನು ಇದ್ದಲ್ಲಿಯೂ ಸಲ್ಲುವನು,ಹೋಗಿದ್ದಲ್ಲಿಯೂ ಸಲ್ಲುವನು, ಗಿರಿಯ ಮೇಲಿದ್ದರೂ ಸಲ್ಲುವನು ಎಂದು ಸರ್ವಜ್ಞ ಕವಿ ಸಾರಿದ್ದಾನೆ. ಶಿಕ್ಷಣ ಪೂರ್ಣವಾಗಬೇಕಾದರೆ, ನೈಜವಾಗಬೇಕಾದರೆ, ಶಿಕ್ಷಕರ, ಪೊಷಕರ, ಮಕ್ಕಳ ಸಹಕಾರ ಅಗತ್ಯ. ಈ ಮೂವರು ಒಂದು ತ್ರಿಭುಜ ತ್ರಿಕೋನದಂತೆ ಸೇರಬೇಕು. ಇದು ವ್ಯಕ್ತಿಯ ಸ್ವಭಾವ, ನಡತೆ, ಜ್ಞಾನ - ಅನುಭವಗಳ ಒಂದು ಮಿಶ್ರಣ. ಈ ಎಲ್ಲ ಗುಣಗಳು ಶಿಕ್ಷಣದಿಂದ ವೃದ್ಧಿಯಾಗುತ್ತದೆ. ಶಿಕ್ಷಣಕ್ಕೆ ಕೊನೆಯಿಲ್ಲ. ಶಿಕ್ಷಣವನ್ನು ಕೇವಲ ಶಾಲೆ - ಕಾಲೇಜುಗಳಿಂದ ಮಾತ್ರ ಪಡೆಯುವುದಿಲ್ಲ. ಸುತ್ತಮುತ್ತಲಿನ ಪರಿಸರ, ಬಂಧುಗಳು, ಇತರರು, ಪ್ರಾಣಿ -ಪಕ್ಷಿಗಳಿಂದಲೂ ನಾವು ಶಿಕ್ಷಣವನ್ನು ಪಡೆಯುತ್ತೇವೆ. ಶಿಕ್ಷಣ ಪ್ರಾರಂಭವಾಗುವುದು ಮನೆಯಿಂದ. ತಂದೆ -ತಾಯಿ ಮಕ್ಕಳ ನಡವಳಿಕೆಗಳನ್ನು ತಿದ್ದುತ್ತ, ಬುದ್ಧಿ ಮಾತುಗಳನ್ನು ಹೇಳುತ್ತಾ ಅವರಿಗೆ ಅರಿವಾಗದಂತೆ ಬೋಸುತ್ತಾರೆ. ಇದಕ್ಕಾಗಿಯೇ ‘ಮನೆಯನ್ನು ಮೊದಲ ಪಾಠ ಶಾಲೆ’ ಎನ್ನಲಾಗಿದೆ.
ವಿದ್ಯೆಯ ಮಹತ್ವದ ಬಗ್ಗೆ ಸರ್ವಜ್ಞ ಕವಿ ಈ ರೀತಿಯಾಗಿ ಹೇಳಿದ್ದಾನೆ ‘‘ವಿದ್ಯೆ ಯುಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ’’. ಇದರ ಅರ್ಥ: ಮನುಷ್ಯನಿಗೆ ವಿದ್ಯೆಯೇ ನಿಜವಾದ ಭೂಷಣ. ವಿದ್ಯಾವಂತನ ಮುಖವು ತೇಜಸ್ಸಿನಿಂದ ಕೂಡಿರುತ್ತದೆ. ವಿದ್ಯೆಯನ್ನೇ ಕಲಿಯದವನ ಮುಖವು ಹಾಳು ಬಿದ್ದ ಊರಿನ ಮುದಿ ಹದ್ದಿನಂತೆ. ಇದರಿಂದಲೇ ಉಪವಾಸವಿದ್ದಾದರೂ ಸರಿ, ವಿದ್ಯೆ ಕಲಿಯಬೇಕು. ಮಾನವನ ವ್ಯಕ್ತಿತ್ವದ ವಿಕಸನಕ್ಕೆ ವಿದ್ಯೆಯೇ ಮೂಲಸಾಧನ.
‘‘ಒಂದು ರಾಷ್ಟ್ರವನ್ನು ನಾಶಪಡಿಸಬೇಕಾದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆ ಸಾಕು’’ ಎಂಬ ಮಾತಿದೆ. ಅಂದರೆ ದೇಶದ ಪ್ರಗತಿಗೆ ಕಾರಣ ಅಲ್ಲಿನ ಶಿಕ್ಷಣ ವ್ಯವಸ್ಥೆ. ಈ ವ್ಯವಸ್ಥೆಯೇ ಹಾಳಾದರೆ ದೇಶ ನಾಶಹೊಂದುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಶಿಕ್ಷಣ ವ್ಯವಸ್ಥೆ ಹಾಳಾಗದಂತೆ ಕಾಯ್ದಿಕೊಳ್ಳುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಮಾನವ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರಲು ಕಾರಣವಾದ ಮನುಷ್ಯ ಧರ್ಮ, ವಿವೇಕವನ್ನು ವಿದ್ಯೆ ಅವನಲ್ಲಿ ತುಂಬುತ್ತದೆ. ವಿದ್ಯೆ ಮನುಷ್ಯನಿಗೆ ಜ್ಞಾನದ ಬೆಳಕು ನೀಡುತ್ತದೆ. ಸಂಸ್ಕಾರ ಕಲಿಸುತ್ತದೆ. ಇದರಿಂದ ಅಸಾಧಾರಣ ವ್ಯಕ್ತಿಯೊಬ್ಬನ ನಿರ್ಮಾಣವಾಗುತ್ತದೆ. ಅಂತಹ ವ್ಯಕ್ತಿ ಭವ್ಯ ರಾಷ್ಟ್ರದ ನಿರ್ಮಾಣಕ್ಕೆ ಅಡಿಗಲ್ಲಾಗುತ್ತಾನೆ. ಕೇವಲ ಪದವಿಗಳನ್ನು ಪಡೆದ ಮಾತ್ರಕ್ಕೆ ವಿದ್ಯಾವಂತನಾಗುವುದಿಲ್ಲ. ಕಲಿತ ಮಾನವಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪಡೆದ ವಿದ್ಯೆ ಸಾರ್ಥಕವಾಗುತ್ತದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಭೌದ್ಧಿಕ ಮತ್ತು ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೇ ಹೊರತು, ನೈತಿಕ ವಿಕಾಸದಕಡೆಗೆ ಗಮನ ಹರಿಸಿಲ್ಲ. ತತ್ಪರಿಣಾಮವಾಗಿ ಇಂದು ‘‘ಬುದ್ಧಿವಂತ ರಕ್ಕಸ ಜನಾಂಗ’’ ಸೃಷ್ಟಿಯಾಗುತ್ತಿದೆ. ನೀತಿ, ನಿಯಮ, ಶಿಸ್ತು, ಮೌಲ್ಯಗಳಿಗೆಲ್ಲ ತಿಲಾಂಜಲಿಯಿತ್ತು ಸ್ವಾರ್ಥಕ್ಕಾಗಿ ಯಾವುದೇ ಕಾರ್ಯಕ್ಕೂ ಹೇಸದ ಜನಾಂಗ ನಿರ್ಮಾಣವಾಗುತ್ತಿದೆ. ಇದಕ್ಕೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕ ಶಿಕ್ಷಣದ ಕೊರತೆಯೇ ಕಾರಣ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ ಧೃಡವಾಗಿದ್ದು ಸಮಸ್ಯೆ ಬಗ್ಗೆ ಚೆನ್ನಾಗಿ ಅರಿತು ಸಮಾದಾನಕರವಾಗಿ, ಶಾಂತಿಯುತವಾಗಿ ಅದನ್ನು ಪರಿಹರಿಸಬೇಕು. ಇದು ಮಾನವಧರ್ಮದ ಗುಣವಾಗಿದೆ. ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ಈಗಿನ ಶಿಕ್ಷಣದಲ್ಲಿ ಬಾಹ್ಯ ಪರಿಸರ ಮಾಲಿನ್ಯ ನಿವಾರಣೆ ಬಗ್ಗೆ ಸಾಕಷ್ಟು ಹೇಳಲಾಗುತ್ತದೆ. ಅದರ ಜೊತೆಗೆ ಜನರ ಆಂತರಿಕ ಮಾಲಿನ್ಯವನ್ನು ದೂರ ಮಾಡಬಲ್ಲಂತಹ ಶಿಕ್ಷಣ ನಮಗಿಂದು ಅವಶ್ಯವಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ