‘‘ಅಪಿ ಸ್ವರ್ಣ ಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’’
ಈ ಮಾತನ್ನು ರಾಮಾಯಣದಲ್ಲಿ ಹೇಳಲಾಗಿದೆ. ರಾವಣನನ್ನು ಶ್ರೀರಾಮನು ಸೋಲಿಸಿದ ಅನಂತರ ಲಕ್ಷ್ಮಣನು ಅಣ್ಣನಾದ ಶ್ರೀರಾಮನಲ್ಲಿ ನಾವು ಈ ಲಂಕೆಯಲ್ಲಿಯೇ ಉಳಿಯೋಣ. ಅಯೋಧ್ಯೆಯನ್ನು ನೋಡಿಕೋಳ್ಳಲು ಭರತನಿದ್ದಾನೆ. ನಾವು ಗೆದ್ದ ಈ ರಾಜ್ಚ ಈಗ ಅರಾಜಕವಾಗಿದೆ. ಆದ್ದರಿಂದ ನೀನು ಇಲ್ಲಿಯ ಅರಸನಾಗು ಎಂದು ಕೇಳಿಕೊಂಡಾಗ ಶ್ರೀರಾಮನು ಲಕ್ಷ್ಮಣನಿಗೆ ‘‘ಈ ಲಂಕೆಯು ಸಂಪತದ್ಭರಿತವಾಗಿದ್ದರೂ ಸ್ವರ್ಣಮಯೀಯಾದರೂ ನನ್ನ ಪಾಲಿಗೆ ಶ್ರೇಷ್ಠವೆನಿಸದು. ಯಾಕೆಂದರೆ ಅಯೋಧ್ಯೆಯಲ್ಲಿ ನನ್ನ ಜನನಿ ಇದ್ದಾಳೆ. ಮಾತ್ರವಲ್ಲ ಅದು ನನ್ನ ಜನ್ಮ ಭೂಮಿ ಇವೆರಡು ಸ್ವರ್ಗಕ್ಕಿಂತಲೂ ಮಿಗಿಲಾಗಿದೆ. ಇಲ್ಲಿ ತಾಯಿ ಮತ್ತು ತಾಯಿ ನೆಲದ ಬಗೆಗಿನ ಶ್ರೀರಾಮನ ಅಭಿಮಾನ, ಗೌರವನ್ನು ಕಾಣಬಹುದು.
ನಮ್ಮ ದೇಶದ ಸಂಸ್ಕೃತಿಯಲ್ಲಿ ತಾಯಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂಬ ಮಾತಿದೆ. ತಾಯ್ತನಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಮಾನ್ಯತೆ ಇದೆ. ಹೊತ್ತು-ಹೆತ್ತು, ಸಾಕಿ-ಸಲಹಿದ ತಾಯಿ ವಾತ್ಸಲ್ಯಮಯಿ. ತಾಯಿಯ ತ್ಯಾಗ, ಔದಾರ್ಯ, ಪ್ರೀತಿ ಅಮೋಘ. ಅಂತೆಯೇ ನಮಗೆ ಆಸರೆ ನೀಡುವ ನಾಡು ಕೂಡಾ ತಾಯಿಗೆ ಸಮಾನ. ಆಶ್ರಯ ನೆಲೆಯಾದ ನಾಡು ಜೀವನ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕೇಂದ್ರ ಬಿಂದು. ಹೆತ್ತ ತಾಯಿ ಮಡಿಲಿನಲ್ಲಿ ಬೆಳೆಯುವ ಜೀವನ ಸ್ವರ್ಗಕ್ಕೆ ಮಿಗಿಲು. ತಾಯಿ ಸ್ಥಾನ ವಿಶ್ವದಲೇ ಹಿರಿದು. ಆದುದರಿಂದಲೇ ಒಬ್ಬಳು ಆದರ್ಶ ತಾಯಿಯು ನೂರು ಜನ ಗುರುಗಳಿಂತ ಶ್ರೇಷ್ಠಳು ಎಂದು ಬೈಬಲ್ನಲ್ಲಿ ಹೇಳಲಾಗಿದೆ.
ಯಾವ ನೆಲದ ಗಂಧಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷ ಧಾರೆ ಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮ ಭೂಮಿ, ಅದೇ ಎನ್ನ ಪುಣ್ಯ ಭೂಮಿ ॥
ಇದು ಕವಿಯ ಜನ್ಮ ಭೂಮಿಯ ಬಗೆಗಿನ ಅಭಿಮಾನ, ಪ್ರೀತಿ, ಗೌರವದ ಸಂಕೇತವಾಗಿದೆ. ಜನ್ಮ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂಬ ಭಾವನೆಯೇ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಿಗೆ ಸೂರ್ತಿ ದಾಯಕವಾದುದಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮರಣ ದಂಡನೆಗೆ ಗುರಿಯಾದ ಭಾರತದ ಕ್ರಾಂತಿಕಾರಿ ತರುಣ ಭಗತ್ ಸಿಂಗ್ ತನ್ನ ಜೀವನದ ಕೊನೆಯ ಕ್ಷಣದಲ್ಲಿ ‘‘ಆಶ್ರಯ ನೀಡಿದ ಈ ಭೂಮಿಗಾಗಿ ಜೀವ ತೊರೆಯಲು ಸಂತೋಷವಾಗುತ್ತಿದೆ. ಇದನ್ನು ನೋಡಲು ನೀವು ಪುಣ್ಯವಂತರು’’ ಎಂದು ಬ್ರಿಟಿಷ್ ಅಕಾರಿಗಳಿಗೆ ಹೇಳಿದ ಮಾತು ಜನ್ಮ ಭೂಮಿ ಪರಕೀಯರ ಬಂಧನದಲ್ಲಿರುವಾಗ ನಾವು ಅದರ ವಿರುದ್ಧ ಹೋರಾಡಿ ಸಾಯುವುದೇ ಮೇಲು ಎಂಬುದನ್ನು ಸೂಚಿಸುತ್ತದೆ.
ಅಭಿಮಾನ ಶೂನ್ಯ
ಇಂದು ಜನರಲ್ಲಿ ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಶೂನ್ಯವಾಗಿ ತಾಯಿಯನ್ನು ಕಡೆಗಣಿಸುವ, ಗೌರವಿಸದಿರುವ ಮನೋಭಾವನೆ ಬೆಳೆಯುತ್ತಿದೆ. ಜನ್ಮ ಭೂಮಿ ಬಗ್ಗೆ ತ್ಸಾರ ಭಾವನೆ ಹೆಚ್ಚುತ್ತಿದೆ. ಇದರಿಂದ ಜನ ಇಂದು ವಿದೇಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೂ ಇದೆ. ಇಂದಿನ ಶಿಕ್ಷಣ ಪದ್ಧತಿ ಕೇವಲ ಬೌದ್ಧಿಕ, ಸ್ವಲ್ಪ ಮಟ್ಟಿಗೆ ದೈಹಿಕ ವಿಕಾಸಕ್ಕೆ ಒತ್ತುಕೊಟ್ಟಿದೆಯೆ ಹೊರತು, ನೈತಿಕ ವಿಕಾಸದ ಕಡೆ ಗಮನ ಹರಿಸಿಲ್ಲ. ಯಾವುದೇ ರೀತಿಯ ಸಮಸ್ಯೆಗಳು ಬಂದಾಗ ಧೃತಿಗೆಡದೆ, ದೃಢವಾಗಿದ್ದು, ಸಮಸ್ಯೆಯ ಬಗ್ಗೆ ಚೆನ್ನಾಗಿ ಅರಿತು. ಸಮಾಧಾನಕರವಾಗಿ, ಶಾಂತಿಯುತವಾಗಿ ಪರಿಹರಿಸಬೇಕು. ಇದು ಮಾನವ ಧರ್ಮದ ಗುಣವಾಗಿದೆ. ಮಾನವ ಧರ್ಮ ಅಥವಾ ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವ ನೀತಿಯುಕ್ತ ಶಿಕ್ಷಣದ ಅಗತ್ಯವಿದೆ. ನೈತಿಕ ಶಿಕ್ಷಣದ ಕೊರತೆಯಿಂದಾಗಿ ಇಂದು ತಾಯಿ, ತಾಯಿ ನೆಲದ ಬಗ್ಗೆ ಅಭಿಮಾನ ಜನರಲ್ಲಿ ಕುಂದುತ್ತಿದೆ.
ಈ ಆಧುನಿಕ ಯುಗದಲ್ಲಿ ‘‘ಉದರ ನಿಮಿತ್ತಂ ಬಹುಕೃತ ವೇಷಂ’’ ಎಂಬಂತೆ ಉದ್ಯೋಗದ ನಿಮಿತ್ತವಾಗಿ ಎಲ್ಲೇ ಇದ್ದರೂ ತಾಯಿ ಮತ್ತು ತಾಯಿ ನೆಲದ ಬಗೆಗಿನ ಅಭಿಮಾನ, ಪ್ರೀತಿ, ಗೌರವವನ್ನು ಬಿಟ್ಟು ಬಿಡಬಾರದು. ಯಾಕೆಂದರೆ ನಮ್ಮ ಜನ್ಮಕ್ಕೆ ಕಾರಣರಾದ ತಾಯಿ ಮತ್ತು ಜನ್ಮ ಭೂಮಿಯು ಇಲ್ಲದಿದ್ದರೆ ನಾವು ಹುಟ್ಟುತ್ತಲೇ ಇರಲಿಲ್ಲ. ತಾಯಿಯ ಎದೆಯ ಹಾಲನ್ನು ಕುಡಿದು, ತಾಯ್ನೆಡಿನ ನೀರು, ಗಾಳಿ, ಬೆಳಕು, ಮಣ್ಣಿನ ಸತ್ವ ಹೀರಿ ಬೆಳೆದ ವ್ಯಕ್ತಿಗೆ ನೆಲದ ಋಣ ತೀರಿಸುವ ಗುರುತರವಾದ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ. ಆ ಹೊಣೆಗಾರಿಕೆಯಿಂದ ಜಾರಿಕೊಳ್ಳುವುದು ಸಭ್ಯರ ಲಕ್ಷಣವಲ್ಲ. ಇದರ ಬದಲು ಜನ್ಮ ಭೂಮಿಯಲ್ಲೇ ನೆಲೆಸಿ ಜನ ಸೇವಾ ಕಾರ್ಯದಲ್ಲಿ ನಿರತರಾದರೆ ಈ ಮಣ್ಣಿನ ಋಣ ತೀರಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ