ಶುಕ್ರವಾರ, ಜೂನ್ 15, 2012

‘ಅಜ್ಜನ ಕೋಲಿದು ನನ್ನಯ ಕುದುರೆ..........’

facebook
ಅಜ್ಜನ ಕೋಲಿದು
ನನ್ನಯ ಕುದುರೆ ॥
ಹೆಜ್ಜೆಗೆ ಹೆಜ್ಜೆಗೆ
ಕುಣಿಯುವ ಕುದುರೆ ॥
ಹೌದು ಹಳ್ಳಿಗಳಲ್ಲಿ facebookಹಿಂದೆ ಅಜ್ಜನ ಊರುಗೋಲನ್ನು ಚಿಕ್ಕ ಮಕ್ಕಳು ಹಿಡಿದು ಹೀಗೆ ಹಾಡುತ್ತಾ ಕುಣಿಯುತ್ತಿದ್ದರು. ಇದು ಇಂದು ವಿರಳವಾಗಿದೆ. ದೇಹವನ್ನು ಸಂಬಾಳಿಸಿಕೊಂಡು ನಡೆದಾಡಲು ಕಷ್ಟ ಪಡುವ ವೃದ್ಧರು ಬಳಸುವ ಊರುಗೋಲು ಮಕ್ಕಳ ಆಟದ ಪರಿಕರವೂ ಆಗಿತ್ತು. ಆಧುನಿಕತೆಯ ಪ್ರಭಾವದಿಂದ ಇಂತಹ ಸರಳ ಆಟಿಕೆಗಳ ಬಾಳಕೆ ಇಲ್ಲವಾಗಿದೆ.
   ಹಿಂದಿನ ಕಾಲದಲ್ಲಿ ಅಜ್ಜ ಅಥವಾ ಅಜ್ಜಿ ಊರುಗೋಲನ್ನು ಕೈಯಿಂದ ಎಲ್ಲಿ ಇಡುತ್ತಾರೆ ಎಂದೇ ಮೊಮ್ಮಕ್ಕಳು ಹೊಂಚು ಹಾಕುತ್ತಿದ್ದರು. ಅವರು ಕೈಯಿಂದ ಬಿಟ್ಟ ತತ್ಕ್ಷಣವೆ ಮಕ್ಕಳ ಮಧ್ಯೆ ಊರುಗೋಲಿಗಾಗಿ ದೊಡ್ಡ ಸಂಗ್ರಾಮವೇ ಸಡೆಯುತ್ತಿತ್ತು. ಆಗ ಮಧ್ಯಸ್ತಿಕೆ ವಹಿಸಲು ಅಜ್ಜ ಅಥವಾ ಅಜ್ಜಿಯೇ ಬರಬೇಕಾಗುತ್ತಿತ್ತು.
ಊರುಗೋಲು ಬಳಕೆ
ಊರುಗೋಲನ್ನು ಹಲವಾರು ಕಾರಣಗಳಿಂದ ಬಳಸುತ್ತಿದ್ದರು. ಮುಖ್ಯವಾಗಿ ವೃದ್ಧರು, ಅಂಗವಿಕಲರು ನಡೆದಾಡಲು ಊರುಗೋಲಿನ ಸಹಾಯ ಪಡೆಯುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಊರಿನ ಪ್ರಮುಖರು ಊರುಗೋಲನ್ನ ಬಳಸುತ್ತಿದ್ದರು. ಉದಾಹರಣೆಗೆ: ಪಟೇಲರು, ಗುತ್ತಿನ ಮನೆಯ ಯಜಮಾನರು, ಧನವಂತರು, ಗುರಿಕಾರರು, ಜೋಯಿಸರು. ಊರುಗೋಲು ಬಳಸುವುದು ಒಂದು ಶ್ರೀಮಂತಿಕೆಯ ಸಂಕೇತವು ಆಗಿತ್ತು. ಕಲವರು ಶೋಕಿಗಾಗಿ (ಚಂದಕ್ಕಾಗಿ) ಬಲಸುತ್ತಿದ್ದರು. ಕಾವಲುಗಾರರು ರಕ್ಷಣೆಗಾಗಿ ಊರುಗೋಲನ್ನು ಉಪಯೋಗಿಸುತ್ತಿದ್ದರು.
ವೈವಿಧ್ಯ ಊರುಗೋಲುಗಳು
ಬಡವರು ಸಾಮನ್ಯ ಮರದ ಕೊಂಬೆ ಅಥವಾ ಬಿದಿರಿನ ಕೋಲುಗಳನ್ನು ಊರುಗೋಲಾಗಿ ಬಳಸುತ್ತಾರೆ. ಮಧ್ಯಮ ವರ್ಗದ ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಮರದ ಕೋಲು ಅಥವಾ ಬೆತ್ತಗಳನ್ನು ಊರುಗೋಲಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೆಚ್ಚು ವಿಶೇಷವೇನೂ ಇರುವುದಿಲ್ಲ. ಹಿಂದೆ ಅಂಗವಿಕಲರು ಸಹ ಸಾಮಾನ್ಯ ಮರದ ಊರುಗೋಲುಗಳನ್ನೇ ಬಳಸುತ್ತಿದ್ದರು. ಶ್ರೀಮಂತರು, ಶೋಕಿಗಾಗಿ ಊರುಗೋಲು ಹಿಡಿಯುವವರು ಮಾತ್ರ ಬೆಲೆ ಬಾಳುವ ಬೆತ್ತಗಳನ್ನು ತಂದು, ಬಹಳ ನಾಜೂಕಾಗಿ ಕೆಲವೊಂದು ಕೆತ್ತನೆಗಳನ್ನು ಮಾಡಿ, ಬೇರೆ ಬೇರೆ ಲೋಹಗಳಿಂದ ಬೆತ್ತದ ಎರಡೂ ತುದಿಗಳಿಗೆ ಕಟ್ಟಗಳನ್ನು ಹಾಕಿ ಬಳಸುತ್ತಿದ್ದರು. ಬೆತ್ತವನ್ನು ನೆಲಕ್ಕೆ ಉರುವ ಭಾಗಕ್ಕೆ ಸಾಮಾನ್ಯವಾಗಿ ತಾಮ್ರ, ಕಂಚು, ಕಬ್ಬಿಣ ಇತ್ಯಾದಿ ಲೋಹಗಳಿಂದ ಕಟ್ಟ ಹಾಕುತ್ತಿದ್ದರು. ಕೈಯಲ್ಲಿ ಹಿಡಿಯುವ ಭಾಗಕ್ಕೆ ಚಿನ್ನ, ಬೆಳ್ಳಿ, ತಾಮ್ರ, ಕಂಚು ಇತ್ಯಾದಿ ಲೋಹಗಳಿಂದ ಕೆಲವೊಂದು ಪ್ರಾಣಿಗಳ ಮುಖವನ್ನು ಹೋಲುವ ಆಕರ್ಷಕವಾದ ಕಟ್ಟವನ್ನು ಹಾಕಲಾಗುತ್ತಿತ್ತು. ನಾಯಿ, ಮೀನು, ಸಿಂಹ, ಹುಲಿ, ಬಸವ, ಕುದುರೆ ಇತ್ಯಾದಿಗಳ ಮುಖಗಳನ್ನು ಹೋಲುವ ಕಟ್ಟಗಳನ್ನು ಲೋಹಗಳಲ್ಲಿ ಬಹಳ ನಾಜೂಕಾಗಿ ಕೆತ್ತಿ ಬಳಸುತ್ತಿದ್ದರು. ಹಾವು, ಮನುಷ್ಯನ ತಲೆ ಬುರುಡೆಯ ಆಕಾರದ ಕಟ್ಟಗಳು ಭಯ ಹುಟ್ಟಿಸುವಂತಿವೆ. ಅಲ್ಲದೆ ಮರದಲ್ಲಿಯೂ ಪ್ರಾಣಿಗಳ ಮುಖಗಳನ್ನು ಕೆತ್ತಿ ಉಪಯೋಗಿಸುತ್ತಿದ್ದರು. ಹೀಗೆ ಬೆಲೆ ಬಾಳುವ ಊರುಗೋಲು ಬಳಸುವರು ಇದರಿಂದ ಸಮಾಜದಲ್ಲಿ ತಮ್ಮ ಘನತೆ, ಗೌರವ, ಸ್ಥಾನ -ಮಾನ ವೃದ್ಧಿಯಾಗುತ್ತದೆ ಎಂದು ನಂಬಿದ್ದರು. ಅಂಥವರು ನಾಗರ ಬೆತ್ತವನ್ನು ಹೆಚ್ಚಾಗಿ ಬಳಸುತ್ತಿದ್ದರು. ನಾಗರ ಬೆತ್ತದ ಬಗ್ಗೆ ಕತೆಗಾರ ಸೇಡಿಯಾಪು ಕೃಷ್ಣ ಭಟ್ಟರು ಮನೋಜ್ಞವಾದ ಕಥೆಯೊಂದನ್ನು ಬರೆದಿದ್ದಾರೆ.





ಆಧುನಿಕ ಊರುಗೋಲು
ಇಂದು ಕಾಲ ಬದಲಾಗಿದೆ. ಊರುಗೋಲು ಶ್ರೀಮಂತಿಕೆಯ ಸಂಕೇತ ಎಂಬ ಭಾವನೆ ಇಲ್ಲವಾಗಿದೆ. ವೃದ್ಧರು, ಅಂಗವಿಕಲರು ಇಂದು ಮರದ ಊರುಗೋಲುಗಳನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮಾತ್ರ ಅದನ್ನು ನೋಡಬುಹುದು. ಪಟ್ಟಣಗಳಲ್ಲಿ ಮರದ ಊರುಗೋಲುಗಳ ಸ್ಥಾನವನ್ನು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಊರುಗೋಲುಗಳು ಆಕ್ರಮಿಸಿಗೊಂಡಿವೆ. ಹಗುರವಾದ, ಕೈಯಲ್ಲಿ ಹಿಡಿಯಲು ಆರಾಮದಾಯಕವಾದ, ವಾಹನಗಳಲ್ಲಿ ಸಂಚರಿಸುವ ವೇಳೆ ಮಡಚಿ ಚೀಲದಲ್ಲಿ ಕೊಂಡ್ಯೊವಂತಹ ಊರುಗೋಲುಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಹೀಗೆ ಊರುಗೋಲು ಬಳಕೆ, ತಯಾರಿಗೆ ಬಳಸುವ ವಸ್ತು ಮತ್ತು ಜನರಲ್ಲಿನ ವ್ಯತ್ಯಾಸ, ವಿವಿಧತೆಗಳನ್ನು ಗುರುತಿಸ ಬಹುದಾಗಿದೆ.
ಊರುಗೋಲು ತಯಾರಿಗೆ ಬೇರೆ ಬೇರೆ ವಿಧದ, ಗಟ್ಟಿಯಾದ, ತುಂಬಾ ಸಮಯ ಬಾಳಿಕೆ ಬರುವ ಮರಗಳನ್ನು ಬಳಸುತ್ತಾರೆ. ಮುಖ್ಯವಾಗಿ ಮಂದಾರ, ನಾಗರ ಬೆತ್ತ, ಕೆಲವೊಂದು ಜಾತಿಯ ಬಿದಿರುಗಳು, ಪೇರಳೆ, ತೇಗ, ಸಾಗುವಾನಿ, ಕುಂಟಾಲ ಇತ್ಯಾದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ