ಸಮೀಪದ ಅಜ್ಜಿಮುಟ್ಟ ಗ್ರಾಮದ ಬಾಳೆಯಡ ಕುಟುಂಬಕ್ಕೆ ಸೇರಿದ ಇವರ ನಿವಾಸ ಕಾವೇರಿ ನದಿ ತೀರದಲ್ಲಿ ಇರುವ ಕಾರಣದಿಂದಲೊ ಏನೋ ಈಜು ಬಾಲ್ಯದಿಂದಲೇ ಕರಗತ. ಈಜು ಎಂದರೆ ಇವರಿಗೆ ಬಲು ಅಚ್ಚುಮೆಚ್ಚು. ಮೀನಿನಷ್ಟೇ ಸಲೀಸು ಕೂಡ.
ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ಪ್ರವಾಹದಲ್ಲಿ ಆಚೆ-ಈಚೆ ನದಿ ದಾಟುವ ಸಾಹಸಿ. ಆಳದ ನೀರಿನಲ್ಲಿ ಹಲವು ನಿಮಿಷಗಳವರೆಗೆ ಮುಳುಗಿ ಮೇಲೇಳುವ ಎದೆಗಾರಿಕೆಯೂ ಇವರಿಗೆ ರೂಢಿಯಾಗಿದೆ. ಇವರು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳಲು ಕಾರಣವಾಗಿದ್ದು ಸಹ ಈ ಈಜುವಿಕೆ ಮತ್ತು ಮುಳುಗುವಿಕೆಯೆ. ಬೇಸಗೆಯಾಗಲಿ, ಮಳೆಗಾಲವಾಗಲಿ, ಚಳಿಯಾಗಲಿ ನಾಪೋಕ್ಲು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನದಿ, ಕೆರೆಗಳಲ್ಲಿ ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಸಂಭವಿಸಿದರೆ, ಶವ ಮೇಲೆತ್ತುವ ಕಾಯಕಕ್ಕೆ ಬಾಳೆಯಡ ಪ್ರಕಾಶ್ ಹಾಜರು. ಯಾವುದೇ ಫಲಾಪೇಕ್ಷೆ ಪಡದೆ ನಿಷ್ಕಳಂಕ ಮನೋಭಾವದಿಂದ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಅವರಿಗೆ ಈಗ 43ರ ಹರೆಯ. ತಮ್ಮ 18ನೇ ವರ್ಷದಿಂದ 43 ವರ್ಷ ಪ್ರಾಯದವರೆಗಿನ ಅವಧಿಯಲ್ಲಿ ಅವರು ನದಿ, ಕೆರೆ ಹಾಗೂ ಬಾವಿಗಳಿಂದ ಮೇಲೆತ್ತಿರುವ ಒಟ್ಟು ಶವಗಳ ಸಂಖ್ಯೆ 42. ಇವರಿಗೆ ಶವ ಮೇಲೆತ್ತುವ ಕೆಲಸವೆಂದರೆ ನೀರು ಕುಡಿದಷ್ಟೇ ಸಲೀಸು. ಯಾವುದೇ ಅಂಜಿಕೆಯಿಲ್ಲದೆ ಈ ಕೆಲಸದಲ್ಲಿ ತನ್ನನ್ನು ಪೂರ್ತಿಯಾಗಿ ತೊಡಗಿಸಿಕೊಂಡಿರುವ ತೃಪ್ತಿ ಅವರದು.
ಈ ಕುರಿತು ಅವರ ಅಭಿಪ್ರಾಯ ಬಯಸಿದಾಗ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡ ಅವರು, ನದಿ, ಕೆರೆ ಹಾಗೂ ಬಾವಿಗೆ ಬಿದ್ದು ಸಂಭವಿಸುವ ಆಕಸ್ಮಿಕ ಅಥವಾ ಆತ್ಮಹತ್ಯೆಯಂತಹ ಸಾವು ಪ್ರಕರಣಗಳಲ್ಲಿ ಅವರ ಕುಟುಂಬಗಳು ನೋವು, ಆಘಾತ ಅನುಭವಿಸುತ್ತಿದ್ದರೆ, ಅವರ ಕುಟುಂಬ ವರ್ಗದವರಿಗೆ ಯಾವ ಸಾಂತ್ವನವೂ ಸಮಾಧಾನ ನೀಡದು. ಆಗ ನೀಡುವ ನೆರವಷ್ಟೆ ಕೊಂಚ ಸಮಾಧಾನ ತಂದೀತು. ನೀರಿನಿಂದೆತ್ತಿ ಶವವನ್ನು ದಡ ಸೇರಿಸಿ ನೆರವಾಗಲು ತಮಗೆ ಯಾವ ಹಿಂಜರಿಕೆ ಇಲ್ಲ; ಇದಕ್ಕಾಗಿ ಯಾವ ನಿರೀಕ್ಷೆಯನ್ನೂ ಇರಿಸಿಕೊಳ್ಳುತ್ತಿಲ್ಲ ಎನ್ನುತ್ತಾರವರು. ಅದನ್ನು ಯಾವ ಅಂಜಿಕೆ ಇಲ್ಲದೆ ನಿರ್ವಹಿಸುತ್ತಿರುವುದಾಗಿ ಪತ್ರಿಕೆಯೊಂದಿಗೆ ಹೇಳಿಕೊಂಡ ಅವರು, ನೊಂದವರಿಗೆ ನೆರವು ನೀಡಿದ ತೃಪ್ತಿ ಮಾತ್ರ ನನ್ನದು ಎನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಶವ ತೆಗೆಯಲು ಎರಡರಿಂದ ಮೂರು ಗಂಟೆಗಳವರೆಗೂ ನದಿ, ಕೆರೆಗಳಲ್ಲಿ ತಡಕಾಡಿದ ಪ್ರಸಂಗಗಳನ್ನು ಸ್ಮರಿಸಿಕೊಳ್ಳುವ ಅವರು, ಆದರೆ ಎಲ್ಲ ಪ್ರಕರಣಗಳಲ್ಲೂ ಯಶಸ್ವಿಯಾಗಿರುವ ಹೆಚ್ಚುಗಾರಿಕೆ ತಮ್ಮದು ಎನ್ನುತ್ತಾರೆ.
ಬಾಳೆಯಡ ದಿವಂಗತ ಲಕ್ಷ್ಮಣ ಹಾಗೂ ಚೋಂದವ್ವ ದಂಪತಿಯ ಪುತ್ರರಾಗಿರುವ ಪ್ರಕಾಶ್, ಸಣ್ಣ ಕಾಫಿ ಬೆಳೆಗಾರರೂ ಹೌದು. ಮಳೆಗಾಲದಲ್ಲಿ ಕೃಷಿಗೆ ಅನುಕೂಲವಾಗುವ ಕೊಡೆಯಾಗಿ ಬಳಕೆಯಾಗುವ ಗೊರಗು ಹೆಣೆಯುವಿಕೆಯನ್ನೂ ಬಲ್ಲರು. ಬಡಗಿ ಕಲೆಯಲ್ಲೂ ಪರಿಣತಿ ಇರುವ ಇವರು ಕೃಷಿ ಪರಿಕರಗಳನ್ನು ಸ್ವತಃ ತಯಾರಿಸಿಕೊಳ್ಳಬಲ್ಲರು. ತಮ್ಮ ಪತ್ನಿಯ ಪ್ರೋತ್ಸಾಹವೂ ತಮ್ಮಲ್ಲೆ ಕಾಯಕದ ಬೆನ್ನಿಗಿದೆ ಎನ್ನುವ ಇವರದು ಪತ್ನಿ, ಇಬ್ಬರು ಪುತ್ರರ ಪುಟ್ಟ ಕುಟುಂಬ. ಪ್ರಸ್ತುತ 17 ಮತ್ತು 16ರ ಹರೆಯದ ಮಕ್ಕಳಿಬ್ಬರಿಗೂ 4 ವರ್ಷ ವಾಗಿದ್ದಾಗಲೇ ಈಜು ಕಲಿಸಿದ್ದಾರೆ. ಪ್ರಶಸ್ತಿ- ಗೌರವ ಇವರ ಸಾಹಸ, ಸಾಧನೆ ಮತ್ತು ಧೈರ್ಯಕ್ಕೆ ಅವರಿಗೆ ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಲಭಿಸಿದೆ. ವಿರಾಜಪೇಟೆ ಕೊಡವ ಸಮಾಜವೂ ಇವರ ಸಾಧನೆಯನ್ನು ಗುರುತಿಸಿ ಸಮ್ಮಾನಿಸಿದೆ.